ETV Bharat / state

ಬಜೆಟ್‌ನಿಂದ ಸರ್ಕಾರಿ ನೌಕರರ ನಿರೀಕ್ಷೆಗಳೇನು?, ಘೋಷಣೆಯಾಗುತ್ತಾ ಅಧಿಕಾರಿಗಳ ವೇತನ ಸಮಿತಿ?

author img

By

Published : Mar 3, 2022, 8:26 PM IST

ರಾಜ್ಯ ಸರ್ಕಾರಿ ನೌಕರರ ಸಂಘವು 1920ರಲ್ಲಿ ಸ್ಥಾಪನೆಯಾಗಿ ನೂರು ವರ್ಷಗಳ ಇತಿಹಾಸದ ಹಿನ್ನೆಲೆ ಹೊಂದಿದ್ದು, 5.20 ಲಕ್ಷ ನೌಕರರಿದ್ದಾರೆ. ಅವರ ಕುಟುಂಬದಲ್ಲಿ ಸುಮಾರು 30 ಲಕ್ಷ ಸದಸ್ಯರಿದ್ದು, ಬಹುದೊಡ್ಡ ಮತಬ್ಯಾಂಕ್ ಕೂಡಾ ಆಗಿದ್ದಾರೆ. ಹಾಗಾಗಿ, ಯಾವುದೇ ಸರ್ಕಾರ ಬಂದರೂ‌ ಚುನಾವಣೆ ವೇಳೆ ಸರ್ಕಾರಿ ನೌಕರರನ್ನು ಕಡೆಗಣಿಸುವಂತಿಲ್ಲ.

cm-basavaraja-bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜನಪ್ರಿಯ ಬಜೆಟ್ ಮಂಡಿಸಲು ಹೊರಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರಿ ನೌಕರರ ಬೇಡಿಕೆ ಹೊಸ ಸವಾಲು ತಂದೊಡ್ಡಿದ್ದು, ಬೇಡಿಕೆ ಕಡೆಗಣಿಸಲೂ ಆಗದೆ ಪರಿಗಣಿಸಲೂ ಆಗದ ಸಂದಿಗ್ಧ ಸ್ಥಿತಿ ಎದುರಿಸುತ್ತಿದ್ದಾರೆ.

ಸರ್ಕಾರಿ ನೌಕರರ ಮತಬುಟ್ಟಿ: ಮುಂಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ಕಾರಿ ನೌಕರರ ಮತಬುಟ್ಟಿ ಭದ್ರಪಡಿಸಿಕೊಳ್ಳಬೇಕಾದಲ್ಲಿ 7ನೇ ವೇತನ ಆಯೋಗ ಜಾರಿ ಮಾಡಬೇಕಿದ್ದು, ಎಲ್ಲರೂ ಈಗ ಬೊಮ್ಮಾಯಿ ಬಜೆಟ್ ಎದುರು ನೋಡುವಂತೆ ಮಾಡಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು “ಅಧಿಕಾರಿಗಳ ವೇತನ ಸಮಿತಿ” ರಚಿಸುವ ಬಗ್ಗೆ ನಾಳೆ ಮಂಡಿಸಲಿರುವ ಚೊಚ್ಚಲ ಬಜೆಟ್​ನಲ್ಲಿ ಘೋಷಣೆ ಹೊರಬೀಳಲಿದೆ ಎನ್ನುವ ಮಾತುಗಳು ಸಿಎಂ ಕಚೇರಿ ಪಡಸಾಲೆಯಿಂದಲೇ ಕೇಳಿಬರುತ್ತಿದೆ.

ರಾಜ್ಯದಲ್ಲಿದ್ದಾರೆ 5.20 ಲಕ್ಷ ಸರ್ಕಾರಿ ನೌಕರರು: ರಾಜ್ಯ ಸರ್ಕಾರಿ ನೌಕರರ ಸಂಘವು 1920ರಲ್ಲಿ ಸ್ಥಾಪನೆಯಾಗಿ ನೂರು ವರ್ಷಗಳ ಇತಿಹಾಸದ ಹಿನ್ನೆಲೆ ಹೊಂದಿದ್ದು, 5.20 ಲಕ್ಷ ನೌಕರರಿದ್ದಾರೆ. ಅವರ ಕುಟುಂಬದಲ್ಲಿ ಸುಮಾರು 30 ಲಕ್ಷ ಸದಸ್ಯರು ಇದ್ದು, ಬಹುದೊಡ್ಡ ಮತಬ್ಯಾಂಕ್ ಆಗಿದ್ದಾರೆ. ಯಾವುದೇ ಸರ್ಕಾರ ಬಂದರೂ‌ ಚುನಾವಣೆ ವೇಳೆ ಸರ್ಕಾರಿ ನೌಕರರನ್ನು ಕಡೆಗಣಿಸುವಂತಿಲ್ಲ.

ಮುಂದಿನ ವರ್ಷ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ನಾಳಿನ ಬಜೆಟ್ ಮಾತ್ರ ಜನರನ್ನು ತಲುಪಬಲ್ಲ ಬಜೆಟ್ ಆಗಿದೆ. ಹಾಗಾಗಿ, ಜನಪರ ಯೋಜನೆಗಳು, ಸರ್ಕಾರಿ ನೌಕರರ ಬೇಡಿಕೆಗಳನ್ನು ಈ ಬಜೆಟ್​ನಲ್ಲೇ ಘೋಷಣೆ ಮಾಡಬೇಕಾಗಿದೆ. ಇದು ಚೊಚ್ಚಲ ಬಜೆಟ್ ಮಂಡಿಸಹೊರಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹುದೊಡ್ಡ ಸವಾಲಾಗಿದೆ.

ಜನಪರ ಯೋಜನೆ ನಾಗರಿಕರಿಗೆ ತಲುಪಿಸುವ ಕಾಯಕ: ರಾಜ್ಯದ ಎಲ್ಲಾ ಸಮುದಾಯದ ಏಳಿಗೆಗೆ ಸರ್ವಾಂಗೀಣ ಅಭಿವೃದ್ಧಿ ಹಾಗೂ 75ನೇ ಅಮೃತ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಘೋಷಣೆ ಮಾಡಿರುವ “ಅಮೃತ ಸಾಲ ಸೌಲಭ್ಯ', “ಇ-ಶ್ರಮ”, “ಅಮೃತ ಕ್ರೀಡಾ ದತ್ತು ಯೋಜನೆ”, “ಅಮೃತ ಕೌಶಲ್ಯ ತರಬೇತಿ ಯೋಜನೆ”, “ಅಮೃತ ನಿರ್ಮಲ ನಗರ ಯೋಜನೆ” ,“ಅಮೃತ ಆರೋಗ್ಯ ಯೋಜನೆ”, “ಅಮೃತ ಗ್ರಾಮೀಣ ವಸತಿ ಯೋಜನೆ”, “ಅಮೃತ ನಗರೋತ್ಥಾನ ಯೋಜನೆ”, “ರೈತವಿದ್ಯಾನಿಧಿ”, “ಅಮೃತ ವಿದ್ಯಾನಿಧಿ”, “ನಮ್ಮ ಶಾಲೆ-ನನ್ನ ಕೊಡುಗೆ” “ಪಶು ಸಂಜೀವಿನಿ” “ಜಿಲ್ಲೆಗೊಂದು ಗೋಶಾಲೆ” ಸೇರಿದಂತೆ ಹಲವಾರು ಜನಪರಯೋಜನೆಗಳನ್ನು ನಾಗರಿಕರಿಗೆ ತಲುಪಿಸುವ ಕಾಯಕವನ್ನು ರಾಜ್ಯ ಸರ್ಕಾರಿ ನೌಕರರು ನಿರ್ವಹಿಸುತ್ತಿದ್ದಾರೆ.

ಹಾಗಾಗಿ, ಸರ್ಕಾರಿ ನೌಕರರ ಬೇಡಿಕೆ ಕಡೆಗಣಿಸಲು ನಿರ್ಲಕ್ಷಿಸಲು ಕಷ್ಟಸಾಧ್ಯ. ಯೋಜನೆಗಳ ಅನುಷ್ಠಾನದ ಮೇಲೆಯೂ ಇದು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಸರ್ಕಾರಿ ನೌಕರರ ಸಂಘದ ಬೇಡಿಕೆಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದ್ದು, ಖುದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸರ್ಕಾರಿ ನೌಕರರ ಸಂಘದ ಬೇಡಿಕೆ ಪರಿಗಣಿಸುವಂತೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾದಲ್ಲಿ ಸರ್ಕಾರಿ ನೌಕರರ ಪಾತ್ರವೂ ಬಹು ಮುಖ್ಯವಾಗಿದೆ. ಹಾಗಾಗಿಯೇ, ಯಡಿಯೂರಪ್ಪ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ. ಒಂದು ವೇಳೆ ಈಗ ಸರ್ಕಾರಿ ನೌಕರರ ಬೇಡಿಕೆ ಕಡೆಗಣಿಸಿದಲ್ಲಿ ಪ್ರತಿಪಕ್ಷಗಳು ಇದರ ಲಾಭ ಪಡೆದುಕೊಳ್ಳಲಿವೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ ಸರ್ಕಾರಿ ನೌಕರರನ್ನು ಸೆಳೆಯಲಿವೆ. ಇದನ್ನು ಅರಿತೇ ಮಾಜಿ ಸಿಎಂ ಬಿಎಸ್​ವೈ ಸಿಎಂ ಬೊಮ್ಮಾಯಿಗೆ ಏಳನೇ ವೇತನ ಆಯೋಗ ಜಾರಿಗೆ ಸಲಹೆ ನೀಡಿದ್ದಾರೆ.

ಇತರ ರಾಜ್ಯಗಳ ವೇತನ ಶ್ರೇಣಿ ಪರಿಗಣನೆ: ರಾಷ್ಟ್ರದಲ್ಲಿರುವ ಒಟ್ಟು 28 ರಾಜ್ಯಗಳಲ್ಲಿ ಈಗಾಗಲೇ 25 ರಾಜ್ಯಗಳಲ್ಲಿ ಕೇಂದ್ರ ಮಾದರಿಯ ವೇತನ ಪದ್ಧತಿ ಜಾರಿಯಲ್ಲಿದೆ.‌ ನೆರೆಯ ತೆಲಂಗಾಣ ರಾಜ್ಯವು ಇತ್ತೀಚೆಗಷ್ಟೇ ಹೊಸ ರಾಜ್ಯವಾಗಿ ರಚನೆಯಾಗಿದ್ದರೂ ಸಹ ತನ್ನ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯ ವೇತನ ಭತ್ಯೆಗಳನ್ನು ಮಂಜೂರು ಮಾಡಿರುತ್ತಾರೆ. ಹಾಗೂ ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ಹೆಚ್ಚಿಸಿದೆ.

ಎಲ್ಲಾ ಅಂಕಿ-ಅಂಶಗಳನ್ನು ಅವಲೋಕಿಸಿದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಭತ್ಯೆಗಳನ್ನು ಮಂಜೂರು ಮಾಡಬೇಕು ಎನ್ನುವುದು ಸರ್ಕಾರಿ ನೌಕರರ ಒತ್ತಾಯವಾಗಿದೆ. ಈ ಒತ್ತಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಣಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಹುತೇಕ ನಾಳಿನ ಬಜೆಟ್​ನಲ್ಲಿ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಬಂಪರ್ ಘೋಷಣೆಯಾದರೂ ಅಚ್ಚರಿಪಡಬೇಕಿಲ್ಲ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಪ್ರತಿಕ್ರಿಯೆ: ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಹಲವಾರು ವರ್ಷಗಳಿಂದ ಕೇಂದ್ರ ಮಾದರಿ ವೇತನವನ್ನು ನೀಡಲು ಅಂದಿನ ಸರ್ಕಾರಗಳಿಗೆ ಆಗ್ರಹ ಮಾಡುತ್ತಾ ಬಂದಿದ್ದರೂ ಸಹ ವೇತನ ಆಯೋಗ/ ಸಮಿತಿಗಳು ಅನುಸರಿಸಿದ ತಮ್ಮದೇ ಆದ ಸಿದ್ಧಾಂತದಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಶಿಫಾರಸ್ಸು ಮಾಡಿಲ್ಲ.

ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿದ್ದು, ಸರ್ಕಾರಿ ನೌಕರರು ಒತ್ತಡಕ್ಕೆ ಸಿಲುಕಿರುವುದರ ಜೊತೆ ಅಪಾರ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದರೂ ಸಹ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರದ ಸರಿಸಮಾನವಾದ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿದಲ್ಲಿ ವಾಸ್ತವಿಕವಾಗಿ ಅಂದಾಜು ರೂ. 10. 656 ಕೋಟಿ ಹೆಚ್ಚುವರಿಯಾಗಿ ವೆಚ್ಚವಾಗಲಿದೆ.

'ಬಜೆಟ್​ನಲ್ಲಿ ನಮ್ಮ ಬೇಡಿಕೆ ಈಡೇರಲಿದೆ': ಹಾಲಿ ಖಾಲಿಯಿರುವ ಹುದ್ದೆಗಳಿಂದ ಸರ್ಕಾರಕ್ಕೆ ಅಂದಾಜು ರೂ. 8,531 ಕೋಟಿ ವಾರ್ಷಿಕ ಉಳಿತಾಯವಾಗುತ್ತಿದೆ. ಇದರಿಂದಾಗಿ ಅಂದಾಜು ರೂ. 2,125 ಕೋಟಿ ಮಾತ್ರ ಹೆಚ್ಚುವರಿಯಾಗಿ ವೆಚ್ಚ ಆಗಲಿದೆ. ಹಾಗಾಗಿ, ಬಜೆಟ್​ನಲ್ಲಿ ನಮ್ಮ ಬೇಡಿಕೆ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಮ್ಮ ಮನೆಗೆ ಮುತ್ತಿಗೆ ಬದಲು ಕಾಂಗ್ರೆಸ್​ನವರು ತಮ್ಮ ನಾಯಕರ ಮನೆ ಮುಂದೆ ಸಂತಾಪ ಪಾದಯಾತ್ರೆ ಮಾಡಲಿ: ಬಿ. ವೈ. ರಾಘವೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.