ETV Bharat / state

ಶಿವಾಜಿನಗರ ಗೆದ್ರೆ, ನೂರಕ್ಕೆ ನೂರು ಬಿಜೆಪಿಗೇ ಮತ್ತೆ ಅಧಿಕಾರ: ಬೂತ್ ವಿಜಯ್ ಅಭಿಯಾನದಲ್ಲಿ ಸಿಎಂ

author img

By

Published : Jan 2, 2023, 1:16 PM IST

ಬೆಂಗಳೂರಿನ ಶಿವಾಜಿನಗರ ವಿಧಾನಸಭೆ ಕ್ಷೇತ್ರದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಬೂತ್ ವಿಜಯ್ ಅಭಿಯಾನ
ಬೂತ್ ವಿಜಯ್ ಅಭಿಯಾನ

ಬೆಂಗಳೂರು: ನಮಗೆ ಶಿವಾಜಿನಗರ ಗೆಲುವು ಅಸಾಧ್ಯವಲ್ಲ, ಈಗಾಗಲೇ ಗೆದ್ದಿದ್ದ ಕ್ಷೇತ್ರವೇ ಇದು, ಈಗ ಕೈತಪ್ಪಿದೆ. ಹಾಗಾಗಿ ಶಿವಾಜಿನಗರ ಕ್ಷೇತ್ರದ ವಿಜಯ ಪತಾಕೆಗೆ ಬಂದಿದ್ದೇನೆ, ಶಿವಾಜಿನಗರ ಕ್ಷೇತ್ರದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟು, ಕ್ಷೇತ್ರದ ಅಭಿವೃದ್ಧಿಗೂ ಅತಿ ಹೆಚ್ಚು ಗಮನ ಕೊಡುತ್ತೇನೆ. ಶಿವಾಜಿನಗರದಲ್ಲಿ ಗೆದ್ದರೆ, ರಾಜ್ಯದಲ್ಲಿ ನೂರಕ್ಕೆ ನೂರು ಬಿಜೆಪಿ ಗೆಲ್ಲಲಿದೆ. ಹಾಗಾಗಿ ಈ ಕ್ಷೇತ್ರದ ಗೆಲುವಿಗೆ ಕಂಕಣತೊಡುವಂತೆ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ವಸಂತನಗರದ ರಜಪೂತ್ ಭವನದಲ್ಲಿ ಶಿವಾಜಿನಗರ ಕ್ಷೇತ್ರದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೂತ್ ಮಟ್ಟದ ವಿಜಯ ಸಾಧನೆ ಮಾಡಲು ಈ ಅಭಿಯಾನಕ್ಕೆ ಚಾಲನೆ ಕೊಡುತ್ತಿದ್ದೇವೆ. ಈ ಅಭಿಯಾನದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ನಮಗೆ ಸೂಚನೆ ಕೊಟ್ಟಿದ್ದರು. ಬೂತ್ ವಿಜಯ ಅಭಿಯಾನ ಯಾವ ಕ್ಷೇತ್ರದಲ್ಲಿ ಮಾಡುತ್ತೀರಾ ಅಂತಾ ನನಗೆ ನಮ್ಮ ಅಧ್ಯಕ್ಷರು ಕೇಳಿದ್ದರು. ಅತ್ಯಂತ ಕಷ್ಟ ಇರುವ ಕ್ಷೇತ್ರ ನನಗೆ ಕೊಡಿ, ಶಿವಾಜಿನಗರ ಕ್ಷೇತ್ರ ಕೊಡಿ ಎಂದು ಅಧ್ಯಕ್ಷರಿಗೆ ಹೇಳಿದ್ದೆ. ನಾನು ಶಿವಾಜಿನಗರ ಯಾಕೆ ಆರಿಸಿಕೊಂಡೆ ಅಂದರೆ, ನನಗೂ ಇದರ ಬಗ್ಗೆ ಮಾಹಿತಿ ಇದೆ, ಶಿವಾಜಿನಗರ ಒಂದು ಕಾಲದಲ್ಲಿ ಬಿಜೆಪಿ ಕ್ಷೇತ್ರ. ಇಲ್ಲಿ ಶಿವಾಜಿನಗರ ನಿರ್ಮಲ ಕುಮಾರ್ ಸುರಾನಾ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗೆದ್ದಿದ್ದರು. ಮುಂದೆ ನೂರಕ್ಕೂ ನೂರು ನಾವು ಗೆಲ್ಲುತ್ತೇವೆ. ಆದರೆ ನಾವು ಸ್ವಲ್ಪ ಕಷ್ಟ ಪಡಬೇಕು‌. ನಾವು ಗೆಲ್ಲಬೇಕು ಅಂದರೆ ಬೂತ್ ಸಶಕ್ತ ಮಾಡಬೇಕು, ಬೂತ್ ಗಟ್ಟಿ ಆದರೆ ಕ್ಷೇತ್ರ ಶಕ್ತಿ ಯಾಗಿ, ರಾಜ್ಯ ಗೆಲ್ಲುತ್ತದೆ. ಶಿವಾಜಿನಗರದಲ್ಲಿ ಕಳೆದ ಬಾರಿ 13 ಸಾವಿರ ಮತಗಳ ಅಂತರದಿಂದ ಸೋತಿದ್ದೇವೆ. ಈ ಬಾರಿ 13 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.

ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆ ಮತ್ತು ಯುವಕರು ಮೋರ್ಚಾಗಳನ್ನು ಸ್ಥಾಪನೆ ಮಾಡಿ ಕೆಲಸ ಮಾಡಬೇಕು. ಪೇಜ್ ಸಮಿತಿಗಳು ಇಲ್ಲ, ಪೇಜ್ ಪ್ರಮುಖರು ಇದ್ದಾರೆ, ಪ್ರತಿಯೊಬ್ಬರ ಮನೆಗೆ ಭೇಟಿ ಕೊಟ್ಟು, ಕೇಂದ್ರ ರಾಜ್ಯ ಸರ್ಕಾರದ ಯೋಜನೆ ಗಳು ಹಾಗೂ ಕಾಂಗ್ರೆಸ್​​ನ ಜನ ವಿರೋಧಿ ಬಗ್ಗೆ ತಿಳಿಸಬೇಕು. ಈ ನಾಲ್ಕು ತಿಂಗಳಲ್ಲಿ ಕನಿಷ್ಠ ಐದು ಬಾರಿ ಮನೆ ಮನೆಗೆ ಹೋಗಬೇಕು. ಆ ನಂತರ ಕೊನೆಯಲ್ಲಿ ಹೋಗಿ ಮತ ಕೇಳಬೇಕು. ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ನಗರ ಅಭಿವೃದ್ಧಿ ಆಗಿದ್ದು ಬಿಜೆಪಿ ಸರ್ಕಾರದಿಂದ. ಆದರೆ ಇದನ್ನು ನಾವು ಮಾಡಿದ್ದು ಅಂತಾ ಇಲ್ಲಿನ ಶಾಸಕರು ಹೇಳ್ತಾರೆ ಎಂದು ಪರೋಕ್ಷವಾಗಿ ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್ ವಿರುದ್ದ ಕಿಡಿಕಾರಿದ ಸಿಎಂ, ಇವರ ಕಾಲದಲ್ಲಿ ನೆನೆಗುದಿಗೆ ಬಿದ್ದ ಎಲ್ಲ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ ಎಂದು ಟಾಂಗ್ ಕೊಟ್ಟರು.

ನಾವು ಮಾಡಿದ ಕಾರ್ಯಗಳನ್ನು ಪಟ್ಟಿ ಮಾಡಿಕೊಡ್ತೀವಿ. ಅದನ್ನು ಜನರಿಗೆ ತಿಳಿಸಬೇಕು. ಕಾಂಗ್ರೆಸ್​​ನವರಿಗೆ ಹೇಳೋಕೆ ಬೇರೆ ಏನೂ ಇಲ್ಲ. ಮೊಸರಲ್ಲಿ ಕಲ್ಲು ಹುಡುಕೋದು ಬಿಟ್ಟರೆ, ಬೇರೆ ಏನೂ ಇಲ್ಲ, ಹಿಂದೆ ಅವರು ಏನು ಮಾಡಿಲ್ಲ, ಅದಕ್ಕಾಗಿ ಜನರು ಅವರನ್ನು ತಿರಸ್ಕಾರ ಮಾಡಿದ್ದಾರೆ, ಮುಂದೆಯೂ ಅವರನ್ನು ಜನರು ತಿರಸ್ಕಾರ ಮಾಡ್ತಾರೆ. ಬಿಜೆಪಿ ಕೇವಲ ಅಧಿಕಾರಕ್ಕಾಗಿ ಮಾತ್ರ ರಾಜಕಾರಣ ಮಾಡುತ್ತಿಲ್ಲ, ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ರಾಜಕಾರಣ ಮಾಡುತ್ತಿದೆ. ಜನರ ಸುತ್ತಲೂ ಅಭಿವೃದ್ಧಿ ಆಗಬೇಕೇ ಹೊರತು, ಅಭಿವೃದ್ಧಿ ಸುತ್ತ ಜನರು ಓಡಾಡಬಾರದು. ಕಾಂಗ್ರೆಸ್ ಯಾವತ್ತಿಗೂ ಪವರ್ ಪಾಲಿಟಿಕ್ಸ್ ಮಾಡಿಕೊಂಡು ಬಂದಿದೆ, ಜನರನ್ನು ಜಾತಿ, ಧರ್ಮದಿಂದ ಒಡೆಯುವ ಕೆಲಸದಿಂದ ಅಧಿಕಾರಕ್ಕೆ ಬರೋದು. ಇಬ್ಬರ ನಡುವೆ ಜಗಳದ ಬೆಂಕಿ ಹಚ್ಚಿ ಕೋತಿ ತಾನು ತಿಂತು ಅನ್ನೋ ಮಾತಿದೆಯಲ್ಲ ಹಾಗೇ ಕಾಂಗ್ರೆಸ್​​ನವರ ಬುದ್ಧಿಯಾಗಿದೆ. ಅವರಿಗೆ ದೇಶ ರಾಜ್ಯದ ಬಗ್ಗೆ ಏನೂ ಗೊತ್ತೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕಾಗಿ ಹೋರಾಟ ಮಾಡ್ತಿದೆ. ಆದರೆ ಬಿಜೆಪಿ ಭಾರತದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿದೆ. ಇವತ್ತು ಮುಳುಗುವ ಹಡಗು ಆಗುತ್ತಿದೆ. ಅವರು ಜನರ ಬಗ್ಗೆ ಯಾವತ್ತಿಗೂ ಯೋಚನೆ ಮಾಡಿಲ್ಲ. ಬಿಜೆಪಿ ಯಾವತ್ತಿಗೂ ಅಸ್ತಿತ್ವದ ಬಗ್ಗೆ ಯೋಚನೆ ಮಾಡಿಲ್ಲ. ನಾವು ಜನರ ರಾಜಕಾರಣ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: 'ಚುನಾವಣೆ ಗೆಲ್ಲುವ ಬಗ್ಗೆ ಬೇಡಿಕೊಳ್ಳಲ್ಲ, ಜನರೇ ದೇವರು': ವೈಕುಂಠ ಏಕಾದಶಿಗೆ ಸಿಎಂ ದೇಗುಲ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.