ETV Bharat / state

Textbook Revision.. ಹೆಡ್ಗೇವಾರ್ ಮತ್ತು ಸಾವರ್ಕರ್ ಪಠ್ಯಕ್ಕೆ ಕೊಕ್ : ಜನರ ಬಳಿ ಹೋಗಲು ಬಿಜೆಪಿ ನಿರ್ಧಾರ

author img

By

Published : Jun 15, 2023, 5:29 PM IST

Updated : Jun 16, 2023, 9:56 AM IST

ರಾಜ್ಯ ಸಂಪುಟ ಸಭೆಯು ಹೆಡ್ಗೇವಾರ್​ ಮತ್ತು ಸಾವರ್ಕರ್​ ಅವರ ಪಠ್ಯವನ್ನು ಕೈಬಿಟ್ಟಿರುವ ನಿರ್ಧಾರವನ್ನು ಬಿಜೆಪಿ ಖಂಡಿಸಿದೆ.

bjp-condemned-droping-of-hedgewar-and-savarkars-text
ಹೆಡಗೇವಾರ್ ಮತ್ತು ಸಾವರ್ಕರ್ ಪಠ್ಯಕ್ಕೆ ಕೊಕ್ : ಜನರ ಬಳಿ ಹೋಗಲು ಬಿಜೆಪಿ ನಿರ್ಧಾರ..!

ಬೆಂಗಳೂರು : ಹೆಡ್ಗೇವಾರ್, ಸಾವರ್ಕರ್ ಪಠ್ಯ ಕೈಬಿಟ್ಟು ಟಿಪ್ಪು ಮತ್ತು ನೆಹರೂ ಪತ್ರವನ್ನು ಪಠ್ಯದಲ್ಲಿ ಸೇರಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಬಿಜೆಪಿ ಖಂಡಿಸಿದೆ. ಈ ಸಂಬಂಧ ಬಿಜೆಪಿ ಸಾವರ್ಕರ್ ಪಾಠ ತೆರವು ವಿಷಯವನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಲೋಕಸಭೆ ಚುನಾವಣೆಗೆ ತೆಗೆದುಕೊಂಡು ಹೋಗುತ್ತೇವೆ. ಪೋಷಕರ ಬಳಿ ತೆಗೆದುಕೊಂಡು ಹೋಗುತ್ತೇವೆ, ವಿದ್ಯಾರ್ಥಿಗಳ ಮುಂದೆಯೂ ಇಡುತ್ತೇವೆ ಎಂದು ಬಿಜೆಪಿ ಹೇಳಿದೆ.

ಸಚಿವ ಸಂಪುಟ ನಿರ್ಣಯದ ನಂತರ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಿದ್ದರಾಮಯ್ಯ ಹಿರಿಯ ರಾಜಕಾರಣಿ, ಅನುಭವಿ ರಾಜಕಾರಣಿ, ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು, ಸಾವರ್ಕರ್ ಪಾಠ ಓದುವುದರಿಂದ ವಿದ್ಯಾರ್ಥಿಗಳು ದೇಶದ್ರೋಹಿಗಳಾಗುತ್ತಾರಾ? ಎಂದು ಪ್ರಶ್ನಿಸಿದರು. ವಿದೇಶಗಳಿಗೆ ಹೋಗಿ ಭಾರತೀಯ ವಿದ್ಯಾರ್ಥಿಗಳನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿ ಬಹಳ ಬೇಗ ಸ್ವಾತಂತ್ರ್ಯ ಸಿಗಬೇಕು ಎನ್ನುವ ಪ್ರಯತ್ನ ನಡೆಸಿದರು. ಇಂತಹ ಮುಂಚೂಣಿ ನಾಯಕ ಸಾವರ್ಕರ್ ಅವರ ಪಾಠ ತೆಗೆದದ್ದಕ್ಕಿಂತ ದೇಶದ್ರೋಹದ ಕೆಲಸ ಬೇರೊಂದಿಲ್ಲ ಎಂದು ಅವರು ಟೀಕಿಸಿದರು.

ದೇಶದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಮುಂಚೂಣಿ ನಾಯಕರಾಗಿ ಸಾವರ್ಕರ್ ಕೆಲಸ ಮಾಡಿದ್ದರು. ಮದನ್ ಲಾಲ್ ದಿಂಗ್ರ ವಿದೇಶದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ದೇಶದ ಬೀದಿಯಲ್ಲಿ ನೃತ್ಯ ಮಾಡುತ್ತ ಕಾಲ ಹರಣ ಮಾಡುವಾಗ ಅವರ ಕೆನ್ನೆಗೆ ಬಾರಿಸಿ ಸ್ವಾತಂತ್ರ್ಯ ಹೋರಾಟದ ಬದಲು ನೃತ್ಯ ಮಾಡುತ್ತಾ ಕಾಲ ಹರಣ ಕಳೆಯುತ್ತೀಯಾ ಎಂದು ತಿಳಿ ಹೇಳಿ ಮನಪರಿವರ್ತನೆ ಮಾಡಿದ ವ್ಯಕ್ತಿ. ಈ ರೀತಿ ಸಾವಿರಾರು ಜನರ ಮನ ಪರಿವರ್ತನೆ ಮಾಡಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದರು. ಸಮುದ್ರದಲ್ಲಿ ಮೂರು ಕಿಲೋಮೀಟರ್ ಈಜಿ ಬ್ರಿಟಿಷರಿಂದ ತಪ್ಪಿಸಿಕೊಂಡು ಸ್ವಾತಂತ್ರ್ಯ ಹೋರಾಟ ಮಾಡಿದ್ದ ಸಾವರ್ಕರ್ ಅವರನ್ನು ಹೇಡಿ ಎಂದು ಕರೆಯುವ ನೀವು ಹೇಡಿಗಳು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಟಿಪ್ಪು ಸುಲ್ತಾನ್ ಪಾಠ ಓದಿ ಎನ್ನುತ್ತಿದ್ದಾರೆ. ಮುಸ್ಲಿಂರೇನು ಟಿಪ್ಪು ಪಾಠ ಓದಿ ಎನ್ನುವ ಬೇಡಿಕೆ ಇಟ್ಟಿದ್ದಾರಾ? ಇವರೇ ಬೇಕು ಎಂದು ತುಷ್ಟೀಕರಣ ಮಾಡುತ್ತಿದ್ದಾರೆ, ಬೇಡವಾದ ವಿಷಯ ಇಡುತ್ತಿದ್ದಾರೆ. ಟಿಪ್ಪು ದೇವಾಲಯ ದ್ವಂಸ ಮಾಡಲಿಲ್ಲವಾ, ಮತಾಂತರ ಮಾಡಲಿಲ್ಲವಾ? ಮಂಡ್ಯದ ಮೇಲುಕೋಟೆಯಲ್ಲಿ ಇಂದಿಗೂ ಯಾಕೆ ದೀಪಾವಳಿ ಆಚರಿಸುತ್ತಿಲ್ಲ ಗೊತ್ತಾ? ದೀಪಾವಳಿ ವೇಳೆ ಮತಾಂತರಕ್ಕಾಗಿ ರಕ್ತದ ಕೋಡಿ ಹರಿಸಿದ್ದ ಆ ಕಾರಣಕ್ಕೆ ಇಂದೂ ಅಲ್ಲಿ ದೀಪಾವಳಿ ಮಾಡುತ್ತಿಲ್ಲ. ಅಂತಹ ವ್ಯಕ್ತಿಯ ಪಾಠವನ್ನು ಓದಬೇಕಾ, ಪಠ್ಯದಲ್ಲಿ ಇಡುತ್ತೇವೆ ಎನ್ನುತ್ತಿದ್ದೀರಲ್ಲ ನಿಮಗೆ ಏನನ್ನಬೇಕು ಎಂದು ಕಿಡಿಕಾರಿದರು.

ಆರ್.ಎಸ್.ಎಸ್. ಪಾಠ ಓದಬಾರದು ಎನ್ನುತ್ತಿದ್ದೀರಲ್ಲ ಹೆಡ್ಗೇವಾರ್ ದೇಶದ್ರೋಹಿ ಸಂಘಟನೆಯ ಸಂಸ್ಥಾಪಕರಾ? ಎಂದು ಪ್ರಶ್ನಿಸಿದರು. ಹಿಂದೂ ಧರ್ಮದ ಉಳಿವಿಗಾಗಿ ಕೆಲಸ ಮಾಡಬೇಕು, ದೇಶದ ಉಳಿವಿಗೆ ಕೆಲಸ ಮಾಡಬೇಕು, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಹುಟ್ಟಿಸಬೇಕು ಎಂದು ಸಂಘವನ್ನು ಹುಟ್ಟಿಹಾಕಿದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಹೆಡ್ಗೇವಾರ್ ಪ್ರೇರಣೆಯಾಗಿದ್ದರು. ರಾಜಕೀಯ ಹೊರತಾಗಿ ದೇಶಕ್ಕೆ ಕೆಲಸ ಮಾಡಲು ಆರ್​​ಎಸ್ಎಸ್ ಹುಟ್ಟು ಹಾಕಿದರು. ಲಕ್ಷಾಂತರ ಜನ ಇಂದು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹವರ ಪಾಠ ಯಾಕೆ ತೆಗೆದಿರಿ, ಅವರೇನು ದೇಶದ್ರೋಹಿ ಸಂಘಟನೆಯವರಾ? ಅವರ ಪಾಠ ಯಾಕೆ ಓದಬಾರದು? ಈ ವಿಷಯವನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ ಎಂದರು.

ಪಠ್ಯದಲ್ಲಿ ನೆಹರೂ ಪತ್ರವನ್ನು ಸೇರಿಸಿದ್ದಾರೆ. ನೀವು ಬೇಕಿದ್ದರೆ ಅಬ್ರಹಾಂ ಲಿಂಕನ್ ಪತ್ರ ಸೇರಿಸಿ. ಆದರೆ ನಿಮಗೆ ತಾಕತ್ತಿದ್ದರೆ ಕಾಂಗ್ರೆಸ್ ಬಗ್ಗೆ ಅಂಬೇಡ್ಕರ್ ಬರೆದಿರುವ ಪತ್ರವನ್ನೂ ಸೇರಿಸಿ, ನಿಮಗೇನಾದರೂ ದೇಶಭಕ್ತಿ ಇದ್ದರೆ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಅರಳಿಸಬೇಕು ಎಂದಿದ್ದರೆ ಜೀವ ಇರುವವರೆಗೂ ಕಾಂಗ್ರೆಸ್ ಸೇರಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಕಾಂಗ್ರೆಸ್ ನವರು ಎರಡು ಬಾರಿ ನನ್ನ ಸೋಲಿಸಿದ್ದರು ಎಂದಿದ್ದರು. ಇದನ್ನೂ ಪಠ್ಯದಲ್ಲಿ ಇಡಿ ನೋಡೋಣ. ದೇಶದ್ರೋಹಿತನದ ಪರಮಾವಧಿಯನ್ನು ಕಾಂಗ್ರೆಸ್ ಮೆರೆಯುತ್ತಿದೆ, ಅಧಿಕಾರದ ಅಟ್ಟಹಾಸ ಮೆರೆಯುತ್ತಿದೆ. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಿಮ್ಮಿಂದ ಇಂತಹ ದೇಶದ್ರೋಹತನ ನಿರೀಕ್ಷೆ ಮಾಡಿರಲಿಲ್ಲ. ಹೆಡ್ಗೇವಾರ್, ಸಾವರ್ಕರ್ ಪಾಠ ತೆಗೆದಿದ್ದೀರಿ, ಮತಾಂತರ ಮಾಡಿದ ಟಿಪ್ಪು ಪಾಠ ಸೇರಿಸಿದ್ದೀರಿ, ಮಠ ಮಂದಿರ ದ್ವಂಸ ಮಾಡಿ ಮತಾಂತರ ಮಾಡಿದ್ದ ನಮ್ಮ ವಿದ್ಯಾರ್ಥಿಗಳು ಇದನ್ನು ಓದಬೇಕಾ?. ಸಿದ್ದರಾಮಯ್ಯ ಸರ್ಕಾರ ದೇಶದ್ರೋಹಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಹೇಳಿಕೆಯನ್ನು ಖಂಡಿಸುತ್ತೇವೆ. ಅವರ ಪ್ರಕಾರ ಬಲವಂತದ ಮತಾಂತರ ನಡೆಯಬೇಕಾ? ಸ್ವಾಮೀಜಿಗಳೆಲ್ಲ ಖಾವಿ ಬಿಚ್ಚಿ ಮತಾಂತರವಾದ ಉಡುಪು ಧರಿಸಬೇಕಾ, ಮಠಗಳೆಲ್ಲಾ ಮತಾಂತರವಾಗಬೇಕಾ? ಬಹಿರಂಗವಾಗಿ ಮತಾಂತರ ಆಗಲಿ ಎಂದು ಸಿದ್ದರಾಮಯ್ಯ ಹೇಳಲಿ. ಯಾಕೆ ಈ ಬಿಲ್ ತೆಗೆಯುತ್ತಿದ್ದೀರಾ? ದುಡ್ಡು, ಬೈಕ್, ಕಾರು ಕೊಟ್ಟು ಮತಾಂತರ ಮಾಡಲಾಗುತ್ತದೆ. ಆಸೆ ಆಮಿಷಗಳ ಈಡೇರಿಸಿ ಮತಾಂತರ ಮಾಡಲಿದ್ದಾರೆ. ಇದನ್ನು ಜನರ ಮುಂದೆ ಇಡುತ್ತೇವೆ ಎಂದರು.

ಇದನ್ನೂ ಓದಿ : Textbook Revision: ಹೆಡ್ಗೇವಾರ್, ಸಾವರ್ಕರ್ ಕುರಿತಾದ ಪಠ್ಯ ಹಿಂತೆಗೆತ.. ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆ ರದ್ದತಿಗೆ ಸಂಪುಟ ಒಪ್ಪಿಗೆ

Last Updated :Jun 16, 2023, 9:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.