ETV Bharat / state

ಬಿಜೆಪಿ ದೇಶ ಆಳಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Nov 9, 2023, 5:45 PM IST

Updated : Nov 9, 2023, 8:20 PM IST

Siddaramaiah statement against BJP: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರು ಬಿಜೆಪಿಯವರಲ್ಲ, ಕಾಂಗ್ರೆಸ್​ನವರು ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ದೇಶ ಆಳಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಶತಮಾನೋತ್ಸವ ಹಾಗೂ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಬ್ರಿಟೀಷರ ವಿರುದ್ಧ ಹೋರಾಡಲು ಸೇವಾದಳ ಕಟ್ಟಲಾಯಿತು. ಸೇವಾ ದಳದ ಕಾರ್ಯಕರ್ತರನ್ನು, ಯಾರೇ ಗಾಂಧಿ ಟೋಪಿ ಹಾಕಿದವರು, ಇವರು ಸೇವಾ ದಳದವರೇ ಎಂದು ಗುರುತಿಸಿಕೊಳ್ಳುತ್ತಾರೆ. ಸೇವಾದಳ ಕಾಂಗ್ರೆಸ್​ನ ಆಧಾರಸ್ತಂಬ ಇದ್ದಂತೆ. ಮಹಾತ್ಮಾ ಗಾಂಧಿ ನಾಯಕತ್ವದಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಸೇವಾದಳದ ಕಾರ್ಯಕರ್ತರು ಹುತಾತ್ಮರಾಗಿದ್ದಾರೆ. ಕಾಂಗ್ರೆಸ್ ಮಾತ್ರ ಈ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟವರು. ಬಿಜೆಪಿಯವರು ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಲ್ಲ ಎಂದು ಟೀಕಿಸಿದರು.

ಬಿಜೆಪಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಯಾರೊಬ್ಬರೂ ಮಡಿದಿಲ್ಲ. ಆದರೆ, ಅವರು ದೇಶ ಭಕ್ತಿ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುತ್ತಾರೆ. ಇವತ್ತು ದೇಶ ಭಕ್ತಿ ಇದ್ದರೆ ಅದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರ. ಕಾಂಗ್ರೆಸ್ ಬಹುತ್ವದಲ್ಲಿ ನಂಬಿಕೆ ಇಟ್ಟವರು. ನಾವು ವೈವಿಧ್ಯತೆಯಲ್ಲಿ ಏಕತೆ ಕಾಣುವವರು. ಸಮಗ್ರ ಭಾರತ ಒಂದು ದೇಶ, ಐಕ್ಯತೆ, ಜಾತ್ಯತೀತತೆ ಎಂಬುದರಲ್ಲಿ ನಂಬಿದವರಾಗಿದ್ದೇವೆ. ಇಂದು ಧರ್ಮದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ ದೇಶ ಒಡೆಯುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಹಲವು ಕಲ್ಯಾಣ ಕಾರ್ಯಕ್ರಮ ಆಗಿದೆ. ನಮ್ಮ ಸರ್ಕಾರ ಕೂಡ ಕಲ್ಯಾಣ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ. ಆ ಮೂಲಕ ಬಡವರಿಗೆ ಸಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

ಜನವರಿಯಲ್ಲಿ ಯುವನಿಧಿ ಗ್ಯಾರಂಟಿ ಜಾರಿ: ಹಿಂದಿನ ಅವಧಿಯಲ್ಲಿ ಜನರಿಗೆ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೆವು. ಈಗಲೂ ನಾವು ಪಂಚ ಗ್ಯಾರಂಟಿಯಲ್ಲಿ ನಾಲ್ಕು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಮುಂದಿನ ಜನವರಿ ಹೊತ್ತಿಗೆ ಐದನೇ ಗ್ಯಾರಂಟಿ ಯುವನಿಧಿ ಜಾರಿ ತರುತ್ತೇವೆ. ಈ ಗ್ಯಾರಂಟಿಗಳಿಂದ ರಾಜ್ಯದ ಸುಮಾರು 1.40 ಕೋಟಿ ಜನರಿಗೆ ಸಹಾಯವಾಗುತ್ತಿದೆ. 1.07 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 2,000 ರೂ ಲಭಿಸುತ್ತಿದೆ ಎಂದರು.

ನೀವೆಲ್ಲಾ ಬಿಜೆಪಿ ಥರ ಜಾತಿ ವ್ಯಕ್ತಿಗಳಲ್ಲ. ಎಲ್ಲಿ ದ್ವೇಷ ಬಿತ್ತುತ್ತಾರೆ ಅಲ್ಲಿ ಪ್ರೀತಿ ಬಿತ್ತಬೇಕು. ನಿಮ್ಮೆಲ್ಲರ ಹೋರಾಟದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಇದೇ ಹೋರಾಟ ಮುಂದುವರಿಸಬೇಕು. ಬರುವ ಲೋಕಸಭೆ ಚುನಾವಣೆಯಲ್ಲಿ ನೀವೆಲ್ಲಾ ಹೋರಾಟ ಮಾಡಿ ಬಿಜೆಪಿ ಸೋಲಿಸಿ, ಜಾತ್ಯತೀತ ಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ನಾವು ಒಗ್ಗೂಡಿಸುತ್ತೇವೆ. ಆದರೆ, ಬಿಜೆಪಿ ಒಡೆಯುವ ಕೆಲಸ ಮಾಡುತ್ತಾರೆ. ಕೋಮುಶಕ್ತಿಗಳಿಗೆ ನಾವೆಲ್ಲ ಸಿಂಹಸ್ವಪ್ನ ಆಗಬೇಕು ಎಂದರು.

ಬಿಜೆಪಿಯವರಿಗೆ ದೇಶದ ಇತಿಹಾಸವೇ ಗೊತ್ತಿಲ್ಲ: ಇದೇ ವೇಳೆ, ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಬಿಜೆಪಿಯವರಿಗೆ ಈ ದೇಶದ ಇತಿಹಾಸವೇ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಈ ದೇಶದ ಇತಿಹಾಸವನ್ನು ಗೌರವಿಸಿ, ಕಾಪಾಡಿದೆ. ಈ ದೇಶದ ಇತಿಹಾಸ ಗೊತ್ತಿಲ್ಲದವರು ಈಗ ಭಾರತ ಎಂದು ಹೆಸರು ಬದಲಾಯಿಸಲು ಹೊರಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚಿತವಾಗಿಯೇ, ಪಕ್ಷದ ಸಂಸ್ಥೆಗೆ 'ಭಾರತ' ಸೇವಾದಳ ಎಂದು ಹೆಸರಿಟ್ಟವರು ನಾವು ಎಂದು ಅಭಿಮಾನ ವ್ಯಕ್ತಪಡಿಸಿದರು.

ಸೇವಾದಳದವರು ಹೋರಾಟದ ಹಾದಿಯಲ್ಲಿ ಹೆಚ್ಚು ತೊಡಗಿಸಿಕೊಂಡು, ಮುನ್ನುಗ್ಗಬೇಕು. ಹೋರಾಟದ ಹಾದಿಯಲ್ಲಿ ಬಂದವರು ಎಂದಿಗೂ ಮಾರಾಟವಾಗುವುದಿಲ್ಲ. ಕಾಂಗ್ರೆಸ್ ಪಕ್ಷದ ಅಡಿಪಾಯವೇ ಸೇವಾದಳ. ನಂಬಿಕೆ ಇಲ್ಲದ ಕಡೆ ವಾದ ಮಾಡಲು, ಇಷ್ಟ ಇಲ್ಲದ ಕಡೆ ತಲೆ ತಗ್ಗಿಸಲು, ಬೆಲೆ ಇಲ್ಲದ ಕಡೆ ಪ್ರೀತಿ ಬಯಸಲು ಹೋಗಬೇಡಿ. ಕಾಯಕ ನಿರತರಾಗಿ ಸಂಸ್ಥೆಯ ಏಳಿಗೆಗೆ ದುಡಿಯಿರಿ, ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಸದಾ ಮುಖ್ಯ ಎಂದು ಸಲಹೆ ನೀಡಿದರು.

ಪಕ್ಷವನ್ನು ಅಧಿಕಾರಕ್ಕೆ ತರಲು ತಳಮಟ್ಟದಿಂದ ಸೇವಾದಳದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಈ ಸಮಾಜಕ್ಕೆ ನಾವುಗಳು ಕೊಟ್ಟು ಹೋಗಬೇಕು ಅಥವಾ ಬಿಟ್ಟು ಹೋಗಬೇಕು, ನಾವು ಭಾವನೆಯ ಜೊತೆ ಆಟವಾಡಿ ಅಧಿಕಾರಕ್ಕೆ ಬಂದಿಲ್ಲ, ಜನರ ಬದುಕಿನಲ್ಲಿ ಬದಲಾವಣೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದೇವೆ. ಈ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟು ಹೋಗೋಣ ಎಂದರು.

ಇದನ್ನೂ ಓದಿ: ನಿತ್ಯ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರ ಭೇಟಿಗೆ ಸಮಯಾವಕಾಶ ನೀಡುತ್ತೇನೆ: DCM ಡಿ.ಕೆ ಶಿವಕುಮಾರ್

Last Updated :Nov 9, 2023, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.