ETV Bharat / state

ಉಭಯ ಸದನ ಬಹಿಷ್ಕಾರಕ್ಕೆ ಬಿಜೆಪಿ ನಿರ್ಧಾರ.. ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ದೂರು ನೀಡಲು ಸಜ್ಜಾದ ಕೇಸರಿಪಡೆ

author img

By

Published : Jul 20, 2023, 12:01 PM IST

ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ ಸದಸ್ಯರು ಗೈರಾದ ಹಿನ್ನೆಲೆ ವಿಧಾನ ಪರಿಷತ್ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು.

ಸದನ ಬಹಿಷ್ಕಾರಕ್ಕೆ ಬಿಜೆಪಿ ನಿರ್ಧಾರ
ಸದನ ಬಹಿಷ್ಕಾರಕ್ಕೆ ಬಿಜೆಪಿ ನಿರ್ಧಾರ

ಬೆಂಗಳೂರು: ಬಿಜೆಪಿಯ ಹತ್ತು ಶಾಸಕರನ್ನು ಪ್ರಸಕ್ತ ಬಜೆಟ್ ಅಧಿವೇಶನದಿಂದ ಅಮಾನತು ಮಾಡಿದ ಸ್ಪೀಕರ್ ನಿರ್ಧಾರ ಖಂಡಿಸಿ ಉಭಯ ಸದನಗಳ ಕಲಾಪ ಬಹಿಷ್ಕಾರ ಮಾಡುವ ನಿರ್ಧಾರವನ್ನು ರಾಜ್ಯ ಬಿಜೆಪಿ ಕೈಗೊಂಡಿದ್ದು, ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ ನಂತರ ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿ ದೂರು ನೀಡಲು ನಿರ್ಧರಿಸಲಾಯಿತು.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ‌ ಸದಸ್ಯರ ಅಮಾನತು ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯ ಮುಂದಿನ ನಿಲುವು, ಹೋರಾಟ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಸ್ಪೀಕರ್ ನಿರ್ಧಾರ ವಿರೋಧಿಸಿ ಪ್ರತಿಭಟನೆ ಮಾಡಿ ಗವರ್ನರ್​ಗೆ ದೂರು ಕೊಡಲು ನಿರ್ಧಾರ ಮಾಡಲಾಯಿತು. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ ಆ ನಂತರ ಪಾದಯಾತ್ರೆ ಮೂಲಕ ಹೊರಟು ಗವರ್ನರ್​ಗೆ ದೂರು ಕೊಡಲು ತೀರ್ಮಾನ ಕೈಗೊಳ್ಳಲಾಯಿತು.

ಸಭೆ ನಂತರ ಮಾಹಿತಿ ನೀಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ, ಗಾಂಧಿ ಪ್ರತಿಮೆ ಎದುರು ಧರಣಿ ಮಾಡಿ, ಆ ನಂತರ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ವಿಧಾನಸಭೆ ಸದಸ್ಯರು ಎಲ್ಲರೂ ನಿನ್ನೆಯ ಘಟನೆ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ನಾವು ಯಾರು ಸದನಕ್ಕೆ ಹೋಗೋದಿಲ್ಲ ಎಂದು ತೀರ್ಮಾನ ಮಾಡಿದ್ದೇವೆ, ರಾಜ್ಯಾದ್ಯಂತ ಹೋರಾಟದ ಬಗ್ಗೆ ನಾಳೆ ತೀರ್ಮಾನ ಮಾಡುತ್ತೇವೆ ಎಂದರು.

ಕಲಾಪ ಮುಂದೂಡಿಕೆ: ಪ್ರತಿಪಕ್ಷ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ ಸದಸ್ಯರು ಸದನಕ್ಕೆ ಗೈರು ಹಾಜರಾದ ಹಿನ್ನೆಲೆ ವಿಧಾನ ಪರಿಷತ್ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು. ವಿಧಾನ ಪರಿಷತ್​ನ ಬೆಳಗಿನ ಕಲಾಪದ ಕೋರಂ ಬೆಲ್ ಮುಗಿಯುತ್ತಿದ್ದಂತೆ ಸದನ ಆರಂಭವಾಯಿತು. ಆದರೆ ಪ್ರತಿಪಕ್ಷ ಸಾಲಿಯಲ್ಲಿ ಹೆಚ್ ವಿಶ್ವನಾಥ್ ಹೊರತುಪಡಿಸಿದರೆ ಇತರ ಎಲ್ಲಾ ಸದಸ್ಯರು ಗೈರು ಹಾಜರಾಗಿದ್ದರು. ಬಿಜೆಪಿ ಸದಸ್ಯರು ಮಾತ್ರವಲ್ಲದೆ ಜೆಡಿಎಸ್ ಸದಸ್ಯರು ಕೂಡ ಸದನಕ್ಕೆ ಆಗಮಿಸಿರಲಿಲ್ಲ. ಕೇವಲ ಆಡಳಿತ ಪಕ್ಷದ ಶಾಸಕರು, ಸಚಿವರು, ಸಭಾ ನಾಯಕರು ಮಾತ್ರ ಇದ್ದರು.

ಕೋರಂ ಇದ್ದರೂ ಕೂಡ ಉಭಯ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಇಲ್ಲದೆ ಕಲಾಪ ನಡೆಸುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿಕೆ ಮಾಡಿದರು.

ಇದನ್ನೂ ಓದಿ: ಗೃಹಲಕ್ಷ್ಮಿ ನೋಂದಣಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಆಗಸ್ಟ್‌ 16ರಿಂದ ಯಜಮಾನಿಯ ಖಾತೆಗೆ ₹2,000 ಜಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.