ಬೆಂಗಳೂರು: ಮಹಾತ್ಮ ಗಾಂಧಿಯವರ ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ಕೊಂಡಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಮತ್ತೆ ಬಲವಾಗಿ ಆರೋಪಿಸಿದೆ.
ಈ ಸಂಬಂಧ ಕಳೆದ ಕೆಲದಿನಗಳಿಂದ ಕಾಂಗ್ರೆಸ್ ನಾಯಕರು ಸರಣಿ ಟ್ವೀಟ್ ಮಾಡುತ್ತಿದ್ದು, ಬಿಜೆಪಿ ಪಕ್ಷ ಗೋಡ್ಸೆ ಪರ ನಿಲುವನ್ನು ಹೊಂದಿದೆ ಎಂದು ಟೀಕಿಸುತ್ತಿದ್ದಾರೆ. ಇಂದೂ ಕೂಡ ಈ ಸಂಬಂಧ ಟ್ವೀಟ್ ಮಾಡಿದ್ದು, ಕೊಲೆಗಡುಕ, ಭಯೋತ್ಪಾದಕ ಗೋಡ್ಸೆಯೇ ರಾಜ್ಯ ಬಿಜೆಪಿ ನಾಯಕರ ಆದರ್ಶವೆಂದು ಮತ್ತೆ ಸಾಬೀತಾಗಿದೆ. ಸಚಿವ ಬಿ. ಶ್ರೀರಾಮುಲು ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ "ಭೂಮಿ ಮೇಲಿರಬಾರದು" ಎಂಬ ಹೇಳಿಕೆಯನ್ನು ಖಂಡಿಸುತ್ತೇವೆ. ಗೋಡ್ಸೆ, ಸಾವರ್ಕರ್ ದೇಶಭಕ್ತರೆಂದು ಬಿಂಬಿಸಲು ಹೊರಟ ಬಿಜೆಪಿಗರು ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ನಿನ್ನೆ ಟ್ವೀಟ್ ಮಾಡಿ, ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನೇ ದೇಶಭಕ್ತ ಎಂದು ಹೇಳುವವರು ಈ ದೇಶದಲ್ಲಿದ್ದಾರೆ. ಅಂಥವರಿಗೆ ಕೋಮುವಾದಿ ಸಿದ್ಧಾಂತದ ಹಿನ್ನೆಲೆಯ ಸಾವರ್ಕರ್ ಅವರು ಸಹ ದೇಶಭಕ್ತರಂತೆ ಕಾಣಿಸುತ್ತಾರೆ. 'ಭಾರತ ರತ್ನ' ಪಡೆದ ಮಹನೀಯರಿಗೆ ಹೋಲಿಕೆ ಮಾಡಿದಾಗ, ಸಾವರ್ಕರ್ ಆ ಪಟ್ಟಿಗೆ ಸೇರಲು ಸೂಕ್ತ ವ್ಯಕ್ತಿಯಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಬೇಸರ ವ್ಯಕ್ತಪಡಿಸಿತ್ತು. ಇನ್ನೊಂದು ಟ್ವೀಟ್ ಮೂಲಕ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಇಂದು ಅಸಮಾಧಾನ ಹೊರಹಾಕಿದೆ.