ETV Bharat / state

ಶಕ್ತಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಬಿಜೆಪಿ ಮಾತು ಅತೃಪ್ತ ಆತ್ಮಗಳ ವ್ಯರ್ಥ ಪ್ರಲಾಪದಂತಿದೆ: ಕಾಂಗ್ರೆಸ್

author img

By ETV Bharat Karnataka Team

Published : Oct 29, 2023, 9:46 PM IST

ಬಿಜೆಪಿಗೆ ಸರ್ಕಾರವನ್ನು ಹೇಗೆ ವಿರೋಧಿಸಬೇಕು, ಟೀಕಿಸಬೇಕು ಎಂಬುದು ತಿಳಿಯದೆ ಅಕ್ಷರಶಃ ಮತಿಭ್ರಮಣೆಯಾಗಿದೆ ಎಂದು ಕಾಂಗ್ರೆಸ್​ ಕುಟುಕಿದೆ.

ಕಾಂಗ್ರೆಸ್
ಕಾಂಗ್ರೆಸ್

ಬೆಂಗಳೂರು: ಶಕ್ತಿ ಯೋಜನೆ ಇನ್ನೊಂದು ತಿಂಗಳಲ್ಲಿ ಸ್ಥಗಿತಗೊಳ್ಳಲಿದೆ ಎಂದಿರುವ ಬಿಜೆಪಿ ಮಾತು ಅತೃಪ್ತ ಆತ್ಮಗಳ ವ್ಯರ್ಥ ಪ್ರಲಾಪದಂತಿದೆ ಎಂದು ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ. ಎಕ್ಸ್ ಪೋಸ್ಟ್ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯ ಕಾಂಗ್ರೆಸ್, 5 ತಿಂಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ ಬಿಜೆಪಿಗೆ ಸರ್ಕಾರವನ್ನು ಹೇಗೆ ವಿರೋಧಿಸಬೇಕು, ಟೀಕಿಸಬೇಕು ಎಂದು ತಿಳಿಯದೆ ಅಕ್ಷರಶಃ ಮತಿಭ್ರಮಣೆಯಾದಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್​ ಹರಿಹಾಯ್ದಿದೆ.

ಶಕ್ತಿ ಯೋಜನೆ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ಯೋಜನೆಯಾಗಿ ರಾಜ್ಯದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಶಕ್ತಿ ತುಂಬುತ್ತಿದೆ. ಇಂತಹ ಅಪಪ್ರಚಾರಗಳಿಂದ ಬಿಜೆಪಿ ಮುಖಭಂಗ ಅನುಭವಿಸುತ್ತದೆಯೇ ಹೊರತು ಸಾಧನೆ ಮಾಡಲಾಗದು ಎಂದು ಟೀಕಿಸಿದೆ.

ಉಚಿತ ಪ್ರಯಾಣದಿಂದ ಸಾರಿಗೆ ನಿಗಮಗಳು ದಿವಾಳಿಯಾಗುತ್ತವೆ ಎಂದಿತ್ತು. ಆದರೆ ನಿಗಮಗಳಿಗೆ ಹೆಚ್ಚು ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಹೆಚ್ಚಿಸಿ ಸಾರಿಗೆ ನಿಗಮಗಳಿಗೆ ಹಾಗೂ ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬುತ್ತೇವೆ. ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಬಂದಿದೆ. ದೇವಾಲಯಗಳ ಆದಾಯಕ್ಕೆ ಶಕ್ತಿ ಬಂದಿದೆ. ಇಂತಹ ಯೋಜನೆ ನಿಲ್ಲಲಿದೆ ಎನ್ನುವ ಬಿಜೆಪಿಯದ್ದು ನನಸಾಗದ ಕನಸು ಮಾತ್ರ ಎಂದು ಕಾಂಗ್ರೆಸ್​ ಕಿಡಿಕಾರಿದೆ.

ಶಕ್ತಿ ಯೋಜನೆಯ ಯಶಸ್ಸು ಬಿಜೆಪಿಯವರ ನಿದ್ದೆಗೆಡಿಸಿರುವುದರಲ್ಲಿ ಎರಡು ಮಾತಿಲ್ಲ. ಶಕ್ತಿ ಯೋಜನೆಗೆ ನಿಜವಾಗಲೂ ಶಕ್ತಿ ತುಂಬುತ್ತಿರುವ ಬಿಜೆಪಿಯವರಿಗೆ ಧನ್ಯವಾದಗಳು. ಶಕ್ತಿ ಯೋಜನೆ ಇನ್ನೊಂದು ತಿಂಗಳಿಗೆ ನಿಲ್ಲಲಿದೆ ಎಂದು‌ ಬಿಜೆಪಿಯವರು ಬಡಬಡಾಯಿಸುತ್ತಿದ್ದಾರೆ. ಶಕ್ತಿ ಯೋಜನೆ ಅನುಷ್ಠಾನವೇ ಆಗುವುದಿಲ್ಲ. ಸಾರಿಗೆ ಸಂಸ್ಥೆಗಳು ದಿವಾಳಿಯಾಗಲಿವೆ ಎಂದು ಬೊಬ್ಬೆ ಹೊಡೆಯುತ್ತಿದ್ದವರು ಇಂದು ಈಗಾಗಲೇ ರೂ. 2000 ಕೋಟಿ ವೆಚ್ಚವಾಗಿದೆ, ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಖಾಲಿಯಾಗುತ್ತಿದೆ ಎನ್ನುತ್ತಿದ್ದಾರೆ. ಬಜೆಟ್​ನಲ್ಲಿ ಮೀಸಲಿಟ್ಟಿರುವ ಹಣವನ್ನು ಹೆಚ್ಚಿಸಿ ಸಾರಿಗೆ ಸಂಸ್ಥೆಗಳಿಗೆ‌ ಹಣ ನೀಡುವ ಸಾಮರ್ಥ್ಯ ಸರ್ಕಾರಕ್ಕಿದೆ ಎಂದು ತಿಳಿಸಿದೆ.

ಕಳೆದ 5 ವರ್ಷಗಳ ಬಿಜೆಪಿ ಆಡಳಿತದಲ್ಲಿ ಒಂದೇ‌ ಒಂದು ನೇಮಕಾತಿ ಮಾಡದೆ, ಬಸ್​ಗಳನ್ನು ಖರೀದಿಸದೆ, ಸಾರ್ವಜನಿಕರು ಡಕೋಟ ಬಸ್ಸಿನಲ್ಲಿ ಓಡಾಡುವಂತೆ ಮಾಡಿ, ಸಾರಿಗೆ ಸಂಸ್ಥೆಗಳಲ್ಲಿ 31.03.2023 ಕ್ಕೆ ರೂ.3735 ಕೋಟಿ ಬಾಕಿ‌ ಹೊಣೆಗಾರಿಕೆ ಇಟ್ಟಿರುವ ಕೀರ್ತಿ ಬಿಜೆಪಿಯವರಿಗೆ ಸಲ್ಲಬೇಕು. ಈಗಾಗಲೇ ನಾವು 5675 ಬಸ್​ಗಳ ಖರೀದಿಯ ಪ್ರಕ್ರಿಯೆ ಹಾಗೂ 8719 ಸಿಬ್ಬಂದಿಯ ನೇಮಕಾತಿಗೆ ಅನುಮತಿ‌ ನೀಡಿದ್ದೇವೆ. ನಮ್ಮ ಕೆಲಸವೇ‌ ನಮ್ಮ ಶಕ್ತಿ ಎಂದು ನಿರೂಪಿಸಿದ್ದೇವೆ ಎಂದಿದೆ ಕಾಂಗ್ರೆಸ್​.

ಇದನ್ನೂ ಓದಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಸಲ್ಲಿಸುವ ಜಾತಿಗಣತಿ ವರದಿಯನ್ನು ನಾವು ಸ್ವೀಕರಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.