ETV Bharat / state

ಬಿಜೆಪಿಯಲ್ಲಿ ಹೊರಗಿನವರು, ಒಳಗಿನವರು ಎನ್ನುವ ತಾರತಮ್ಯವಿಲ್ಲ: ರವಿಕುಮಾರ್

author img

By

Published : Jun 26, 2023, 3:19 PM IST

ಬಿಜೆಪಿಯ ಮುಂದಿನ ರಾಜ್ಯಾಧ್ಯಕ್ಷರನ್ನು ದೆಹಲಿ ನಾಯಕರು ಆಯ್ಕೆ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

Etv Bharatbjp-state-general-secretary-ravikumar-reaction-on-eshwarappa-statement
ಬಿಜೆಪಿಯಲ್ಲಿ ಹೊರಗಿನವರು, ಒಳಗಿನವರು ಎನ್ನುವ ತಾರತಮ್ಯವಿಲ್ಲ: ರವಿಕುಮಾರ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರನ್ನು ಬಿಜೆಪಿಗೆ ಕರೆದುಕೊಂಡು ಬಂದ ಕಾರಣಕ್ಕಾಗಿಯೇ ನಾವು ಇಂದು ಈ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆ ಎನ್ನುವ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಹೇಳಿಕೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಳ್ಳಿಹಾಕಿದ್ದಾರೆ. ಅವರೆಲ್ಲಾ ಬಂದಿದ್ದರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿತ್ತು, ನಾವು ಎಲ್ಲರೂ ಒಟ್ಟಾಗಿ ಹಾಲು ಜೇನಿನಂತೆ ಇದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲಿಲ್ಲ, ಈಶ್ವರಪ್ಪನವರು ಯಾವ ಹಿನ್ನೆಲೆಯಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಹೊರಗಿನವರು, ಒಳಗಿನವರು ಅಂತ ನಮ್ಮ ನಡುವೆ ಭೇದಭಾವ ಇಲ್ಲ. ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂದ ಅವರು, ಕಾಂಗ್ರೆಸ್ ಗಾಳಿ ಈಗ ನಮ್ಮಲ್ಲೂ ಬೀಸುತ್ತಿದೆ. ಅವರೆಲ್ಲಾ ಬಂದು ಪಕ್ಷದಲ್ಲಿ ಶಿಸ್ತು ಕಡಿಮೆ ಆಗಿದೆ. ಕಾಂಗ್ರೆಸ್ ನಾಯಕರನ್ನ ಕರೆದುಕೊಂಡು ಬಂದಿದ್ದರಿದಲೇ ನಾವು ಈಗ ಅನುಭವಿಸಬೇಕಾಗಿದೆ ಎಂದಿದ್ದ ಈಶ್ವರಪ್ಪನವರ ಅಭಿಪ್ರಾಯವನ್ನು ತಳ್ಳಿಹಾಕಿದರು.

ಗೊಂದಲಗಳು ಪಕ್ಷದಲ್ಲಿ ಇಲ್ಲ ಅಂತ ನಾನು ಹೇಳಲ್ಲ, ನಮ್ಮಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಅದನ್ನೆಲ್ಲ ಸರಿಪಡಿಸಿಕೊಳ್ಳುತ್ತೇವೆ. ಗೊಂದಲಗಳನ್ನು ಸರಿಪಡಿಸಲು ನಮ್ಮ ನಾಯಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ ಬಹಿರಂಗ ಅಸಮಾಧಾನಕ್ಕೆ ಬಂಡಾಯದ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ಒಟ್ಟಾಗಿ ಸೇರಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ. ಮತ್ತೊಮ್ಮೆ ರಾಜ್ಯದಲ್ಲಿ ಹೊಸ ಶಕ್ತಿ, ಹೊಸ ಚೈತನ್ಯವನ್ನು ಕಾರ್ಯಕರ್ತರಲ್ಲಿ ತುಂಬುತ್ತೇವೆ. ಮತ್ತೆ ನಾವು ಗೆದ್ದೇ ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಬಿಜೆಪಿ ಸಭೆ.. ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ

ದಲಿತರು ರಾಜ್ಯಾಧ್ಯಕ್ಷ ಆಗಬೇಕು ಅನ್ನೋ ರಮೇಶ್ ಜಿಗಜಿಣಗಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಈಗ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಿದ್ದಾರೆ. ಅವರ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣಗೊಂಡಿದೆ, ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಪಕ್ಷದ ಹಿರಿಯ ನಾಯಕರಾದ ಬಿ ಎಸ್​ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸದಾನಂದ ಗೌಡ, ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿಯಲ್ಲಿ ದೊಡ್ಡ ದೊಡ್ಡ ನಾಯಕರು ಇದ್ದಾರೆ. ಮುಂದಿನ ರಾಜ್ಯಾಧ್ಯಕ್ಷ ಯಾರಾಗಬೇಕು ಅಂತ ನಮ್ಮ ನಾಯಕರು ವರಿಷ್ಠರ ಜತೆ ಚರ್ಚಿಸಿ ನಿರ್ಧಾರ ಮಾಡುತ್ತಾರೆ. ಅಂತಿಮವಾಗಿ ದೆಹಲಿ ನಾಯಕರು ಮುಂದಿನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ ಎಂದರು.

ಇಡೀ ರಾಜ್ಯದಲ್ಲಿ ಜಿಲ್ಲಾ ಸಭೆಗಳು ನಡೆಯುತ್ತಿವೆ, ನಮ್ಮ ಕಾರ್ಯಕರ್ತರು ಇದೇ ಸಭೆಗಳಲ್ಲಿ ಸೋಲಿನ ಬಗ್ಗೆ ಅಭಿಪ್ರಾಯ ಹೇಳುತ್ತಿದ್ದಾರೆ. ನಾವು ಸೋತಿದ್ದೇವೆ ನಿಜ, ಈ ಸೋಲು ದೀರ್ಘ ಕಾಲ ಉಳಿಯಬಾರದು ಇದನ್ನು ಹೊರತುಪಡಿಸಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಉದ್ದೇಶದಿಂದ ಸಭೆ ಮಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರ ಸಂಕಲ್ಪ ಶಕ್ತಿಯಿಂದ ಎಲ್ಲ ಲೋಕಸಭೆ ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Guarantee Scheme: ಮೋದಿ ಅಕ್ಕಿ ಅಲ್ಲ, ಯುಪಿಎ ಸರ್ಕಾರದ ಅಕ್ಕಿ: ಸಚಿವ ಸಂತೋಷ ಲಾಡ್ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.