ETV Bharat / state

ಉಮೇಶ್ ಕತ್ತಿ ವರ್ಣರಂಜಿತ ರಾಜಕಾರಣಿ: ಸಿಎಂ ಬಸವರಾಜ ಬೊಮ್ಮಾಯಿ ಬಣ್ಣನೆ

author img

By

Published : Sep 12, 2022, 2:38 PM IST

ವಿಧಾನಸಭೆಯಲ್ಲಿ ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಿಸಿದ ಸಂತಾಪ ನಿರ್ಣಯ ಬೆಂಬಲಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

CM Basavaraja Bommayi
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳನ್ನು ಬದಲಾಯಿಸಿದರೂ ಇತ್ತಿಚೆಗೆ ನಿಧನರಾದ ಸಚಿವರಾಗಿದ್ದ ಉಮೇಶ್‍ ಕತ್ತಿ ಅವರು, ಅದರಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ಅವರೊಬ್ಬ ವರ್ಣರಂಜಿತ ರಾಜಕಾರಣಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಡಿಸಿದ ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಕ್ಕರೆ, ಲೋಕೋಪಯೋಗಿ ಬಂಧಿಖಾನೆ, ಕೃಷಿ, ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಯಾವುದೇ ಪಕ್ಷದಲ್ಲಿದ್ದರೂ ಸ್ನೇಹಕ್ಕೆ ಕೊರತೆ ಇರಲಿಲ್ಲ. ಎಲ್ಲರನ್ನೂ ಹಾಸ್ಯಮಯದಿಂದಲೇ ಮಾತನಾಡಿಸುತ್ತಿದ್ದರು. ಹೀಗಾಗಿ ಅವರೊಬ್ಬ ವರ್ಣರಂಜಿತ ರಾಜಕಾರಣಿ ಎಂದು ಹೇಳಿದರು.

ತಮಗೆ ರಾಜಕೀಯ ಜನ್ಮ ನೀಡಿದ ಹುಕ್ಕೇರಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿದ್ದು ಸಾಮಾನ್ಯ ಮಾತಲ್ಲ. ಇಂದು ಒಮ್ಮೆ ಪಕ್ಷ ಬದಲಿಸಿದರೆ, ಮತದಾರರಿಗೆ ಯಾವ ಗುರುತಿಗೆ ಮತ ಹಾಕಬೇಕು ಎಂಬ ಗೊಂದಲವಾಗುತ್ತದೆ. ಕತ್ತಿ ಅವರು ಎಷ್ಟೇ ಪಕ್ಷ ಬದಲಿಸಿದರೂ ಮತದಾರರು ಮಾತ್ರ ಅವರ ಕೈ ಬಿಡಲಿಲ್ಲ. ಇದು ಅವರ ಜನಪ್ರಿಯತೆಗೆ ಸಾಕ್ಷಿ ಎಂದರು.

ಗೋದಿ- ಜೋಳ ವಿತರಣೆ ಮಾಡುವ ಪ್ರಸ್ತಾವ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ನಂತರ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಜತೆ ರಾಗಿ, ಗೋಧಿ, ಜೋಳವನ್ನು ವಿತರಣೆ ಮಾಡಬೇಕು ಎಂಬ ಪ್ರಸ್ತಾವ ಇಟ್ಟಿದ್ದರು. ಇದಕ್ಕೆ ನಾವು ಸಮ್ಮತಿಯನ್ನು ಕೊಟ್ಟಿದ್ದೇವೆ. ಹುಕ್ಕೇರಿಯಲ್ಲಿ ವಿದ್ಯುತ್‍ ವಿತರಣಾ ಘಟಕವನ್ನು ಪ್ರಾರಂಭಿಸಿದ್ದರು. ಮಹಾರಾಷ್ಟ್ರ ಮತ್ತು ಗುಜರಾತ್‍ ಹೊರತುಪಡಿಸಿದರೆ, ಇದನ್ನು ಮೊದಲು ಪ್ರಾರಂಭಿಸಿದ್ದು, ಕತ್ತಿ ಅವರು. ಕ್ಷೇತ್ರದ ಜನತೆಗೆ ನಿರ್ಧಿಷ್ಟ ದರದಲ್ಲಿ ವಿದ್ಯುತ್‍ ವಿತರಣೆ ಮಾಡುವ ವ್ಯವಸ್ಥೆ ಜಾರಿಗೆ ತಂದಿದ್ದರು ಎಂದು ಸ್ಮರಿಸಿದರು.

ಉಮೇಶ್ ಕತ್ತಿ ಅವರಿಗೆ ಶ್ರೀಮಂತಿಕೆ ಇದ್ದರೂ ಅಹಂಕಾರ ಪಟ್ಟವರಲ್ಲ. ಜನರೊಂದಿಗೆ ಸದಾ ಬೆರೆಯುವ ಗುಣ ಉಳ್ಳವರಾಗಿದ್ದರು. ಅದರಲ್ಲೂ ಕ್ಷೇತ್ರದ ಜನರ ಬಗ್ಗೆ ಅಪಾರವಾದ ಪ್ರೀತಿ ವಿಶ್ವಾಸ ಹೊಂದಿದ್ದರು. ಸ್ವಾಭಿಮಾನಕ್ಕೆ ಧಕ್ಕೆಯಾದರೆ, ಯಾವ ಮುಲಾಜಿಗೂ ಒಳಗಾಗದೇ, ಸಿಡಿದೇಳುವ ಗುಣವಿತ್ತು ಎಂದು ಕೊಂಡಾಡಿದರು.

ಕತ್ತಿ ಅವರ ಕೋರಿಕೆಯಂತೆ ಹಿಡಕಲ್‍ ಜಲಾಶಯದ ಬಳಿ ಉದ್ಯಾನವನ ನಿರ್ಮಾಣಕ್ಕೆ ಸಂಪುಟದ ಅನುಮೋದನೆ ದೊರಕಿತ್ತು. ಇದಕ್ಕೆ ಅವರು ಸಂತಸವನ್ನು ವ್ಯಕ್ತಪಡಿಸಿದ್ದರು. ಎಲ್ಲವೂ ಸರಿ ಇದಿದ್ದರೆ, ಇಂದು ಸದನದ ಮೊದಲ ಸಾಲಿನಲ್ಲಿ ಕೂರಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಉಳಿದಂತೆ ಮಾಜಿ ಸಚಿವರಾದ ಎಂ.ರಘುಪತಿ, ಪ್ರಭಾಕರ್ ರಾಣೆ, ಸಿ.ಯಾದವರಾವ್‍, ಮಾಜಿ ಶಾಸಕರಾದ ಕೆ.ಕೆಂಪೇಗೌಡ, ಜಿ.ವಿ.ಶ್ರೀರಾಮರೆಡ್ಡಿ, ಸಿ.ಎಂ.ದೇಸಾಯಿ, ಎ.ಜಿ.ಕೊಡ್ಗಿ, ಈಶಣ್ಣ, ಗುಳಗಣ್ಣನವರ ಹಾಗೂ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಸೇವೆಯನ್ನು ಸ್ಮರಿಸಿ ಗುಣಗಾನ ಮಾಡಿದರು.

ಇದನ್ನೂ ಓದಿ: 'ನನ್ನ ಸಿ.ಟಿ.ರವಿ ಲೂಟಿ ರವಿ ಅಂದರೆ ನಾನು ಸಿದ್ದ ಪೆದ್ದ ಅನ್ನಬಹುದಲ್ವಾ?'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.