ETV Bharat / state

ಕಾಂಗ್ರೆಸ್​ ಗೆಲ್ಲಿಸಿದ ಗ್ಯಾರಂಟಿ ಕಾರ್ಡ್​.. ಹೊಸ ಸರ್ಕಾರಕ್ಕೆ ಉಚಿತ ಯೋಜನೆಗಳ ಜಾರಿಗೆ ಎದುರಾಗಲಿದೆ ಹತ್ತಾರು ಸವಾಲು

author img

By

Published : May 16, 2023, 3:53 PM IST

ರಾಜ್ಯದಲ್ಲಿ ಕಾಂಗ್ರೆಸ್​ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಈಗಾಗಲೇ​ ಉಚಿತ ಭರವಸೆಗಳನ್ನು ಘೋಷಣೆ ಮಾಡಿದ್ದು, ಇವುಗಳ ಜಾರಿಗೆ ಸಾಕಷ್ಟು ಸವಾಲುಗಳು ಎದುರಾಗಲಿದೆ.

challenges-in-providing-guarantees-given-by-congress
ರಾಜ್ಯದ ಗದ್ದುಗೆ ಏರಲಿರುವ ಕಾಂಗ್ರೆಸ್ ಗೆ ಉಚಿತಗಳ ಗ್ಯಾರಂಟಿಗಳ ಜಾರಿಗೆ ಎದುರಾಗಲಿದೆ ಹತ್ತಾರು ಸವಾಲುಗಳು

ಬೆಂಗಳೂರು : ಉಚಿತ ಭರವಸೆಗಳ ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಕರುನಾಡಲ್ಲಿ ಅಭೂತಪೂರ್ವ ಜಯಭೇರಿ ಭಾರಿಸಿದೆ.‌ 135 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ರಾಜ್ಯದ ಗದ್ದುಗೆ ಹಿಡಿಯಲಿದೆ. ಆದರೆ ಇದೀಗ ರಾಜ್ಯದ ಜನರ ಚಿತ್ತ ಕಾಂಗ್ರೆಸ್ ಘೋಷಿಸಿರುವ ಉಚಿತಗಳ ಭರವಸೆಯ ಜಾರಿ ಮೇಲಿದೆ. ಉಚಿತ ಭರವಸೆಗಳ ಅನುಷ್ಠಾನಕ್ಕೆ ಕೆಲ ಸವಾಲುಗಳೂ ಇವೆ.

ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಧೂಳಿಪಟ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಹುವಾಗಿ ಕಾಂಗ್ರೆಸ್ ನ ಗೆಲುವಿನ ಪತಾಕೆ‌ ಹಾರಿಸಲು ನೆರವಾಗಿದ್ದು ಭರವಸೆಗಳ ಗ್ಯಾರಂಟಿ ಕಾರ್ಡ್. ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಕಾರ್ಡ್ ರಾಜ್ಯದ ಜನರ ಮನಮುಟ್ಟಿ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಮೂಡುವಂತಾಗಿದೆ.

ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ₹ 2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ ₹3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ₹ 1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆಯ ಐದು ಗ್ಯಾರಂಟಿ ಕಾರ್ಡ್ ಗಳು ಕಾಂಗ್ರೆಸ್ ನ್ನು ಈ ಬಾರಿ ಅಭೂತಪೂರ್ವ ವಿಜಯದ ಗಡಿ ಮುಟ್ಟಿಸುವಂತೆ ಮಾಡಿದೆ. ಆದರೆ, ಈ ಉಚಿತ ಭರವಸೆಗಳ ಅನುಷ್ಠಾನಕ್ಕೆ ಹತ್ತಾರು ಸವಾಲುಗಳಿವೆ.

ಗ್ಯಾರಂಟಿಗಳಿಗೆ ಎದುರಾಗುವ ಸವಾಲುಗಳೇನು? : ಐದೂ ಭರವಸೆಗಳು ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಜಾರಿಗೆ ಬರಲಿದ್ದು, ಮೊದಲ ಕ್ಯಾಬಿನೆಟ್‌ ಸಭೆಯಲ್ಲೇ ಎಲ್ಲ ಭರವಸೆಗಳಿಗೆ ಅಂಕಿತ ಹಾಕಲಾಗುವುದು ಎಂದು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಈ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ ಸುಮಾರು 40,000 ಕೋಟಿ ರೂ. ಬೇಕಾಗಲಿದ್ದು, ಇದು ರಾಜ್ಯ ಬಜೆಟ್ ಮೊತ್ತದ ಕೇವಲ 15% ಆಗಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಆದರೆ, ಅಸಲಿಗೆ ಕಾಂಗ್ರೆಸ್ ಘೋಷಿಸಿದಂತೆ ರಾಜ್ಯದ ಎಲ್ಲರಿಗೂ ಈ ಯೋಜನೆಗಳನ್ನು ಅನ್ವಯಿಸಿದರೆ ಅಂದಾಜು ಮೊತ್ತ 60,000 ಕೋಟಿ ರೂ. ದಾಟುವ ಸಾಧ್ಯತೆ ಇದೆ.

ಮಿತಿ ಮೀರಿದ ರಾಜ್ಯದ ಬದ್ಧ ವೆಚ್ಚ : ರಾಜ್ಯದ ಆದಾಯ ಸಂಗ್ರಹದಲ್ಲಿ ಶೇ. 80-90ರಷ್ಟು ಮೊತ್ತ ನೌಕರರ ವೇತನ, ಪಿಂಚಣಿ, ಆಡಳಿತ ವೆಚ್ಚ, ಸಹಾಯಧನಗಳು ಸೇರಿದಂತೆ ಬದ್ಧ ವೆಚ್ಚಕ್ಕೆ ತಗುಲುತ್ತದೆ. ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಅನುಷ್ಠಾನಕ್ಕೆ ಮಿತಿ ಮೀರಿದ ಬದ್ಧ ವೆಚ್ಚವೇ ದೊಡ್ಡ ತಲೆನೋವಾಗಿದೆ. 2022-23ರ ಹಣಕಾಸು ವರ್ಷದಲ್ಲಿ ರಾಜ್ಯದ ಒಟ್ಟು ಬದ್ಧ ವೆಚ್ಚ ಸುಮಾರು 94,699 ಕೋಟಿ ರೂ. ಆಗಿತ್ತು. ಇದರ ಜೊತೆಗೆ ಸುಮಾರು 30,000 ಕೋಟಿ ರೂ.ವನ್ನು ಸಾಲದ ಮೇಲಿನ ಬಡ್ಡಿ ಪಾವತಿಗೆ ವೆಚ್ಚ ಮಾಡಲಾಗಿದೆ.

ಬೊಮ್ಮಾಯಿ ಸರ್ಕಾರ 2023-24ರ ಬಜೆಟ್ ನಲ್ಲಿ ಅಲ್ಪ ಉಳಿತಾಯದ ಬಜೆಟ್ ಮಂಡಿಸಿದ್ದರು. 2022-23ರ ಸರ್ಕಾರದ ಮಧ್ಯಮಾವಧಿ ವಿತ್ತೀಯ ವರದಿಯಲ್ಲಿ ರಾಜ್ಯದ ಹಣಕಾಸಿನಲ್ಲಿ ಆದಾಯ ಕೊರತೆಯ ಪರಿಸ್ಥಿತಿ ಇರುವುದರಿಂದ ಸಹಾಯಧನಗಳ ವೆಚ್ಚ ಕಡಿತ ಮಾಡಬೇಕು. ಕೇವಲ ಬಡವರಿಗೆ ಮಾತ್ರ ಸಹಾಯಧನ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ. ಈ ಮಧ್ಯೆ ಕಾಂಗ್ರೆಸ್ ನ ಬೃಹತ್ ಮೊತ್ತದ ಗ್ಯಾರಂಟಿಗಳನ್ನು ಜಾರಿ ಮಾಡುವುದು ರಾಜ್ಯದ ಬೊಕ್ಕಸದ ಸ್ಥಿತಿಯನ್ನು ಏರುಪೇರು ಮಾಡಲಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ವಿತ್ತೀಯ ಕೊರತೆಯ ಭೀತಿ : ಕೋವಿಡ್ ಲಾಕ್ ಡೌನ್ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ಕ್ಷೀಣವಾಗಿದ್ದ ರಾಜ್ಯದ ಆದಾಯ ಇದೀಗ ಬಹುತೇಕ ಯಥಾಸ್ಥಿತಿಗೆ ಮರಳಿದೆ. ಉತ್ತಮ ಚೇತರಿಕೆ ಕಾಣುತ್ತಿರುವ ಹಿನ್ನೆಲೆ ಬೊಮ್ಮಾಯಿ ಸರ್ಕಾರ ಮಂಡಿಸಿದ ಕೊನೆಯ 2023-24 ಬಜೆಟ್ ನಲ್ಲಿ ಅಲ್ಪ ಉಳಿತಾಯದ ಬಜೆಟ್ ಮಂಡಿಸಿದ್ದರು.

ಬಿಜೆಪಿ ಸರ್ಕಾರ 2023-24ಸಾಲಿಗೆ 3,09,182 ಕೋಟಿ ರೂ. ಬಜೆಟ್ ಮಂಡಿಸಿದ್ದರು. ಅದರಂತೆ 402 ಕೋಟಿ ರೂ.‌ನ ಅಲ್ಪ ಮತದ ಉಳಿತಾಯ ಬಜೆಟ್ ಮಂಡಿಸಿದ್ದರು. ಕೋವಿಡ್ ನಿಂದ ಸತತ ಎರಡು ವರ್ಷ ಆದಾಯ ಕೊರತೆಯ ಬಜೆಟ್ ಮಂಡನೆಯಾಗಿತ್ತು. ಆದರೆ ಆದಾಯ ಗುರಿ ಮೀರಿ ಸಂಗ್ರಹವಾಗುತ್ತಿರುವ ಕಾರಣ 2023-24 ಸಾಲಿನ ಉಳಿತಾಯದ ಬಜೆಟ್ ಮಂಡಿಸಿದ್ದರು.

ಇದೀಗ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದ್ದು, ಹೊಸ ಸರ್ಕಾರ ಹೊಸ ಬಜೆಟ್ ಮಂಡಿಸಲಿದೆ. ಗ್ಯಾರಂಟಿಗಳಿಗೆ ಹಣ ಮೀಸಲಿಡುವ ಕಾರಣ ರಾಜ್ಯದ ಬಜೆಟ್ ಮತ್ತೆ ದೊಡ್ಡ ಪ್ರಮಾಣದ ಆದಾಯ ಕೊರತೆಯ ಬಜೆಟ್ ಮಂಡನೆ ಅನಿವಾರ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೀಮಿತ ಆದಾಯ ಮೂಲಗಳ ಹಿನ್ನೆಲೆ ಆದಾಯ ಕೊರತೆ ಎದುರಾಗುವ ಭೀತಿ ಇದೆ. ಈ ಆದಾಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಗ್ಯಾರಂಟಿಗಳ ಜಾರಿ ಮಾಡುವುದು ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ದೊಡ್ಡ ಸವಾಲಾಗಿದೆ.

ವಿತ್ತೀಯ ಹೊಣೆಗಾರಿಕೆ ಕಾಯ್ದೆ ಮಿತಿಯ ಸವಾಲು : ಗ್ಯಾರಂಟಿಗಳಿಗೆ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿ ದೊಡ್ಡ ಸವಾಲಾಗಿದೆ. ಕಾಂಗ್ರೆಸ್ ಸರ್ಕಾರ ವಿತ್ತೀಯ ಕೊರತೆಯನ್ನು ಕಾಯ್ದೆಯ ಪ್ರಕಾರ ಒಟ್ಟು ಜಿಎಸ್ ಡಿಪಿಯ 3% ಒಳಗಡೆ ಇರಿಸಬೇಕು. ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ವಿತ್ತೀಯ ಕೊರತೆಯನ್ನು 3% ಮಿತಿಯೊಳಗಡೆ ಇಡಲು ಸಾಧ್ಯನಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಬೊಮ್ಮಾಯಿ ಮಂಡಿಸಿದ್ದ 2023-24 ಸಾಲಿನ ಬಜೆಟ್ ನಲ್ಲಿ ವಿತ್ತೀಯ ಕೊರತೆ 60,581 ಕೋಟಿ ರೂ. ಅಂದಾಜಿಸಲಾಗಿದೆ. ಅದರಂತೆ ವಿತ್ತೀಯ ಕೊರತೆ 2.6%ದಲ್ಲಿ ಕಾಯ್ದುಕೊಳ್ಳಲಾಗಿದೆ. ಆದರೆ ಕಾಂಗ್ರೆಸ್ ಹೊಸ ಬಜೆಟ್ ಮಂಡನೆ ಮಾಡಿದಾಗ ಗ್ಯಾರಂಟಿಗಳ ಜಾರಿ ಹಿನ್ನೆಲೆ ವಿತ್ತೀಯ ಕೊರತೆ ಮಿತಿ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬಂಡಾಯ ವೆಚ್ಚಕ್ಕೆ ಸೀಮಿತ ಹಣ : ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಗಳ ಅನುಷ್ಠಾನದಿಂದ ಆದಾಯ ವೆಚ್ಚ ಬೆಟ್ಟದಷ್ಟು ಬೆಳೆಯಲಿದ್ದು, ಮೂಲ ಸೌಕರ್ಯ ಅಭಿವೃದ್ಧಿಗಾಗಿ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ಲಭಿಸುವುದಿಲ್ಲ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸೀಮಿತ ಆದಾಯದಲ್ಲಿ ಬಹುತೇಕ ಹಣ ಬದ್ಧ ವೆಚ್ಚ ಹಾಗೂ ಗ್ಯಾರಂಟಿಗಳಿಗೆ ಹೋಗಲಿದ್ದು, ಬಂಡಾಯ ವೆಚ್ಚಕ್ಕೆ ಅಲ್ಪ ಹಣ ಮಾತ್ರ ಲಭ್ಯವಾಗಲಿದೆ.

ಬಂಡವಾಳ ವೆಚ್ಚಕ್ಕೆ ವ್ಯತ್ಯಯವಾಗದಂತೆ ಹೊಸ ಸರ್ಕಾರ ಹಣಕಾಸು ಹೊಂದಿಸಬೇಕು. ಇಲ್ಲವಾದರೆ ಮೂಲಸೌಕರ್ಯ ಅಭಿವೃದ್ಧಿಗೆ ತೀವ್ರ ಹಣದ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಆತಂಕ ಹೊರಹಾಕಿದ್ದಾರೆ. ಬಂಡಾಯ ವೆಚ್ಚವೂ ಭರವಸೆಗಳ ಗ್ಯಾರಂಟಿಗಳ ಜಾರಿಗಿರುವ ದೊಡ್ಡ ಸವಾಲಾಗಿದೆ.

ಹೆಚ್ಚು ಸಾಲದ ಶೂಲ, ಹೆಚ್ಚುವರಿ ತೆರಿಗೆಯ ಅಪಾಯ : ಗ್ಯಾರಂಟಿಗಳಿಗೆ ತಗುಲುವ ದೊಡ್ಡ ಪ್ರಮಾಣದ ವೆಚ್ಚ ಸರಿದೂಗಿಸಲು ಬೃಹತ್ ಪ್ರಮಾಣದಲ್ಲಿ ಸಾಲದ ಹೊರೆ ಹೋಗುವ ಅಪಾಯವೂ ಇದೆ. ಜೊತೆಗೆ ಜನರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಅನಿವಾರ್ಯತೆಯೂ ಇರಲಿದೆ. 2023-24ರ ಸಾಲಿನಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆ ಮೊತ್ತ ಸುಮಾರು 5,64,896 ಲಕ್ಷ ಕೋಟಿ ರೂ.ಗೆ ತಲುಪಲಿದೆ.

ಕರ್ನಾಟಕದ ಸಾಲದ ಒಟ್ಟು ಹೊಣೆಗಾರಿಕೆ 2013-14ರಲ್ಲಿ ಸುಮಾರು 1.36 ಲಕ್ಷ ಕೋಟಿ ರೂ‌. ಇತ್ತು. ಆಗಿನ ಸಿದ್ದರಾಮಯ್ಯ ಸರ್ಕಾರದ ಅನೇಕ ಉಚಿತ ಯೋಜನೆ, ಸಾಲ ಮನ್ನಾದಿಂದ ಸಾಲದ ಹೊರೆ ಹಠಾತ್ ಏರಿಕೆ ಕಂಡಿತು. 65 ವರ್ಷದಲ್ಲಿ ರಾಜ್ಯ ಒಟ್ಟು 1,30,000 ಕೋಟಿ ರೂ. ಸಾಲ ಮಾಡಿತ್ತು. ಸಿದ್ದರಾಮಯ್ಯ ತಮ್ಮ ಐದು ವರ್ಷದ ಅಧಿಕಾರವಧಿಯಲ್ಲಿ ಸುಮಾರು 1,28,000 ಕೋಟಿ ರೂ. ಸಾಲ ಮಾಡಿದ್ದರು. ಅಲ್ಲಿಂದ ಸಾಲದ ಪ್ರಮಾಣ ಜಾಸ್ತಿಯಾಗುತ್ತಾ ಹೋಗಿತ್ತು.

ಬಿಜೆಪಿ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ 3 ಲಕ್ಷ ಕೋಟಿ ರೂ.ನ ಮಿತಿ ಮೀರಿ ಸಾಲ ಮಾಡಿ, ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳಿದೆ ಎಂದು ಸಿದ್ದರಾಮಯ್ಯ ಸೇರಿ ಕೈ ನಾಯಕರು ಪ್ರಬಲವಾಗಿ ಟೀಕಿಸುತ್ತಿದ್ದರು. ಇದೀಗ ಗ್ಯಾರಂಟಿ ಯೋಜನೆಗಳಿಗಾಗಿ ಹೆಚ್ಚು ಸಾಲದ ಮೊರೆ ಹೋದರೆ ರಾಜ್ಯದ ಜನರು ಹಾಗೂ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವ ಆತಂಕ ಇದೆ. ಹೀಗಾಗಿ ಹೆಚ್ಚು ಸಾಲದ ಮೊರೆ ಹೋಗದೇ ಗ್ಯಾರಂಟಿ ಜಾರಿ ಮಾಡುವ ಸವಾಲು ಇದೆ.

ಇದನ್ನೂ ಓದಿ : ಸಿಎಂ ಸ್ಥಾನದ ಆಯ್ಕೆ ಕಾಂಗ್ರೆಸ್​ ಪಕ್ಷದ ಆಂತರಿಕ ವಿಚಾರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.