ETV Bharat / state

ಕರ್ನಾಟಕಕ್ಕೆ ಮತ್ತೆ ಆಘಾತ! ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್​​ ನೀರು ಬಿಡುವಂತೆ CWRC ಆದೇಶ

author img

By ETV Bharat Karnataka Team

Published : Oct 11, 2023, 5:18 PM IST

Updated : Oct 11, 2023, 9:29 PM IST

ತಮಿಳುನಾಡಿಗೆ ಅಕ್ಟೋಬರ್ 16ರಿಂದ 31ರವರೆಗೆ ಪ್ರತಿ ದಿನ 3 ಸಾವಿರ ಕ್ಯೂಸೆಕ್​​ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಇಂದು ಆದೇಶ ಹೊರಡಿಸಿದೆ.

Cauvery Water Regulation Committee ordered Karnataka to release three thousand cusecs of water to Tamil Nadu
ಕರ್ನಾಟಕಕ್ಕೆ ಮತ್ತೆ ಆಘಾತ.. ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್​​ ನೀರು ಬಿಡುವಂತೆ CWRC ಆದೇಶ

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಬರಗಾಲದ ಕರಿಛಾಯೆ ಆವರಿಸಿರುವ ನಡುವೆಯೂ ಮತ್ತೊಂದು ಶಾಕ್​ ಎದುರಾಗಿದೆ. ಕೆಆರ್​ಎಸ್​ ಅಣೆಕಟ್ಟೆಯಿಂದ ತಮಿಳುನಾಡಿಗೆ ಅಕ್ಟೋಬರ್ 16ರಿಂದ ಅಕ್ಟೋಬರ್ 31 ರವರೆಗೆ ಪ್ರತಿ ದಿನ 3 ಸಾವಿರ ಕ್ಯೂಸೆಕ್​​ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ (CWRC) ಆದೇಶಿಸಿದೆ.

ಪ್ರತಿದಿನ 16 ಸಾವಿರ ಕ್ಯೂಸೆಕ್​ ನೀರು ಬಿಡಲು ತಮಿಳುನಾಡು ಪಟ್ಟು ಹಿಡಿದಿತ್ತು. 15 ದಿನಗಳಲ್ಲಿ ಒಟ್ಟು 20.75 ಟಿಎಂಸಿ ನೀರು ಬಿಡಲು ತಮಿಳುನಾಡು ಆಗ್ರಹಿಸಿತ್ತು. ಆದರೆ, ಕಾವೇರಿ ಜಲಾಶಯದಿಂದ ಒಂದು ಹನಿ‌ ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎಂದು ಸಿಡಬ್ಯೂಆರ್​ಸಿ ಎದುರು ಕರ್ನಾಟಕ ಬಲವಾದ ವಾದ ಮಂಡಿಸಿತ್ತು. ಬರಗಾಲ ಮತ್ತು ಮಳೆ ಕೊರತೆಯಿಂದ ಕಾವೇರಿ ಜಲಾಶಯಗಳಿಗೆ ಶೇಕಡಾ 50ಕ್ಕೂ ಹೆಚ್ಚು ನೀರಿನ ಒಳಹರಿವಿನ ಕೊರತೆ ಉಂಟಾಗಿದೆ ಎಂದು ವಾದ ಮಂಡಿಸಲಾಗಿತ್ತು.

ಆದರೆ, ಎರಡೂ ರಾಜ್ಯಗಳ ವಾದ ಮಂಡನೆ ಆಲಿಸಿದ ಬಳಿಕ ತಮಿಳುನಾಡಿಗೆ ಅಕ್ಟೋಬರ್ ಅಂತ್ಯದ ತನಕ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸಿಡಬ್ಯೂಆರ್​ಸಿ ಶಿಫಾರಸು ಮಾಡಿದೆ.

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಮತ್ತು ತಮಿಳುನಾಡು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಕಾವೇರಿ ನೀರು ನಿರ್ವಹಣಾ ಸಮಿತಿಯು ಎರಡು ರಾಜ್ಯಗಳ ವಾದ ವಿವಾದವನ್ನು ಆಲಿಸಿ ಈ ನಿರ್ಧಾರ ತಗೆದುಕೊಂಡಿದೆ. ತಮಿಳುನಾಡಿನ ಬಿಳಿ ಗುಂಡ್ಲು ಜಲಾಶಯಕ್ಕೆ ಸೇರುವ ಹಾಗೆ ಪ್ರತಿದಿನ 3000 ಕ್ಯೂಸೆಕ್​ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಿದೆ.

ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆಯಲ್ಲಿ ಕರ್ನಾಟಕ ಪರವಾಗಿ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಮತ್ತು ನ್ಯಾಯವಾದಿಗಳು ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆಯ ಕೊರತೆ ಉಂಟಾಗಿದೆ. ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳಹರಿವಿನಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚಿನ ಪ್ರಮಾಣದ ನೋರಿನ ಒಳಹರಿವಿನ ಕೊರತೆ ಉಂಟಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಒಂದು ಹನಿ ನೀರನ್ನೂ ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತನ್ನ ನಿಲುವು ಪ್ರತಿಪಾದಿಸಿತು.

ಕರ್ನಾಟಕದ ಈ ವಾದಕ್ಕೆ ಬಲವಾದ ವಿರೋಧವನ್ನು ವ್ಯಕ್ತಪಡಿಸಿ ವಾದ ಮಂಡಿಸಿದ ತಮಿಳುನಾಡು ಸರ್ಕಾರದ ಅಧಿಕಾರಿಗಳು ಅಕ್ಟೋಬರ್ ತಿಂಗಳ ಅಂತ್ಯದವರೆಗೆ ಪ್ರತಿದಿನ 16,000 ಕ್ಯೂಸೆಕ್​ನಂತೆ ಒಟ್ಟು 20.75 ಟಿಎಂಸಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ಮನವಿ ಮಾಡಿದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳುತ್ತಿದ್ದು ಜಲಾಶಯದ ಒಳಹರಿವು ಹೆಚ್ಚಿದೆ. ಹಾಗಾಗಿ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಲು ಸೂಚಿಸಬೇಕು ಎಂದು ಕೆಲವು ಅಂಕಿ ಅಂಶಗಳ ಮಾಹಿತಿಯನ್ನು ತಮಿಳುನಾಡು ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಸಮಿತಿಯ ಮುಂದೆ ಮಂಡಿಸಿದರು.

ಕರ್ನಾಟಕದಲ್ಲಿನ ಕಾವೇರಿ ಜಲಾನಯನ ಪ್ರದೇಶದಲ್ಲಿನ ಮಳೆ ಬೆಳೆ ಪರಿಸ್ಥಿತಿ ಹಾಗೂ ತಮಿಳುನಾಡಿನ ಬೆಳೆಗಳಿಗೆ ಅಗತ್ಯವಿರುವ ನೀರಿನ ಅಗತ್ಯ ಮಾಹಿತಿ ಪಡೆದ ನೀರು ನಿರ್ವಹಣಾ ಸಮಿತಿಯು ಕರ್ನಾಟಕಕ್ಕೆ ಅಕ್ಟೋಬರ್ 16 ರಿಂದ 31ರವರೆಗೆ ಒಟ್ಟು 16 ದಿನಗಳ ಕಾಲ ಪ್ರತಿದಿನ ಮೂರು ಸಾವಿರ ಕ್ಯೂಸೆಕ್​ ನೀರು ಬಿಡಬೇಕೆಂದು ತೀರ್ಮಾನಿಸಿದೆ. ಕಾವೇರಿ ನೀರು ನಿರ್ವಹಣ ಸಮಿತಿಯ ಈ ನಿರ್ಧಾರವನ್ನು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಸಭೆಯಲ್ಲಿ ಪ್ರಶ್ನೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ಅಂಕಿ- ಅಂಶಗಳ ಮಾಹಿತಿಯೊಂದಿಗೆ ಸಿದ್ಧತೆ ನಡೆಸಿದೆ.

ರಾಜ್ಯ ಸರ್ಕಾರದ ವೈಫಲ್ಯದಿಂದ ಮತ್ತೆ ಆದೇಶ - ಬೊಮ್ಮಾಯಿ ಕಿಡಿ: ಕಾವೇರಿ ನೀರು ನಿರ್ವಹಣೆ ಸಮಿತಿಯು ಮತ್ತೆ ಪ್ರತಿ ದಿನ 3000 ಸಾವಿರ ಕ್ಯೂಸೆಕ್​ ನೀರು ಬಿಡುವಂತೆ ಆದೇಶ ನೀಡಿರುವ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಸಿಡಬ್ಲ್ಯೂಆರ್​​ಸಿ ತಮಿಳುನಾಡು ನಿಯಮಬಾಹಿರವಾಗಿ ನೀರು ಬಳಕೆ ಮಾಡಿಕೊಂಡಿರುವುದು ಹಾಗೂ ಕರ್ನಾಟಕದ ನೀರಿನ ಅಗತ್ಯತೆಯನ್ನು ಅರಿಯದೇ ಆದೇಶ ಮಾಡುತ್ತಿದೆ ಎಂದಿದ್ದಾರೆ.

ರಾಜ್ಯ ಸರ್ಕಾರವೂ ಸಿಡಬ್ಲುಎಂಎ ಹಾಗೂ ಸಿಡಬ್ಲುಆರ್​​ಸಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಆದೇಶಗಳ ವಿರುದ್ದ ಮಧ್ಯಂತರ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಹಾಕಿಲ್ಲ. ಇದರ ಪರಿಣಾಮ ರಾಜ್ಯದ ವಿರುದ್ದ ಮತ್ತೊಂದು ಆದೇಶ ಬರುವಂತಾಗಿದೆ ಎಂದು ಕಿಡಿಕಾರಿದ್ದಾರೆ.

Last Updated : Oct 11, 2023, 9:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.