ETV Bharat / state

ಬಿಎಂಟಿಸಿ ಬಸ್​ನಲ್ಲಿ ಬೆಂಕಿ: ನಿದ್ರಿಸುತ್ತಿದ್ದ ನಿರ್ವಾಹಕ ಸಜೀವ ದಹನ

author img

By

Published : Mar 10, 2023, 8:45 AM IST

Updated : Mar 10, 2023, 2:30 PM IST

ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್​ಗಳು ಹೊತ್ತಿ ಉರಿಯುತ್ತಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಕರು ಸಂಚರಿಸುವ ಈ ಬಸ್‌ಗಳೆಷ್ಟು ಸುರಕ್ಷಿತ? ಎಂಬ ಅನುಮಾನ ಮೂಡಿದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಎಂಬಂತೆ, ಇದೀಗ ಲಿಂಗಧೀರನಹಳ್ಳಿ ಸ್ಟ್ಯಾಂಡ್​ ಬಳಿ ನಿಂತ್ತಿದ್ದ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ನಿರ್ವಾಹಕ ಸಜೀವ ದಹನವಾದ ಘಟನೆ ನಡೆದಿದೆ.

bmtc
ಬಿಎಂಟಿಸಿ

ಬೆಂಗಳೂರಿನಲ್ಲಿ ಹೊತ್ತಿ ಉರಿದ ಬಿಎಂಟಿಸಿ

ಬೆಂಗಳೂರು: ಬಿಎಂಟಿಸಿ ಬಸ್​ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಬಸ್ ಒಳಗೆ ಮಲಗಿದ್ದ ನಿರ್ವಾಹಕ ಸಜೀವ ದಹನವಾದ ಘಟನೆ ತಡರಾತ್ರಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ‌. ಮುತ್ತಯ್ಯ (45) ಸ್ಥಳದಲ್ಲೇ ಸಾವಿಗೀಡಾದ ಬಸ್ ನಿರ್ವಾಹಕರೆಂದು ಗುರುತಿಸಲಾಗಿದೆ​. ‌

ವಿವರ: ಲಿಂಗಧೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ತಡರಾತ್ರಿ ಸುಮ್ಮನಹಳ್ಳಿ ಡಿಪೋಗೆ ಸೇರಿದ್ದ KA 57 F 2069 ನಂಬರಿನ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ನಿಲ್ಲಿಸಲಾಗಿತ್ತು. ಬಸ್​ನಲ್ಲಿ ನಿರ್ವಾಹಕ ಮುತ್ತಯ್ಯ ಮತ್ತು ಚಾಲಕ ಪ್ರಕಾಶ್ ಮಲಗಿದ್ದರು. ಮುಂಜಾನೆ 4 ಗಂಟೆ ವೇಳೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಇಡೀ ಬಸ್​ಗೆ ಬೆಂಕಿ ಆವರಿಸಿದ್ದು, ಅಗ್ನಿಯ ಕೆನ್ನಾಲಿಗೆಗೆ ಬಸ್​ನೊಳಗಿದ್ದ ಮುತ್ತಯ್ಯ ಬಲಿಯಾಗಿದ್ದಾರೆ. ಅದೃಷ್ಟವಶಾತ್ ಚಾಲಕ ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಲು ಹೊರ ಹೋದಾಗ ಘಟನೆ ನಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

bmtc
ಸಜೀವ ದಹನವಾದ ಬಸ್​ ಕಂಡಕ್ಟರ್​ ಮುತ್ತಯ್ಯ

ಇದನ್ನೂ ಓದಿ: ಮತ್ತೊಂದು ಬಿಎಂಟಿಸಿ ಬಸ್​​ನಲ್ಲಿ ಬೆಂಕಿ: 30 ಪ್ರಯಾಣಿಕರು ಅಪಾಯದಿಂದ ಪಾರು

ಇಂತಹ ಅನಿರೀಕ್ಷಿತ ಘಟನೆಗಳಿಂದ ಚಾಲಕ ಮತ್ತು ನಿರ್ವಾಹಕರಿಗೆ ಬಿಎಂಟಿಸಿ ಬಸ್ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವವಾಗಿದೆ. ಪ್ರತಿನಿತ್ಯ ಪ್ರಯಾಣಿಕರ ಸೇವೆ ಮುಗಿಸಿ ನೂರಾರು ಮಂದಿ ಚಾಲಕರು, ನಿರ್ವಾಹಕರು ಬಸ್​ನಲ್ಲಿಯೇ ರಾತ್ರಿ ತಂಗುತ್ತಾರೆ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಖರೀದಿಸಿರುವ ಬಸ್​ಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದರಿಂದ ನಿಗಮ ಬಸ್​ಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲವೇ? ಎಂಬ ಅನುಮಾನ ಕಾಡಲಾರಂಭಿಸಿದೆ.

ಇದನ್ನೂ ಓದಿ: ಬೆಂಕಿಗಾಹುತಿಯಾಗುವ ಬಿಎಂಟಿಸಿ ಬಸ್‌ಗಳು: ಪ್ರಯಾಣಿಕರಿಗೆ ಆತಂಕ

ಗುಜರಿ ಗೋದಾಮು ಅಗ್ನಿಗಾಹುತಿ: ಇನ್ನೊಂದೆಡೆ, ಅಗ್ನಿ ಅವಘಡದಿಂದ ಗುಜರಿ ಗೋದಾಮು ಹೊತ್ತಿ ಉರಿದಿದೆ. ಈ ಘಟನೆ ತಡರಾತ್ರಿ ನಾಯಂಡಳ್ಳಿ ಸಮೀಪದ ಪ್ರಮೋದ ಲೇಔಟ್​ನಲ್ಲಿ ನಡೆದಿದೆ. ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ಗುಜರಿ ಸಾಮಾನುಗಳನ್ನು ಇರಿಸಲಾಗಿದ್ದ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಗಮನಿಸಿದ ಬಿಬಿಎಂಪಿ ಮಾರ್ಷಲ್‌ಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಗೋದಾಮುಗಳಲ್ಲಿ ಮಲಗಿದ್ದವರನ್ನು ಎಬ್ಬಿಸಿ ಕಳುಹಿಸಿದ್ದರಿಂದ ಭಾರಿ ದುರಂತ ತಪ್ಪಿದೆ. ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನ ದೌಡಾಯಿಸಿದ್ದು,‌ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.

ಇದನ್ನೂ ಓದಿ: ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ: ಪ್ರಾಣಾಪಾಯದಿಂದ ಪಾರಾದ 40 ಪ್ರಯಾಣಿಕರು

ಇನ್ನು ಒಡಿಶಾದ ಮರೀಚಿಕೋಟ್ ಚಾಚಾ ಲಕ್ಷ್ಮಿ ಮಾರ್ಕೆಟ್ ಕಾಂಪ್ಲೆಕ್ಸ್​ನಲ್ಲಿಯೂ ಸಹ ಅಗ್ನಿ ಅವಘಡ ಸಂಭವಿಸಿತ್ತು. 12 ಗಂಟೆ ಕಳೆದರೂ ಬೆಂಕಿ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಸೋಮವಾರ ರಾತ್ರಿ 8 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಮಾಹಿತಿ ಪಡೆದ 100ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಪುರಿ ಮಾರ್ಕೆಟ್ ಕಾಂಪ್ಲೆಕ್ಸ್​ನಲ್ಲಿ ಅಗ್ನಿ ಅವಘಡ: 12 ಗಂಟೆ ನಂತರವೂ ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ..!

Last Updated : Mar 10, 2023, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.