ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಂದಗಿಯಿಂದ ಜೆಪಿ ನಡ್ಡಾ ಚಾಲನೆ: ಡಾ. ಸಿ.ಎನ್.ಅಶ್ವತ್ಥ ನಾರಾಯಣ

author img

By

Published : Jan 16, 2023, 5:59 PM IST

vijaya sankalpa abhiyana

ಬಿಜೆಪಿಯಿಂದ ವಿಜಯ ಸಂಕಲ್ಪ ಅಭಿಯಾನ - ಇದೇ 21 ರಿಂದ ಅಭಿಯಾನಕ್ಕೆ ಚಾಲನೆ - ಜೆ ಪಿ ನಡ್ಡಾ ಅವರಿಂದ ಕಾರ್ಯಕ್ರಮದ ಉದ್ಘಾಟನೆ.

ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಂಧಗಿಯಿಂದ ಜೆಪಿ ನಡ್ಡಾ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ ಅಶ್ವತ್ಥ ನಾರಾಯಣ

ಬೆಂಗಳೂರು: ಬಿಜೆಪಿಯ ಬೂತ್ ವಿಜಯ್ ಅಭಿಯಾನದ ನಂತರ ವಿಜಯ ಸಂಕಲ್ಪ ಅಭಿಯಾನವನ್ನು ಜನವರಿ 21 ರಿಂದ 29ರವರೆಗೆ ಹಮ್ಮಿಕೊಳ್ಳಲಾಗುವುದು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದ ಸಿಂದಗಿಯಲ್ಲಿ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ ಎಂದು ಅಭಿಯಾನದ ರಾಜ್ಯ ಸಂಚಾಲಕ ಮತ್ತು ರಾಜ್ಯದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾರ್ಗದರ್ಶಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು 21ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮನೆಮನೆಗೆ ಕರಪತ್ರ: ಕೇಂದ್ರ- ರಾಜ್ಯ ಸರಕಾರಗಳ ಸಾಧನೆ, ಕೊಡುಗೆ, ಕಾರ್ಯಕ್ರಮಗಳ ಕುರಿತು ಕರಪತ್ರಗಳನ್ನು ಹಂಚಿಕೆ ಮಾಡಲಾಗುವುದು. 2 ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ, ಅವರ ಮನೆ ಮನೆಗೆ ತೆರಳಿ ಕರಪತ್ರ ಹಂಚಲಿದ್ದೇವೆ. ಫಲಾನುಭವಿಗಳನ್ನು ಮಾತನಾಡಿಸಿ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಲಿದ್ದೇವೆ. ಬಿಜೆಪಿ ಸರಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ಆದುದನ್ನು ತಿಳಿಸಲಿದ್ದೇವೆ. ವಾಹನಗಳ ಮೇಲೆ ಸ್ಟಿಕರ್ ಹಾಕಿಸುವ ಕೆಲಸವೂ ನಡೆಯಲಿದೆ ಎಂದು ವಿವರ ನೀಡಿದರು.

ಇದಕ್ಕಾಗಿ ಪೂರ್ವಭಾವಿ ಸಭೆಗಳನ್ನು ಈಗಾಗಲೇ 10 ವಿಭಾಗ ಮಟ್ಟದಲ್ಲಿ ನಡೆಸಲಾಗಿದೆ. 39 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳಲ್ಲಿ ಸಭೆಗಳನ್ನು ಏರ್ಪಡಿಸಿ ಸಮಿತಿಗಳನ್ನೂ ರಚಿಸಲಾಗಿದೆ, ಏಕಕಾಲದಲ್ಲಿ ಎಲ್ಲ ಬೂತ್‍ಗಳಲ್ಲೂ, ಮಂಡಲಗಳಲ್ಲೂ ಅಭಿಯಾನ ಮುಂದುವರಿಯಲಿದೆ ಎಂದು ತಿಳಿಸಿದರು. ಕೇಂದ್ರ- ರಾಜ್ಯಗಳ ಸಚಿವರು, ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ವಿಧಾನಪರಿಷತ್ತಿನ ಸದಸ್ಯರು, ಪಕ್ಷದ ಪ್ರಮುಖರು ಈ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.

ಮಿಸ್ಡ್ ಕಾಲ್ ಸದಸ್ಯತ್ವ: ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನವೂ ನಡೆಯಲಿದೆ. ಒಂದು ಕೋಟಿಗೂ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದೇವೆ. ಸಮಾಜದ ಸಮಸ್ತರನ್ನು ಪಕ್ಷದ ಜೊತೆ ಸೇರ್ಪಡೆ ಮಾಡಿ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರನ್ನೂ ಜೊತೆಗೂಡಿಸಲಾಗುವುದು. ಬಿಜೆಪಿ ನೇತೃತ್ವದ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೂತ್ ವಿಜಯ ಅಭಿಯಾನ: ಬೂತ್ ವಿಜಯ ಅಭಿಯಾನವನ್ನು ಪಕ್ಷವು ಈಗಾಗಲೇ ಯಶಸ್ವಿಯಾಗಿ - ಅಭೂತಪೂರ್ವವಾಗಿ ಪೂರ್ಣಗೊಳಿಸಿದೆ ಎಂದು ಅವರು ತಿಳಿಸಿದರು. 58 ಸಾವಿರಕ್ಕೂ ಹೆಚ್ಚು ಬೂತ್ ಇದ್ದು, ಆ ಪೈಕಿ 51 ಸಾವಿರಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಲಾಗಿದೆ. ಪೇಜ್ ಪ್ರಮುಖರನ್ನು ನೇಮಿಸಿದ್ದು, 32 ಲಕ್ಷಕ್ಕೂ ಹೆಚ್ಚು ಮನೆಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾರಿಸಿ ಪಕ್ಷವನ್ನು ಸದೃಢವಾಗಿ ಬೆಳೆಸಲಾಗುವುದು. 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಕನಿಷ್ಠ ಶೇ 90 ಬೂತ್‍ಗಳಲ್ಲಿ ಕೇಳಿಸಲಿದ್ದೇವೆ. ಕನಿಷ್ಠ 5 ಲಕ್ಷ ಗೋಡೆ ಬರಹಗಳನ್ನೂ ಮಾಡುತ್ತೇವೆ. ಕಾರು, ಬೈಕ್ ಮತ್ತಿತರ ವಾಹನಗಳ ಮೇಲೆ ಹಚ್ಚಲು ಕನಿಷ್ಠ 3 ಕೋಟಿ ಸ್ಟಿಕರ್ ಹಂಚಲಿದ್ದೇವೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಅತಿ ಕಡಿಮೆ ನಿರುದ್ಯೋಗ ಪ್ರಮಾಣ ಇದೆ. ಗರಿಷ್ಠ ಎಫ್‍ಡಿಐ, ಇನೊವೇಟಿವ್ ರಾಜ್ಯ, ತಂತ್ರಜ್ಞಾನ, ಕಂದಾಯ ಕಾಯ್ದೆ, ರೈತರ ಸಮಸ್ಯೆ ಪರಿಹಾರ ಮಾಡಿದ್ದೇವೆ. ಜಲ್‍ಜೀವನ್ ಮಿಷನ್‍ನಡಿ ಪ್ರತಿ ಮನೆಗೆ ಕುಡಿಯುವ ನೀರು ಕೊಡುತ್ತಿದ್ದೇವೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಗರಿಷ್ಠ ಅನುದಾನ ಕೊಟ್ಟಿದ್ದೇವೆ, 300 ನಮ್ಮ ಕ್ಲಿನಿಕ್, ತಾಲೂಕು- ಜಿಲ್ಲಾ ಆಸ್ಪತ್ರೆಗಳ ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗಿದೆ. ಹಾಸ್ಟೆಲ್‍ಗಳ ನಿರ್ಮಾಣ ಸೇರಿ ಎಲ್ಲ ವರ್ಗದವರಿಗೆ ತಲುಪುತ್ತಿದ್ದೇವೆ. ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದೇವೆ ಎಂದು ವಿವರ ನೀಡಿದರು.

150 ಕ್ಷೇತ್ರಗಳಲ್ಲಿ ಗೆಲುವು ಖಚಿತ: 150 ಕ್ಷೇತ್ರಗಳಲ್ಲಿ ಗೆಲುವಿನ ಮಿಷನ್ ಅನ್ನು ಈಡೇರಿಸಲು ಬಿಜೆಪಿ ಸಿದ್ಧಗೊಂಡಿದೆ. ಪವರ್ ಕಟ್ ಮಾಡಿದ, ಕತ್ತಲಲ್ಲಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಎಲ್ಲಿಂದ ಉಚಿತ ವಿದ್ಯುತ್ ಕೊಡಲು ಸಾಧ್ಯ, ರಾಮಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದು, ಗೋಹತ್ಯಾ ನಿಷೇಧ ಸೇರಿ ಅನೇಕ ಮಹತ್ವದ ನಿರ್ಧಾರಗಳನ್ನು ನಮ್ಮ ಡಬಲ್ ಎಂಜಿನ್ ಸರಕಾರ ತೆಗೆದುಕೊಂಡಿದೆ. ಮಹದಾಯಿ, ಕಾವೇರಿ, ಕೃಷ್ಣಾ, ಎತ್ತಿನಹೊಳೆ ಸೇರಿ ನೀರಾವರಿಗೆ ಆದ್ಯತೆ ಕೊಟ್ಟಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಗೆ ಗರಿಷ್ಠ ಆದ್ಯತೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಯತ್ನಾಳ್ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮ : ಸಚಿವ ಅಶ್ವತ್ಥ ನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.