ಕಂಬಳ ಉತ್ಸವಕ್ಕೆ ಬ್ರಿಜ್ ಭೂಷಣ್ ಬರಲ್ಲ: ವಿವಾದಕ್ಕೆ ತೆರೆ ಎಳೆದ ಅಶೋಕ್ ರೈ

ಕಂಬಳ ಉತ್ಸವಕ್ಕೆ ಬ್ರಿಜ್ ಭೂಷಣ್ ಬರಲ್ಲ: ವಿವಾದಕ್ಕೆ ತೆರೆ ಎಳೆದ ಅಶೋಕ್ ರೈ
Bengaluru Kambala: ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಆಹ್ವಾನಿಸಲಾಗಿತ್ತು ಅವರು ಬರಲ್ಲ ಎಂದಿದ್ದರು. ಹೀಗಾಗಿ ಅವರ ಹೆಸರನ್ನು ಆಹ್ವಾನ ಪತ್ರಿಕೆಯಿಂದ ತೆಗೆಯುತ್ತೇವೆ ಎಂದು ಶಾಸಕ ಅಶೋಕ್ ರೈ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನವೆಂಬರ್ 25 ಹಾಗೂ 26 ರಂದು ಹಮ್ಮಿಕೊಂಡಿರುವ ಕಂಬಳ ಉತ್ಸವಕ್ಕೆ ಅತಿಥಿಯಾಗಿ ಭಾರತೀಯ ಕುಸ್ತಿ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಆಹ್ವಾನ ನೀಡಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರು ಕಂಬಳ ಸಮಿತಿ ವಿವಾದಕ್ಕೆ ತೆರೆ ಎಳೆದಿದೆ.
ಕಂಬಳ ಉತ್ಸವಕ್ಕೆ ಬ್ರಿಜ್ ಭೂಷಣ್ ಗೆ ಆಹ್ವಾನದ ಹಿನ್ನೆಲೆಯಲ್ಲಿ ಭಾರೀ ವಿರೋಧ ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ವಿವಾದದ ಉರುಳು ಸುತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತಿಕೊಂಡಿರುವ ಬೆಂಗಳೂರು ಕಂಬಳ ಸಮಿತಿಯ ನೇತೃತ್ವ ವಹಿಸಿರುವ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ರೈ ಈ ಬಗ್ಗೆ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈ, ಕಂಬಳ ಒಂದು ಕ್ರೀಡೆಯಾಗಿದೆ. ನ.25 ರಿಂದ ಎರಡು ದಿನಗಳ ಕಂಬಳ ಉತ್ಸವ ಹಮ್ಮಿಕೊಂಡಿದ್ದು, ಇದು ದೊಡ್ಡ ಕಾರ್ಯಕ್ರಮ ಆಗಿದೆ. ಅತಿಥಿಗಳನ್ನು ಆಹ್ವಾನಿಸುವ ವಿಚಾರದಲ್ಲಿ ಕೆಲ ಸಂಘಟನೆಗಳು ಇಂತಹವರನ್ನ ಕರೆಸಬೇಕು ಎಂದು ಮನವಿ ಮಾಡುತ್ತವೆ. ಪುನೀತ್ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳುತ್ತಾರೆ, ಅದೇ ರೀತಿ ಸಿದ್ದಿ ಜನಾಂಗದವರು ಬ್ರಿಜ್ ಭೂಷಣ್ ಅವರ ಹೆಸರು ಸೂಚಿಸಿದ್ದರು. ಗೋವಾದಲ್ಲಿ ಸಿದ್ದಿ ಹಾಗೂ ಕುಡುಬಿ ಜನಾಂಗದವರಿಗೆ ಬ್ರಿಜ್ ಭೂಷಣ್ ಕುಸ್ತಿ ತರಬೇತಿ ನೀಡಿದ್ದರು. ಅವರ ಸೇವೆ ಪರಿಗಣಿಸಿ ಕಂಬಳ ಉತ್ಸವಕ್ಕೆ ಅವರನ್ನ ಆಹ್ವಾನಿಸಲಾಗಿತ್ತು. ಈ ಬಗ್ಗೆ ಮತ್ತೆ ಅವರನ್ನು ಸಂಪರ್ಕಿಸಿದಾಗ ಕಂಬಳ ಉತ್ಸವಕ್ಕೆ ಬರುವುದಿಲ್ಲ ಎಂದಿದ್ದರು. ಆದರೆ, ಆಹ್ಬಾನ ಪತ್ರಿಕೆಯಲ್ಲಿ ಅವರ ಹೆಸರಿದ್ದು ಅದನ್ನು ತೆಗೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಂಬಳ ಒಂದು ಕ್ರೀಡೆಯಾಗಿದ್ದು ಇದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯವರು ಇದ್ದಾರೆ. ಇದು ರಾಜಕೀಯ ಕಾರ್ಯಕ್ರಮವಲ್ಲ. ಈ ಹಿಂದೆ ಪೇಟಾದಿಂದ ತೊಂದರೆಯಾದಾಗ ಸಿದ್ದರಾಮಯ್ಯ ಅವರು ಹೋರಾಟಕ್ಕೆ ಮುಂದಾಗಿದ್ದರು. ಅದರ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದ್ದರು. ಇದಕ್ಕೆ ಕೋರ್ಟ್ ಸಹ ಒಪ್ಪಿಗೆ ನೀಡಿದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ರೈ ತಿಳಿಸಿದ್ದಾರೆ.
-
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ವಿವಾದದ ಸ್ವರೂಪ ನೀಡುವ ಅಗತ್ಯವಿಲ್ಲ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 21, 2023
ಬ್ರಿಜ್ ಭೂಷಣ್ ಅವರ ಆಹ್ವಾನದ ಕುರಿತು ನನಗೆ ಮಾಹಿತಿ ಸಿಕ್ಕ ತಕ್ಷಣ ನಾನು ಆಯೋಜಕ ಸಮಿತಿಯವರೊಂದಿಗೆ ಮಾತನಾಡಿ, ವಿವಾದಿತ ಸಂಸದರನ್ನು ಆಹ್ವಾನಿತರ ಪಟ್ಟಿಯಿಂದ ಕೈಬಿಡುವಂತೆ ಸಲಹೆ ನೀಡಿದೆ.
ಈ ಕುರಿತು… pic.twitter.com/YKaLqtO9OB
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಎಕ್ಸ್ ಆ್ಯಪ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. "ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ವಿವಾದದ ಸ್ವರೂಪ ನೀಡುವ ಅಗತ್ಯವಿಲ್ಲ. ಬ್ರಿಜ್ ಭೂಷಣ್ ಅವರ ಆಹ್ವಾನದ ಕುರಿತು ನನಗೆ ಮಾಹಿತಿ ಸಿಕ್ಕ ತಕ್ಷಣ ನಾನು ಆಯೋಜಕ ಸಮಿತಿಯವರೊಂದಿಗೆ ಮಾತನಾಡಿ, ವಿವಾದಿತ ಸಂಸದರನ್ನು ಆಹ್ವಾನಿತರ ಪಟ್ಟಿಯಿಂದ ಕೈಬಿಡುವಂತೆ ಸಲಹೆ ನೀಡಿದೆ. ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿರುವ ಸಮಿತಿಯವರು ಬ್ರಿಜ್ ಅವರಿಗೆ ನೀಡಿರುವ ಆಹ್ವಾನವನ್ನು ರದ್ದುಗೊಳಿಸಿದ್ದಾರೆ. ಆಹ್ವಾನ ಪತ್ರಿಕೆಯನ್ನು ಬದಲಾಯಿಸುವುದಾಗಿ ತಿಳಿಸಿದ್ದಾರೆ" ಎಂದಿದ್ದಾರೆ.
ವಿರೋಧ ಏಕೆ?: ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ಬಗ್ಗೆ ದೆಹಲಿ ಪೊಲೀಸರು ಪ್ರತ್ಯೇಕ ಎರಡು ಎಫ್ಐಆರ್ ದಾಖಲಿಸಿಕೊಂಡಿದ್ದರು. ಪ್ರಕರಣ ತನಿಖೆ ನಡೆಸಿರುವ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿಂಗ್ ಆಗಮನಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
