ಮೇಕೆದಾಟಿಗೆ ಕ್ಲಿಯರೆನ್ಸ್ ಸಿಗೋವರೆಗೆ ತಮಿಳುನಾಡಿನ ಲಿಂಕ್ ಯೋಜನೆಗೆ ಕ್ಲಿಯರೆನ್ಸ್ ಕೊಡಬೇಡಿ: ಕೇಂದ್ರಕ್ಕೆ ಸಿಎಂ ಮನವಿ..!

author img

By

Published : Dec 2, 2021, 5:14 PM IST

Updated : Dec 2, 2021, 5:22 PM IST

CM Basavaraja Bommai

ದೆಹಲಿ ಪ್ರವಾಸದಲ್ಲಿರುವ ಸಿಎಂ ಬೊಮ್ಮಾಯಿ ಹಲವು ಸಚಿವರ ಭೇಟಿ ಮಾಡಿದ್ದು, ಮೇಕೆದಾಟು ಯೋಜನೆ ಕುರಿತಂತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಜೊತೆಗೆ ತಮಿಳುನಾಡಿನ ಲಿಂಕ್ ಯೋಜನೆಗೆ ಕ್ಲಿಯರೆನ್ಸ್ ನೀಡದಂತೆ ಮನವಿ ಮಾಡಿದ್ದಾರೆ.

ಬೆಂಗಳೂರು: ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್ ಸಿಗುವವರೆಗೂ ತಮಿಳುನಾಡಿನ ಲಿಂಕ್ ಯೋಜನೆಗೆ ಎರಡನೇ ಹಂತದ ಕ್ಲಿಯರೆನ್ಸ್ ನೀಡದಂತೆ ಕೇಂದ್ರ ಜಲಶಕ್ತಿ‌ ಸಚಿವ ಗಜೇಂದ್ರ ಶೇಖಾವತ್ ಮನವಿ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಬಂದ ಕೂಡಲೇ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ. 2-3 ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಡಿ.6ರಂದು ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ರಾಷ್ಟ್ರೀಯ ಯೋಜನೆ ಅಂತಿಮಗೊಳಿಸಬೇಕು ಎಂದು ಚರ್ಚೆ ಮಾಡಿದ್ದೇನೆ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ನವದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಗೋದಾವರಿ, ಕಾವೇರಿ, ಕೃಷ್ಣಾ ಮತ್ತು ಮಹಾನದಿ ಜೋಡಣೆ ಕುರಿತು ನಮ್ಮ ಅಹವಾಲು ಆಲಿಸದೇ ಡಿಪಿಆರ್ ಮಾಡಬಾರದು ಎಂದು ಹೇಳಿದ್ದೇನೆ ಮತ್ತು ತಮಿಳುನಾಡಿನ ಲಿಂಕ್ ಯೋಜನೆಗೆ ನಮ್ಮ ಮೇಕೆದಾಟು ಯೋಜನೆ ಕ್ಲಿಯರ್ ಆಗುವವರೆಗೂ ಅವರಿಗೆ ಮುಂದಿನ ಕ್ಲಿಯರೆನ್ಸ್ ನೀಡದಂತೆ ಕೇಳಿದ್ದೇನೆ ಈ ಸಂಬಂಧ ಸುದೀರ್ಘವಾಗಿ ಚರ್ಚೆ ಮಾಡಿದ್ದೇನೆ ಎಂದರು.

ಬೂಸ್ಟರ್ ಡೋಸ್ ಚರ್ಚೆ:

ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಭೇಟಿ ಮಾಡಿದ್ದು, ಕೊರೊನಾ ನಿರ್ವಹಣೆ ಮತ್ತು ಈಗಿರುವ ಹೊಸ ಪ್ರಭೇದ ಒಮಿಕ್ರೋನ್ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕ ಬಹಳ ಒಳ್ಳೆ ರೀತಿಯಲ್ಲಿ ಕೊರೊನಾ ನಿಯಂತ್ರಣ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಚರ್ಚೆ ಮಾಡಿದ್ದು, ಇಲ್ಲಿರುವ ತಜ್ಞರ ಸಮಿತಿ ಜೊತೆ ಚರ್ಚಿಸಿ ನಂತರ ತೀರ್ಮಾನವನ್ನು ರಾಜ್ಯ ಸರ್ಕಾರಗಳಿಗೆ ಹೇಳಲಿದ್ದೇವೆ, ನಾವು ಕೂಡ ಇತ್ತೀಚಿನ ಬೆಳವಣಿಗೆಯಿಂದ ಎಲ್ಲವನ್ನೂ ಅವಲೋಕನ ಮಾಡುತ್ತಿದ್ದೇವೆ ಇದನ್ನೆಲ್ಲಾ ನೋಡಿಕೊಂಡು ತಜ್ಞರ ಸಮಿತಿ ಜೊತೆಗೆ ಚರ್ಚಿಸಿ ಅಂತಿಮಗೊಳಿಸುವುದಾಗಿ ಹೇಳಿದ್ದಾರೆ ಎಂದರು.

ರಸಗೊಬ್ಬರ ಚರ್ಚೆ:

ರಸಗೊಬ್ಬರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಡಿಎಪಿ ಹೆಚ್ಚುವರಿಯಾಗಿ ಕೊಡಬೇಕು ಎಂದು ಕೇಳಿಕೊಂಡು ಪತ್ರ ಬರೆದಿದ್ದೆ ಅದರ ಬಗ್ಗೆ ಮಾತುಕತೆ ನಡೆಸಿದ್ದೇನೆ. ನಮಗೆ ಡಿಎಪಿ ಸ್ವಲ್ಪ ಕೊರತೆಯಿದೆ. 48,000 ಮೆಟ್ರಿಕ್ ಟನ್ ಕೊರತೆ ಇದೆ. ಅಕ್ಟೋಬರ್ - ನವೆಂಬರ್ ಅಲೊಕೇಷನ್ ಬಾಕಿ ಇದೆ ಅದನ್ನು ಸಂಪೂರ್ಣವಾಗಿ ಸರಬರಾಜು ಮಾಡುವಂತೆ ಭರವಸೆ ಕೊಟ್ಟಿದ್ದಾರೆ ಎಂದರು.

ಕಾನೂನು ಸಚಿವ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿದ್ದೇನೆ. ಜನವರಿ ತಿಂಗಳಿನಲ್ಲಿ ಬರಲು ಆಹ್ವಾನ ನೀಡಿದ್ದೇನೆ. ಕರ್ನಾಟಕದಲ್ಲಿರುವ ಕೋರ್ಟ್ ಮತ್ತು ಕಾನೂನು ಮೂಲಸೌಕರ್ಯದ ಬಗ್ಗೆ ಚರ್ಚೆಯಾಯಿತು. ಮೂಲಸೌಕರ್ಯ ಇನ್ನಷ್ಟು ಅಭಿವೃದ್ಧಿ ಪಡಿಸುವ ಕುರಿತು ಸಮಾಲೋಚನೆ ಮಾಡಿದ್ದೇವೆ ಎಂದರು.

ಪರಿಷತ್ ಮೈತ್ರಿ ಬಿಎಸ್​​​ವೈ ನಿರ್ಧಾರ:

ಪರಿಷತ್ ಮೈತ್ರಿಯಲ್ಲಿ ಹಲವಾರು ವಿಚಾರಗಳಿವೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಇದರ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ. ಹಲವಾರು ಜಿಲ್ಲೆಗಳಲ್ಲಿ ಹಲವಾರು ರೀತಿಯ ಅಭಿಪ್ರಾಯಗಳಿವೆ. ಅವುಗಳನ್ನು ಸಮಗ್ರವಾಗಿ ನೋಡಿ ಕೇಂದ್ರದ ನಾಯಕರ ಜೊತೆ ಮಾತುಕತೆ ನಡೆಸಿ ಯಡಿಯೂರಪ್ಪ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ವಿಶ್ವನಾಥ್ ಪ್ರಕರಣ ಕುರಿತು ಪೊಲೀಸ್ ದೂರು ದಾಖಲಾಗಿದೆ. ಬಂಧಿಸಲ್ಪಟ್ಟವರನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತದೆ. ಅಲ್ಲಿರುವ ಎಲ್ಲ ಮಾಹಿತಿಯನ್ನು ಕಲೆ ಹಾಕಿದ ನಂತರ ಮುಂದಿನ ಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಒಮ್ಮೆ ಪ್ರಕರಣ ದಾಖಲಾದ ಮೇಲೆ ನಾವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಅದನ್ನು ಆಯುಕ್ತರು ನಿರ್ಧಾರ ಮಾಡಲಿದ್ದಾರೆ ಎಂದರು.

ಇದನ್ನೂ ಓದಿ: ಭಾರತಕ್ಕೆ ಲಗ್ಗೆ ಹಾಕಿದ ರೂಪಾಂತರಿ: ಕರ್ನಾಟಕದಲ್ಲಿ ಎರಡು ಒಮಿಕ್ರೋನ್ ಕೇಸ್​​​ ಪತ್ತೆ

Last Updated :Dec 2, 2021, 5:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.