ETV Bharat / state

ಕಾಂಗ್ರೆಸ್​ನಿಂದ ಬ್ರ್ಯಾಂಡ್​ ಬೆಂಗಳೂರು ನಾಶ: ಸಂಸದ ತೇಜಸ್ವಿ ಸೂರ್ಯ ಆಕ್ರೋಶ

author img

By

Published : Sep 8, 2022, 5:53 PM IST

ಮಳೆಯಿಂದ ರಾಜಧಾನಿ ಬೆಂಗಳೂರಿನ ಕೆಲ ಭಾಗಗಳು ಜಲಾವೃತವಾಗಿ ಸಂಕಷ್ಟಕ್ಕೀಡಾಗಿವೆ. ಇದನ್ನೇ ವಿವಾದ ಮಾಡಿ ಬ್ರ್ಯಾಂಡ್​ ಬೆಂಗಳೂರನ್ನು ಕಾಂಗ್ರೆಸ್​ ನಾಶ ಮಾಡುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದರು.

bjp-mp-tejasvi-surya
ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳು ಜಲಾವೃತವಾಗಿದ್ದು, ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಐಟಿ ಕಂಪನಿಗಳು ಟೀಕೆ ಮಾಡಿವೆ. ಇದರಿಂದ ಬ್ರ್ಯಾಂಡ್​ ಬೆಂಗಳೂರು ಕುಸಿಯುತ್ತಿದ್ದು, ಇದಕ್ಕೆ ವಿಪಕ್ಷಗಳೇ ಕಾರಣ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಬ್ರ್ಯಾಂಡ್ ಬೆಂಗಳೂರನ್ನು ಹಾನಿ ಮಾಡಲು ಪ್ರಯತ್ನಿಸುತ್ತಿವೆ. ನಗರದ ಕೆಲವು ಭಾಗಗಳು ಮಾತ್ರ ಮಳೆ ನೀರಿನಿಂದ ಉಂಟಾದ ಪ್ರವಾಹಕ್ಕೆ ಜಲಾವೃತವಾಗಿದೆ. ಬೆಳ್ಳಂದೂರಿನಲ್ಲಿ ಐಟಿ ಪಾರ್ಕ್, ಕೆರೆ ಒತ್ತುವರಿ ಮಾಡಿದವರು ಯಾರು? ಇದಕ್ಕೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಪ್ರಶ್ನಿಸಿದರು.

ಪ್ರವಾಹದ ವೇಳೆ ದೋಸೆ ಪ್ರಚಾರ ಮಾಡಿದ್ದರ ವಿರುದ್ಧ ವ್ಯಕ್ತವಾದ ಟೀಕೆಗೆ ಉತ್ತರಿಸಿ, ದೋಸೆ ಮಾತ್ರವಲ್ಲ, ಎಲೆಕ್ಟ್ರಿಕ್ ಅಂಗಡಿ ಉದ್ಘಾಟನೆಗೆ ಕರೆದರೂ ನಾನು ಹೋಗುತ್ತೇನೆ. ಜೊತೆಗೆ ಯಾವುದೇ ಅಂಗಡಿ ಉದ್ಘಾಟನೆಗೆ ಆಹ್ವಾನಿಸಿದರೂ ಜನಪ್ರತಿನಿಧಿಯಾಗಿ ಅಲ್ಲಿಗೆ ಹೋಗುವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಈ ವಿಷಯದಲ್ಲಿ ಟ್ರೋಲರ್ಸ್​ ಮತ್ತು ಕಾಂಗ್ರೆಸ್​ನವರಿಗೆ ಉತ್ತರಿಸಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್​ ಕೆಲಸವಿಲ್ಲದೇ ಅನಾವಶ್ಯಕವಾಗಿ ಇಂತಹವುಗಳನ್ನು ದೊಡ್ಡದಾಗಿ ಸೃಷ್ಟಿಸುತ್ತಾರೆ. ನನ್ನ ಕ್ಷೇತ್ರವಾದ ಬೆಂಗಳೂರು ದಕ್ಷಿಣದ ಬೊಮ್ಮನಹಳ್ಳಿಯ ಎರಡು ಪ್ರದೇಶ ಮಾತ್ರ ಮಳೆ ನೀರಿನಿಂದ ಸಮಸ್ಯೆ ಉಂಟಾಗಿದೆ. ಅದು ಬಿಟ್ಟರೆ ವಿಜಯನಗರ, ಜಯನಗರ, ಬಸವನಗುಡಿ ಸೇರಿ ಎಲ್ಲವೂ ಸಹಜವಾಗಿವೆ. ಕಾಂಗ್ರೆಸ್ ಇದನ್ನೇ ಬಳಸಿಕೊಂಡು ದೋಸೆ ವಿಚಾರವನ್ನು ವಿವಾದ ಮಾಡಿದೆ ಎಂದು ಟೀಕಿಸಿದರು.

ಮತದಾರರು ಶುರು ಮಾಡಿರುವ ದೋಸೆ ಅಂಗಡಿ ಉದ್ಘಾಟನೆಗೆ ನನ್ನನ್ನು ಕರೆದಿದ್ದರು. ಅದಕ್ಕಾಗಿ ನಾನು ಹೋಗಿದ್ದೆ. ಎಲೆಕ್ಟ್ರಿಕ್ ಅಂಗಡಿ, ಗಣಪತಿ ಉದ್ಘಾಟನೆಗೂ ಕರೆಯುತ್ತಾರೆ. ಜನಪ್ರತಿನಿಧಿಯಾಗಿ ಹೋಗುವುದು ನನ್ನ ಕೆಲಸ. ಮತದಾರರು ಕರೆದಾಗ ಬರಲಾಗಲ್ಲ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದರು.

ಓದಿ: ಬೆಣ್ಣೆ ದೋಸೆ ಪ್ರಚಾರ ಮಾಡಿದ ತೇಜಸ್ವಿ ಸೂರ್ಯ ವಿಡಿಯೋ ವೈರಲ್: ಪ್ರವಾಹ ಸಂಕಷ್ಟದಲ್ಲಿರುವ ಬೆಂಗಳೂರಿಗರಿಂದ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.