ETV Bharat / state

ಬರ ಪರಿಸ್ಥಿತಿ ಅವಲೋಕಿಸಲು ನಾಳೆ ರಾಜ್ಯಕ್ಕೆ ಕೇಂದ್ರದ ಮೂರು ತಂಡಗಳು ಭೇಟಿ

author img

By ETV Bharat Karnataka Team

Published : Oct 4, 2023, 3:40 PM IST

ಬರ ಪರಿಸ್ಥಿತಿ ಅವಲೋಕಿಸಲು ನಾಳೆ ರಾಜ್ಯಕ್ಕೆ ಕೇಂದ್ರದ ಮೂರು ತಂಡಗಳು ಭೇಟಿ ನೀಡಲಿದ್ದು, ಈ ತಂಡಗಳು ಅಕ್ಟೋಬರ್ 9ರ ವರೆಗೆ ರಾಜ್ಯದಲ್ಲಿ ಪರಿಶೀಲನೆ ನಡೆಸಲು ನಿರ್ಧರಿಸಿವೆ.

review the drought situation
ಬರ ಪರಿಸ್ಥಿತಿ ಅವಲೋಕಿಸಲು ನಾಳೆ ರಾಜ್ಯಕ್ಕೆ ಮೂರು ಕೇಂದ್ರದ ತಂಡಗಳು ಭೇಟಿ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಮೂರು ತಂಡಗಳು ಗುರುವಾರ ಕರ್ನಾಟಕಕ್ಕೆ ಭೇಟಿ ನೀಡಲಿವೆ. ಬರ ಅಧ್ಯಯನ ಆರಂಭಿಸುವ ಮುನ್ನ ತಂಡಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿವೆ ಎಂದು ಮೂಲಗಳು ಖಚಿತಪಡಿಸಿವೆ.

ಕೇಂದ್ರದ ತಂಡಗಳು ಅಕ್ಟೋಬರ್ 9ರ ವರೆಗೆ ರಾಜ್ಯದಲ್ಲಿ ಇರಲು ನಿರ್ಧರಿಸಿವೆ. ಈ ತಂಡಗಳು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಚಿತ್ರದುರ್ಗ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಅವಲೋಕಿಸಲಿವೆ. ಕಾಂಗ್ರೆಸ್ ಸರ್ಕಾರ ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ.

ಬರದಿಂದ ರಾಜ್ಯಕ್ಕೆ 30,432 ಕೋಟಿ ರೂ. ನಷ್ಟ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, ''ಬರದಿಂದ ರಾಜ್ಯಕ್ಕೆ 30,432 ಕೋಟಿ ರೂ. ನಷ್ಟವಾಗಿದೆ. 39,039 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ತೋಟಗಾರಿಕೆ ಬೆಳೆ 2,655 ಕೋಟಿ ರೂ. ನಷ್ಟವಾಗಿದೆ'' ಎಂದು ತಿಳಿಸಿದರು.

ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಒಟ್ಟು 195 ತಾಲ್ಲೂಕುಗಳಲ್ಲಿ 161 ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದ್ದು, 34 ಸಾಮಾನ್ಯ ಮತ್ತು 40 ಮಳೆ ಕೊರತೆ ಎದುರಿಸುತ್ತಿವೆ. ರಾಜ್ಯ ಸರ್ಕಾರ ಕೇಂದ್ರದಿಂದ 6,000 ಕೋಟಿ ರೂಪಾಯಿ ಪ್ಯಾಕೇಜ್ ಕೇಳಿದೆ ಎಂದು ಅವರು ಮಾಹಿತಿ ನೀಡಿದರು.

58 ಲಕ್ಷ ಟನ್‌ಗಳಷ್ಟು ಬೆಳೆ ಹಾನಿ: ''40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಅಂದಾಜು 22,000 ಕೋಟಿ ರೂಪಾಯಿ ನಷ್ಟವಾಗಿದೆ. ಕರ್ನಾಟಕದಲ್ಲಿ ಒಟ್ಟು 58 ಲಕ್ಷ ಟನ್‌ಗಳಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ಇದೆ'' ಎಂದ ಅವರು, ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಪರಿಹಾರವನ್ನು ಬಿಡುಗಡೆ ಮಾಡುವುದರ ಹೊರತಾಗಿ ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಮಾನವ ದಿನಗಳನ್ನು ಪ್ರಸ್ತುತ 100 ದಿನಗಳಿಂದ 150 ದಿನಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಕೇಂದ್ರ ತಂಡ ಕರ್ನಾಟಕಕ್ಕೆ ಭೇಟಿ ನೀಡಿದ್ದು, ಮಾನವ ದಿನಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

''2013ರಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಹೊಂಡ ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರ ಸ್ಥಗಿತ ಮಾಡಿತ್ತು. ಈಗ ನಾವು ಅದನ್ನು ಪುನಾರಂಭಿಸಿದ್ದೇವೆ. ಅದನ್ನು ಜಾರಿಗೆ ತರಲು 200 ಕೋಟಿ ರೂ. ಮೀಸಲಿಡಲಾಗಿದೆ'' ಎಂದು ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದರು.

ಇದನ್ನೂ ಓದಿ: ಶಿವಮೊಗ್ಗ ಗಲಭೆಯನ್ನ ಗಂಭೀರವಾಗಿ ಪರಿಗಣಿಸಿದ್ದೇವೆ: ಡಿಜಿಪಿ ಅಲೋಕ್ ಮೋಹನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.