ETV Bharat / state

ನಾಮಪತ್ರ ಭರಾಟೆ: ಮಂಗಳವಾರ 770, ಈವರೆಗೆ ಒಟ್ಟು ಸಲ್ಲಿಕೆಯಾದ ನಾಮಪತ್ರಗಳೆಷ್ಟು?

author img

By

Published : Apr 19, 2023, 8:32 AM IST

Updated : Apr 19, 2023, 11:17 AM IST

ಮಂಗಳವಾರ ರಾಜ್ಯಾದ್ಯಂತ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟು 770 ನಾಮಪತ್ರ ಸಲ್ಲಿಕೆ ಆಗಿವೆ.

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಭರಾಟೆ ಮಂಗಳವಾರವೂ ರಾಜ್ಯಾದ್ಯಂತ ಮುಂದುವರಿಯಿತು. ವಿವಿಧ ಅಭ್ಯರ್ಥಿಗಳು ಜಾತ್ರೋಪಾದಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿವಿಧ ಪಕ್ಷಗಳ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಸೇರಿ 770 ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ ಒಟ್ಟು 2,033 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಕನಕಪುರ ಕ್ಷೇತ್ರದಿಂದ ಆರ್.ಅಶೋಕ್, ಗೋಕಾಕ್ ನಿಂದ ರಮೇಶ್ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಮಹೇಶ್ ಕುಮಟಳ್ಳಿ, ವೈ ಎಸ್ ವಿ ದತ್ತ, ಶಶಿಕಲಾ ಜೊಲ್ಲೆ, ಸುನಿಲ್ ಕುಮಾರ್, ಸಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ, ಬಿ. ಸಿ. ನಾಗೇಶ್, ವರ್ತೂರು ಪ್ರಕಾಶ್, ರಾಮಲಿಂಗರೆಡ್ಡಿ ಸೇರಿ ವಿವಿಧ ಪಕ್ಷಗಳ ನಾಯಕರು ಮಂಗಳವಾರ ನಾಮಪತ್ರ ಸಲ್ಲಿಸಿದರು.

ಎಷ್ಟು ನಾಮಪತ್ರ ಸಲ್ಲಿಕೆ?: ಮಂಗಳವಾರ 621 ಅಭ್ಯರ್ಥಿಗಳಿಂದ 770 ನಾಮಪತ್ರ ಸಲ್ಲಿಕೆಯಾಗಿದೆ. ಪುರುಷರಿಂದ 703 ನಾಮಪತ್ರ ಸಲ್ಲಿಕೆಯಾಗಿದ್ದರೆ, ಮಹಿಳಾ ಅಭ್ಯರ್ಥಿಗಳಿಂದ 67 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ ಅಭ್ಯರ್ಥಿಗಳಿಂದ ಮಂಗಳವಾರ ಒಟ್ಟು 130 ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್ ‌ಅಭ್ಯರ್ಥಿಗಳಿಂದ 116 ನಾಮಪತ್ರ, ಜೆಡಿಎಸ್ ಅಭ್ಯರ್ಥಿಗಳಿಂದ 75 ನಾಮಪತ್ರ, ಎಎಪಿಯಿಂದ 61, ಬಿಎಸ್​ಪಿಯಿಂದ 20, ಸಿಪಿಐ(ಎಂ)ನಿಂದ 1 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. 206 ಪಕ್ಷೇತರರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಗುರುತಿಸದ ನೋಂದಾಯಿತ ಪಕ್ಷಗಳಿಂದ 161 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬೆಂಗಳೂರಲ್ಲೂ ಮುಂದುವರಿದ ನಾಮಪತ್ರ ಭರಾಟೆ: ಬೆಂಗಳೂರಲ್ಲಿ ಮಂಗಳವಾರವೂ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು. ಬೆಂಗಳೂರಿನಲ್ಲೇ 100 ನಾಮಪತ್ರಗಳು ಮಂಗಳವಾರ ಸಲ್ಲಿಕೆಯಾಗಿವೆ. ಸಚಿವ ಭೈರತಿ ಬಸವರಾಜ್, ರಾಮಲಿಂಗರೆಡ್ಡಿ, ಸುರೇಶ್​ ಕುಮಾರ್, ಮಹದೇವಪುರದಿಂದ ಮಂಜುಳಾ.ಎಸ್, ಕಾಂಗ್ರೆಸ್​ ನ ಜಮೀರ್ ಅಹಮ್ಮದ್ ಖಾನ್, ಉಮೇಶ್ ಶೆಟ್ಟಿ, ರವೀಂದ್ರ ಸೇರಿ ಹಲವರು ನಾಮಪತ್ರ ಸಲ್ಲಿಕೆ ಮಾಡಿದರು. ಬಿಜೆಪಿಯಿಂದ ಬೆಂಗಳೂರಿನ ವಿವಿಧೆಡೆ 14 ನಾಮಪತ್ರ, ಕಾಂಗ್ರೆಸ್​ ನಿಂದ 24 ನಾಮಪತ್ರ, ಎಎಪಿಯಿಂದ 11 ಉಮೇದುವಾರಿಕೆ, ಜೆಡಿಎಸ್ ನಿಂದ 9 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಮಂಗಳವಾರ ಪಕ್ಷೇತರರಾಗಿ 22 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇನ್ನು ಮಂಗಳವಾರದಂದೇ ಸಚಿವ ಶಿವರಾಮ್ ಹೆಬ್ಬಾರ್ ಯಲ್ಲಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ ಸಲ್ಲಿಸಿರುವ ಘೋಷಣಾ ಪತ್ರದಲ್ಲಿ ತಮ್ಮ, ಪತ್ನಿ ಹಾಗೂ ಪುತ್ರನ ಆಸ್ತಿ ವಿವರವನ್ನು ನೀಡಿದ್ದಾರೆ. ಸಚಿವ ಶಿವರಾಮ್​ ಹೆಬ್ಬಾರ್​ರ ಒಟ್ಟಾರೆ ಆಸ್ತಿ ಮೌಲ್ಯ 21.16 ಕೋಟಿ ರೂಪಾಯಿ ಇದೆ ಎಂದು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಏಪ್ರಿಲ್​ 20 ಕೊನೆಯ ದಿನವಾಗಿದ್ದರೆ, 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆಯಲು ಏ. 24 ಕೊನೆಯ ದಿನವಾಗಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ

ಇದನ್ನೂ ಓದಿ: ಸಚಿವ ಶಿವರಾಮ್​ ಹೆಬ್ಬಾರ್ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ: ಹೆಬ್ಬಾರ್ ಆಸ್ತಿ ಎಷ್ಟುಗೊತ್ತಾ?

Last Updated : Apr 19, 2023, 11:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.