ETV Bharat / state

ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಧಾರ್ಮಿಕ ದತ್ತಿ ಇಲಾಖೆ: ಸಬ್ಸಿಡಿ ಸೌಲಭ್ಯದಲ್ಲಿ ಭಾರತ್ ಗೌರವ್ ದಕ್ಷಿಣ ಯಾತ್ರಾ ಭಾಗ್ಯ

author img

By ETV Bharat Karnataka Team

Published : Jan 12, 2024, 3:19 PM IST

ಧಾರ್ಮಿಕ ದತ್ತಿ ಇಲಾಖೆಯಿಂದ ಸಬ್ಸಿಡಿ ಸೌಲಭ್ಯದಲ್ಲಿ ಭಾರತ್ ಗೌರವ್ ದಕ್ಷಿಣ ಯಾತ್ರಾ ಭಾಗ್ಯ ಆರಂಭಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖೆ
ಧಾರ್ಮಿಕ ದತ್ತಿ ಇಲಾಖೆ

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ ಯೋಜನೆ ಆರಂಭಿಸಿದ್ದು, ಆರು ದಿನಗಳ ಯಾತ್ರೆಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಕೇವಲ 10 ಸಾವಿರ ರೂ.ಗಳಿಗೆ ಊಟ, ವಸತಿಯೊಂದಿಗೆ ರಾಮೇಶ್ವರ, ಕನ್ಯಾಕುಮಾರಿ, ಮದುರೈ, ತಿರುವನಂತಪುರಂ ಪ್ರವಾಸ ಮಾಡಬಹುದಾಗಿದೆ.

ಅತ್ಯಂತ ಕಡಿಮೆ ವೆಚ್ಚದಲ್ಲಿ ರಾಮೇಶ್ವರದ ರಾಮೇಶ್ವರ ದೇವಾಲಯ, ಕನ್ಯಾಕುಮಾರಿಯ ಭಗವತಿ ದೇವಾಲಯ, ಮದುರೈನ ಮೀನಾಕ್ಷಿ ದೇವಾಲಯ, ತಿರುವನಂತಪುರಂನ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನವನ್ನು ಒಳಗೊಂಡ ಯಾತ್ರೆಯನ್ನು ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ ಹೆಸರಿನಲ್ಲಿ ಪರಿಚಯಿಸಿದೆ.

ಒಟ್ಟು 6 ದಿನಗಳ ಯಾತ್ರೆ ಇದಾಗಿದ್ದು, 3 ಟೈರ್ ಎಸಿ ರೈಲು ಪ್ರಯಾಣ, ತಿಂಡಿ, ಊಟ, ವಸತಿ ಮತ್ತು ದರ್ಶನ ವ್ಯವಸ್ಥೆಯನ್ನು ಒಳಗೊಂಡಿದೆ. ಯಾತ್ರಾರ್ಥಿಗಳ ಆರೋಗ್ಯ ಹಾಗೂ ಕ್ಷೇಮಕ್ಕಾಗಿ ವೈದ್ಯಕೀಯ ವ್ಯವಸ್ಥೆಯನ್ನೂ ಒದಗಿಸಿದೆ. ಬೆಂಗಳೂರಿನ ಯಶವಂತಪುರ, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿ ನಿಲ್ದಾಣಗಳಲ್ಲಿ ಯಾತ್ರಾರ್ಥಿಗಳು ರೈಲು ಹತ್ತುವ ಹಾಗೂ ಇಳಿಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ರೈಲು ಜನವರಿ 18 ರಂದು ಹೊರಡಲಿದ್ದು, ಜನವರಿ 23ಕ್ಕೆ ವಾಪಸ್​ ಆಗಲಿದೆ. ಅದೇ ರೀತಿ ಎರಡನೇ ರೈಲು ಜನವರಿ 30 ರಂದು ಹೊರಡಲಿದ್ದು, ಫೆಬ್ರವರಿ 4ಕ್ಕೆ ವಾಪಸ್​ ಆಗಲಿದೆ.

ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15 ಸಾವಿರ ರೂ.ಗಳಾಗಿದ್ದು, ರಾಜ್ಯ ಸರ್ಕಾರದಿಂದ 5 ಸಾವಿರ ರೂ. ಸಹಾಯಧನ ಒದಗಿಸಲಾಗುತ್ತಿದೆ. ಹಾಗಾಗಿ ಪ್ರತಿ ಯಾತ್ರಿಯೂ 10 ಸಾವಿರ ರೂ. ಮಾತ್ರ ಪಾವತಿಸಿ ಯಾತ್ರೆ ಕೈಗೊಳ್ಳಬಹುದಾಗಿದೆ. ಜನವರಿ 18 ರಿಂದ ಆರಂಭವಾಗುವ ಈ ಯಾತ್ರೆಗೆ ಐಆರ್​ಸಿಟಿಸಿ, ಐಟಿಎಂಎಸ್ ವೆಬ್​ಸೈಟ್ ಮೂಲಕ ಬುಕ್ಕಿಂಗ್​ ಮಾಡಿಕೊಳ್ಳಬಹುದಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯಗಳಲ್ಲಿ ವಸ್ತ್ರ ಸಂಹಿತೆ (ಪ್ರತ್ಯೇಕ ಸುದ್ದಿ) : ರಾಜ್ಯದ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಬೆಂಗಳೂರಿನ 50 ದೇವಸ್ಥಾನಗಳು ಸೇರಿದಂತೆ ರಾಜ್ಯಾದ್ಯಂತ 500ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಡ್ರೆಸ್ ಕೋಡ್ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಕರ್ನಾಟಕ ದೇವಸ್ಥಾನ - ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಚಾಲಕ ಮೋಹನ್ ಗೌಡ (ಜನವರಿ 10-24) ತಿಳಿಸಿದ್ದರು.

ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ರಾಜ್ಯ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲು ಮಹಾಸಂಘ ನಿರ್ಧರಿಸಿದೆ ಎಂದು ಮಹಾಸಂಘದ ಸಂಚಾಲಕ ಮೋಹನ್ ಗೌಡ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದರು. ಇಂದು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದರೆ ಕೆಲ ಪ್ರಗತಿಪರರು, ವಿಚಾರವಾದಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಕಿಡಿಕಾರಿದ್ದರು.

ಇದನ್ನೂ ಓದಿ: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ: ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಲು ಮುಂದಾದ ಧಾರ್ಮಿಕ ಸಂಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.