ETV Bharat / state

ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚಿಸಲು ಅಧ್ಯಯನ, ವಸತಿ ಸೌಕರ್ಯ ಅಭಿವೃದ್ಧಿ - ಅಮಿತ್ ಶಾ

author img

By

Published : Dec 31, 2022, 3:48 PM IST

ವಿವಿಧ ಪೊಲೀಸ್​ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕಾನೂನು ಸುವ್ಯವಸ್ಥೆ, ದೇಶದ ಭದ್ರತೆ ಹೆಚ್ಚಿಸಲು ಕ್ರಮ - ಭಯೋತ್ಪಾದನೆ, ಗಡಿ ವ್ಯಾಜ್ಯಗಳಿಗೆ ಪರಿಹಾರ- ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

central-home-minister-amit-sha-program-at-devanahalli
ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚಿಸಲು ಅಧ್ಯಯನ,ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ಸೌಕರ್ಯ ಅಭಿವೃದ್ಧಿ - ಅಮಿತ್ ಷಾ

ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚಿಸಲು ಅಧ್ಯಯನ, ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ಸೌಕರ್ಯ ಅಭಿವೃದ್ಧಿ - ಅಮಿತ್ ಶಾ

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಭಯೋತ್ಪಾದನೆ, ಗಡಿ ವ್ಯಾಜ್ಯಗಳು ಸೇರಿದಂತೆ ದೇಶದ ಹಲವು ಸವಾಲುಗಳಿಗೆ ಸಮಂಜಸ ಪರಿಹಾರ ಕಂಡುಕೊಳ್ಳುವುದು ಹಾಗೂ ದೇಶದ ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್​ ಶಾ ಹೇಳಿದ್ದಾರೆ.

ದೇವನಹಳ್ಳಿ ಸಮೀಪದ ಆವತಿ ಗ್ರಾಮದಲ್ಲಿ, ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಟಿಬೇಟ್ ಗಡಿ ರಕ್ಷಣಾ ದಳ ಬೆಂಗಳೂರು ವಿಭಾಗದ ವಿವಿಧ ಕಟ್ಟಡಗಳನ್ನು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಮಾತನಾಡಿದರು.

2023ರ ಹೊಸ ವರ್ಷದ ಶುಭಾಶಯಗಳ ತಿಳಿಸುವುದರೊಂದಿಗೆ ಭಾಷಣ ಪ್ರಾರಂಭಿಸಿದ ಅವರು, ವಿವಿಧ ಪೊಲೀಸ್ ದಳಗಳ ನಡುವೆ ಸಮನ್ವಯ ಸಾಧಿಸಿ, ಸಂವಾದ ನಡೆಸಿ ಭದ್ರತೆ ಹೆಚ್ಚಿಸಲು ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಕೇಂದ್ರ ಗುಪ್ತಚರ ಸಂಸ್ಥೆಯ ತರಬೇತಿ ಶಾಲೆಯು ಮಹತ್ವದ ವೇದಿಕೆಯಾಗಲಿದೆ. ಗಡಿ ಸುರಕ್ಷಾ ದಳಗಳಲ್ಲಿ ಸೇವೆ ನೀಡುವ ಯೋಧರು ಕೇಂದ್ರಸ್ಥಾನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ವಸತಿ ಸೌಕರ್ಯ ಹೆಚ್ಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

central-home-minister-amit-sha-program-at-devanahalli
ಕೇಂದ್ರೀಯ ಪತ್ತೆದಾರಿ ತರಬೇತಿ ಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನೆ ನಡೆಸಿದ ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ

ದೇಶದ ಪೊಲೀಸ್​ ಇಲಾಖೆಗೆ ಸಹಕಾರಿ : ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ರಾಜ್ಯ ಸರ್ಕಾರ ಉತ್ತಮ ಪರಿಸರದಲ್ಲಿ ನಿವೇಶನ ಒದಗಿಸಿದೆ‌. ಇದು ಮುಂಬರುವ ದಿನಗಳಲ್ಲಿ ದೇಶದ ಪೊಲೀಸ್ ವ್ಯವಸ್ಥೆಗೆ ಬಹಳ ಪ್ರಯೋಜನಕಾರಿಯಾಗಲಿದೆ. ವಿವಿಧ ಪೊಲೀಸ್ ದಳಗಳನ್ನು ಬಲಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಸಮಾಜವು ಚಲನಶೀಲವಾಗಿರುತ್ತದೆ ಅದರ ವಿಚಾರ, ಗಮನ, ಧೋರಣೆ, ಸ್ವರೂಪಗಳು ಹಾಗೂ ಪಥ ಬದಲಾಗುತ್ತಿರುತ್ತವೆ. ಅದಕ್ಕೆ ಅನುಗುಣವಾಗಿ ಪೊಲೀಸ್ ಬಲಗಳೂ ಕೂಡ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗುತ್ತವೆ. ಸಂಶೋಧನೆ ಆಧರಿಸಿ, ಸುರಕ್ಷತಾ ತಂತ್ರಗಳು, ರಣನೀತಿ ರೂಪಿಸಿಕೊಳ್ಳುವುದು ಮಹತ್ವಪೂರ್ಣವಾಗಿರುತ್ತದೆ. ವಿವಿಧ ಪೊಲೀಸ್ ಸಂಸ್ಥೆಗಳ ನಡುವೆ ಸಹಯೋಗ ತರುವುದು ಮಹತ್ವಪೂರ್ಣ ಕಾರ್ಯವಾಗಿದೆ. ಹೊಸ ಕಲಿಕೆ, ಸವಾಲುಗಳ ವಿನಿಮಯದೊಂದಿಗೆ ಎಲ್ಲ ಪೊಲೀಸ್ ದಳಗಳು ಪರಿಪೂರ್ಣವಾಗಲು ಸಾಧ್ಯ ಎಂದರು.

ಮಹಾನಗರಗಳ ಸುರಕ್ಷತೆ ಮತ್ತು ಅಧ್ಯಯನ : ಭಾರತದಂತಹ ದೊಡ್ಡ ದೇಶದಲ್ಲಿ ಹಲವು ಸಂಸ್ಕೃತಿ, ಆಚರಣೆಗಳಿವೆ. ಅದಕ್ಕೆ ಅನುಗುಣವಾಗಿ ದೇಶದ ಆಂತರಿಕ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಸಂವಿಧಾನದ ರಾಜ್ಯಪಟ್ಟಿಯಲ್ಲಿರಿಸಲಾಗಿದೆ. ಕಾಲಾಂತರದಲ್ಲಿ ಹೆಚ್ಚಿದ ಭಯೋತ್ಪಾದನೆ, ಆತಂಕವಾದ, ಗಡಿ ವಿವಾದಗಳು ಹೊಸ ಸವಾಲುಗಳನ್ನು ಒಡ್ಡಿವೆ. ಬಿಪಿಆರ್ ಆ್ಯಂಡ್ ಡಿ ಇಂತಹ ಸವಾಲುಗಳಿಗೆ ಪರಿಹಾರ ಅನ್ವೇಷಿಸುತ್ತದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ದೇಶದ ಮಹಾನಗರಗಳಲ್ಲಿ ಬಹು ಭಾಷಿಕರು ನೆಲೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅಲ್ಲಿನ ಪೊಲೀಸ್ ಕಾರ್ಯವೈಖರಿಗೆ ಅದು ಸವಾಲಾಗುತ್ತದೆ. ಮಹಾನಗರಗಳ ಸುರಕ್ಷತೆಗೂ ಸಂಶೋಧನೆ, ಅಧ್ಯಯನಗಳು ಇಲ್ಲಿ ನಡೆಯಲಿವೆ ಎಂದರು.

ಕೊಲ್ಕತ್ತಾ, ಹೈದರಾಬಾದ್, ಗಾಜಿಯಾಬಾದ್, ರಾಜಸ್ಥಾನ ಮತ್ತಿತರ ಕಡೆಗಳಲ್ಲಿರುವ ಸಿಡಿಐಟಿ ಸಂಸ್ಥೆಯು ಉತ್ತಮ ಕೊಡುಗೆಗಳನ್ನು ನೀಡುತ್ತಿವೆ. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯುವ ಅಧ್ಯಯನಗಳು ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಪೊಲೀಸ್ ತನಿಖೆಗಳಿಗೆ ನೆರವಾಗಲಿವೆ. ಬಿಪಿಆರ್ ಮತ್ತು ಡಿ ಸಂಸ್ಥೆಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಯೋಗ ,ಪ್ರೋತ್ಸಾಹ ನೀಡಲಿದೆ ಎಂದು ಭರವಸೆ ನೀಡಿದರು.

ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನದಲ್ಲಿ ವಸತಿ ನಿರ್ಮಾಣ : ದೇಶದ ಗಡಿರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರು ತಮ್ಮ ಕುಟುಂಬಗಳೊಂದಿಗೆ ನೆಮ್ಮದಿಯ ಬದುಕು ನಡೆಸುವಂತಾಗಲು ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆದ್ಯತೆ ನೀಡಿದ್ದಾರೆ. ಇ-ಆವಾಸ್ ಪೋರ್ಟಲ್ ಮೂಲಕ ವಸತಿ ಸೌಕರ್ಯಗಳ ಸುಧಾರಣೆಯಾಗುತ್ತಿವೆ. ದೇಶದ ಗಡಿ ಸುರಕ್ಷಾ ದಳಗಳಲ್ಲಿಯೇ ಐಟಿಬಿಪಿಯು ಬಹಳ ದುರ್ಗಮ ಮತ್ತು ವಿಷಮ ವಾತಾವರಣದಲ್ಲಿ ಉತ್ಕೃಷ್ಟ ದೇಶಭಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಭಾರತದ ಒಂದಿಂಚೂ ಜಮೀನು ಅತಿಕ್ರಮಣವಾಗದಂತೆ ಎಚ್ಚರಿಕೆಯ ದೇಶಸೇವೆ ಮಾಡುತ್ತಿದ್ದಾರೆ. ಐಟಿಬಿಪಿ ಯೋಧರು ಭೀಮವೀರರಾಗಿದ್ದಾರೆ. ಆಯುಷ್ಮಾನ್ ಆರೋಗ್ಯ ಯೋಜನೆ ಮೂಲಕ ಸೈನಿಕರ ಮತ್ತು ಅವರ ಕುಟುಂಬದ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಬೆಂಗಳೂರಿನ ಐಟಿಬಿಪಿ ಕಟ್ಟಡಗಳ ಸಮುಚ್ಛಯದಿಂದ ವರ್ಚುವಲ್ ಆಗಿ ಯೋಧರು ಮತ್ತು ಕುಟುಂಬದ ಸದಸ್ಯರು ಮಾತನಾಡಿ, ವಸತಿ ಸೌಕರ್ಯಗಳ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಷಿ,ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ,ಆರೋಗ್ಯ,ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್,ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ,ಭಾರತ ಟಿಬೇಟ್ ಗಡಿ ಪೊಲೀಸ್ ದಳದ ಮಹಾನಿರ್ದೇಶಕ ಅನೀಶ್ ದಯಾಳ್, ಹೆಚ್ಚುವರಿ ಮಹಾನಿರ್ದೇಶಕ ನೀರಜ್ ಸಿನ್ಹಾ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ : ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲಾ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.