ETV Bharat / state

ನಾವೇನು ರಾಜಕಾರಣ ಮಾಡುತ್ತೇವೆಂದು ನಿಮಗೆ ಹೇಳುವ ಅಗತ್ಯವಿಲ್ಲ: ಮಾಧ್ಯಮಗಳ ಮೇಲೆ ಸಿಎಂ ಗರಂ

author img

By

Published : Dec 27, 2021, 11:37 AM IST

Updated : Dec 27, 2021, 12:10 PM IST

ಸಂಪುಟ ಪುನಾರಚನೆ ಮಾಧ್ಯಮಗಳ ಸೃಷ್ಟಿ. ಪುನಾರಚನೆ ಆಗುವ ವಿಚಾರ ನಮಗೆ ಗೊತ್ತಿಲ್ಲ, ನಾವು ಪಕ್ಷದಲ್ಲಿ ಏನು ಚರ್ಚೆ ಮಾಡುತ್ತೇವೆ, ಏನು ರಾಜಕಾರಣ ಮಾಡುತ್ತೇವೆ ಅಂತ ನಿಮಗೆ ಹೇಳುವ ಅಗತ್ಯವಿಲ್ಲ. ಯಾವ ಸಂದರ್ಭದಲ್ಲಿ ಏನು ಚರ್ಚೆ ಮಾಡಬೇಕೋ ಮಾಡುತ್ತೇವೆ, ಅದು ನಮ್ಮ ಪಕ್ಷದ ಆಂತರಿಕ ವಿಚಾರ ಎಂದು ಸಿಎಂ ಬೊಮ್ಮಾಯಿ ಗರಂ ಆದರು.

cm basavaraj bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪಕ್ಷದಲ್ಲಿ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು, ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇದೆ. ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಸಾಮೂಹಿಕವಾಗಿ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಆರ್‌ಟಿ ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ರಾಜ್ಯ ಬಿಜೆಪಿಯ ವಿಚಾರಗಳೆಲ್ಲವನ್ನೂ ಪಕ್ಷದ ಹೈಕಮಾಂಡ್ ಗಮನಿಸುತ್ತಿದೆ. ಏನೆಲ್ಲ ಚರ್ಚೆ ಆಗುತ್ತಿದೆಯೋ‌ ಎಲ್ಲವನ್ನೂ ಹೈಕಮಾಂಡ್ ನೋಡುತ್ತಿದೆ, ಯಾವುದೇ ತೊಂದರೆ ಇಲ್ಲ. ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಕೊಡುತ್ತೇವೆ. ನಮ್ಮ ಕೆಲಸಗಳನ್ನು ಮುಂದಿಟ್ಟುಕೊಂಡು ನಾವು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು‌.

ಮಾಧ್ಯಮಗಳ ಮೇಲೆ ಸಿಎಂ‌ ಗರಂ:

ಸಚಿವ ಸಂಪುಟ ವಿಸ್ತರಣೆ ಕುರಿತು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಚರ್ಚಿಸುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಗರಂ ಆದ ಸಿಎಂ, ಸಂಪುಟ ಪುನಾರಚನೆ ಮಾಧ್ಯಮ ಸೃಷ್ಟಿಯಾಗಿದೆ. ಪುನಾರಚನೆ ಆಗುವ ವಿಚಾರ ನಮಗೆ ಗೊತ್ತಿಲ್ಲ, ನಾವು ಪಕ್ಷದಲ್ಲಿ ಏನು ಚರ್ಚೆ ಮಾಡುತ್ತೇವೆ, ಏನು ರಾಜಕಾರಣ ಮಾಡುತ್ತೇವೆ ಅಂತ ನಿಮಗೆ ಹೇಳುವ ಅಗತ್ಯವಿಲ್ಲ. ಯಾವ ಸಂದರ್ಭದಲ್ಲಿ ಏನು ಚರ್ಚೆ ಮಾಡಬೇಕೋ ಮಾಡುತ್ತೇವೆ, ಅದು ನಮ್ಮ ಪಕ್ಷದ ಆಂತರಿಕ ವಿಚಾರ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಜಾರಕಿಹೊಳಿ ವಿರುದ್ಧ ಕ್ರಮದ ಸುಳಿವು:

ಶಾಸಕ ರಮೇಶ್ ಜಾರಕಿಹೊಳಿ ವಿರುದ್ದದ ಕ್ರಮ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಎಲ್ಲವೂ ಪಕ್ಷದ ಹೈಕಮಾಂಡ್ ಗಮನದಲ್ಲಿದೆ. ತಾವು ಕೇಳುವಂತಹ ಎಲ್ಲವೂ ಕೂಡ ಪಕ್ಷದ ಹೈಕಮಾಂಡ್ ನೋಡುತ್ತಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ‌ ವಿರುದ್ದ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂದರು.

ಹೊಸ ವರ್ಷಕ್ಕೆ ಎಲ್ಲಾದರೂ ಹೋಗಿ ಆದ್ರೆ ನಿಯಮ ಪಾಲಿಸಿ:

ಹೊಸ ವರ್ಷ ಆಚರಣೆಗೆ ಪ್ರವಾಸಿ ತಾಣ, ರೆಸಾರ್ಟ್​​ಗಳಿಗೆ ಮುಗಿಬೀಳುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಂಭ್ರಮಾಚರಣೆಗೆ ಜನರು ಎಲ್ಲಾದರೂ ಹೋಗಲಿ, ಆದರೆ ಕೋವಿಡ್ ನಿಯಮಗಳನ್ನು ಅನುಸರಿಸಲಿ. ಅವರಿಗೆ ಎಲ್ಲಿಗೆ ಬೇಕಾದರೂ ಹೋಗಲು ಸ್ವಾತಂತ್ರ್ಯ ಇದೆ, ಆದರೆ ಕೋವಿಡ್ ನಿಯಮ ಪಾಲಿಸಿ ಸಂಭ್ರಮಾಚರಣೆ ಮಾಡಬೇಕು ಎಂದು ಸಲಹೆ ನೀಡಿದರು.

ಇಂದು ಕೋವಿಡ್ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಇದೆ. ಈ ಯೋಜನೆ ಜಾರಿ ವಿಳಂಬ ಆಗಿಲ್ಲ. ಕೋವಿಡ್ ಮೃತರ ಕುರಿತು ದಾಖಲೆಗಳ ಸಂಗ್ರಹ ನಡೆಯುತ್ತಿತ್ತು. ಎರಡು ತಿಂಗಳು ನೀತಿ ಸಂಹಿತೆ ಇತ್ತು, ಹಾಗಾಗಿ ಸ್ವಲ್ಪ ವಿಳಂಬವಾಗಿದೆ. ಆದರೆ ಈಗಾಗಲೇ ಎಲ್ಲ ಕಡೆ ಜಿಲ್ಲಾಧಿಕಾರಿಗಳು ಪರಿಹಾರ ಕೊಡುತ್ತಿದ್ದಾರೆ, ಇಂದು ಕೇವಲ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ರಾತ್ರಿ ಕರ್ಫ್ಯೂಗೆ ಸಹಕರಿಸಿ:

ರಾತ್ರಿ ಕರ್ಫ್ಯೂಗೆ ವಿರೋಧ ವ್ಯಕ್ತವಾಗುತ್ತಿದೆ, ಆದರೆ ಜನರ ಆರೋಗ್ಯ ದೃಷ್ಟಿಯಿಂದ ಇದನ್ನು ಜಾರಿ ಮಾಡಲಾಗಿದೆ. ನಮಗೂ ಆರ್ಥಿಕ ಚಟುವಟಿಕೆಗಳು ನಡೆಯಲಿ ಅನ್ನೋದಿದೆ, ಆದರೆ ಕೋವಿಡ್ ಕಾರಣದಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಜನ ಸಹಕಾರ ನೀಡಬೇಕು ಎಂದು ಸಿಎಂ ಮನವಿ ಮಾಡಿದರು.

ಹುಬ್ಬಳ್ಳಿಯಲ್ಲಿ ಎರಡು ದಿನಗಳು ಬಿಜೆಪಿ ಸಭೆ:

ಪ್ರತಿ ಎರಡು ತಿಂಗಳಿಗೆ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಮಾಡುತ್ತಿದ್ದೇವೆ. ನಮ್ಮದೊಂದೇ ಪಕ್ಷ ನಿರಂತರವಾಗಿ ಕಾರ್ಯಕಾರಿಣಿ, ಪಕ್ಷ ಸಂಘಟನೆ ಸಭೆ ಮಾಡೋದು. ಎರಡು ತಿಂಗಳಿಗೊಮ್ಮೆ ಹಲವು ವಿಚಾರ ಚರ್ಚೆ ಮಾಡಿ ಕೆಲವು ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಧಾರವಾಡ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 6 ಅಪ್ರಾಪ್ತರು ವಶಕ್ಕೆ

Last Updated :Dec 27, 2021, 12:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.