ETV Bharat / state

ಭಯೋತ್ಪಾದನೆ ಕೇಸ್​: ಶಂಕಿತ ಉಗ್ರನ ಸಹಚರನ ಸೆರೆ

author img

By ETV Bharat Karnataka Team

Published : Aug 29, 2023, 10:57 AM IST

Updated : Aug 29, 2023, 3:08 PM IST

ಬಂಧಿತ ವ್ಯಕ್ತಿ ಇದುವರೆಗೆ ಉಗ್ರ ಚಟುವಟಿಕೆ ನಡೆಸಿರುವ ಬಗ್ಗೆ ಮಾಹಿತಿ‌ ತಿಳಿದುಬಂದಿಲ್ಲ. ಆತನ ಜೊತೆಗಿನ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಸಿಸಿಬಿ ಪೊಲೀಸರು ಸಹ ವಿಚಾರಣೆ ಮಾಡುತ್ತಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮತ್ತೊಬ್ಬ ಶಂಕಿತ ಉಗ್ರನ ಬಂಧನ
ಮತ್ತೊಬ್ಬ ಶಂಕಿತ ಉಗ್ರನ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಭಯೋತ್ಪಾದನೆ ದಾಳಿ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಆರ್‌ಟಿ ನಗರ ಪೊಲೀಸರು ಶಂಕಿತ ಉಗ್ರನ ಸಹಚರನನ್ನು ಮಂಗಳವಾರ ಬೆಳಗ್ಗೆ ಬಂಧಿಸಿದ್ದಾರೆ. ಇದರಿಂದ ಪ್ರಕರಣದಲ್ಲಿ ಈವರೆಗೂ 6 ಮಂದಿಯನ್ನು ಬಂಧಿಸಿದಂತಾಗಿದೆ. ನಾಲ್ಕು ವರ್ಷದಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಅರ್ಷದ್ ಖಾನ್ ಬಂಧಿತ‌ ಆರೋಪಿ.

ಬಂಧಿತ ಅರ್ಷದ್​ಖಾನ್​ ಈ ಹಿಂದೆ ಬಂಧಿತರಾದ ಐವರು ಶಂಕಿತ ಉಗ್ರರ ನಿಯಂತ್ರಿಸುತ್ತಿದ್ದ ಜುನೈದ್​​ನ ಮತ್ತೋರ್ವ ಸಹಚರನಾಗಿದ್ದಾನೆ. 2017ರಲ್ಲಿ ನೂರ್ ಅಹಮ್ಮದ್ ಎಂಬಾತನನ್ನ ಅಪಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮೊಹಮ್ಮದ್ ಅರ್ಷದ್ ಖಾನ್ ಅಪ್ರಾಪ್ತ ಆರೋಪಿಯಾಗಿದ್ದ. ಅದಾದ ಬಳಿಕ ಕೊಲೆ, ಕೊಲೆಯತ್ನ, ರಾಬರಿ ಸೇರಿದಂತೆ 17ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಮೂಲಕ ಅರ್ಷದ್ ಖಾನ್ ನಟೋರಿಯಸ್ ಆಗಿ ಗುರುತಿಸಿಕೊಂಡಿದ್ದ. ಸಾಕಷ್ಟು ಬಾರಿ ಪೊಲೀಸರು ಬಂಧನಕ್ಕೆ ಬಂದಾಗ ಕತ್ತು ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡುತ್ತಿದ್ದ.

ಆದರೆ, ಆಗಸ್ಟ್ 27ರ ಮುಂಜಾನೆ 5 ಗಂಟೆಗೆ ಅರ್ಷದ್ ಖಾನ್ ಆರ್.ಟಿ.ನಗರದ ಮನೆಯೊಂದರಲ್ಲಿ ಇರುವುದರ ಕುರಿತು ಮಾಹಿತಿ ಪಡೆದ ಪೊಲೀಸರು ಮನೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದರು. ಆರೋಪಿ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ನಂತರ, ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದರು. ಈ ವೇಳೆ ಸಹ ಮನೆಯಲ್ಲಿದ್ದ ಚಾಕು ತೆಗೆದುಕೊಂಡಿದ್ದ ಅರ್ಷದ್ ಖಾನ್ ಕತ್ತು ಕೊಯ್ದುಕೊಳ್ಳುವ ಹೈಡ್ರಾಮಾ ಮಾಡಿದ್ದ. ಅಲ್ಲದೇ ಎರಡನೇ ಮಹಡಿಯಿಂದ ಕೆಳಗೆ ಜಿಗಿಯಲು ಓಡಿದ್ದ. ಆದರೆ, ಈತನನ್ನು ಅಡ್ಡಗಟ್ಟಿ‌ ಹೆಡೆಮುರಿ ಕಟ್ಟಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಆದರೆ, ಆ ಐವರಿಗೆ ಗ್ರೆನೇಡ್ ಸರಬರಾಜು ಮಾಡಿದ್ದ ಪ್ರಮುಖ ಆರೋಪಿ ಜುನೈದ್ ವಿದೇಶಕ್ಕೆ ಪರಾರಿಯಾಗಿದ್ದ. ಸದ್ಯ ಅರ್ಷದ್ ಖಾನ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಪ್ರಸ್ತುತ ಜುನೈದ್ ಸಂಪರ್ಕದಲ್ಲೇನಾದರೂ ಇದ್ದನಾ? ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದನಾ ಎಂಬುದರ ಕುರಿತು ಮಾಹಿತಿ‌ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣವೇನು?: ನಿಷೇಧಿತ ಇಸ್ಲಾಮಿಕ್​ ಸ್ಟೇಟ್​ (ಐಎಸ್​) ಸಂಘಟನೆ ಜೊತೆಗೆ ಸಂಪರ್ಕಕ್ಕೆ ಬಂದ ಉಗ್ರರು ಬೆಂಗಳೂರಿನಲ್ಲಿ ಭಯೋತ್ಪಾದನೆ ದಾಳಿ ನಡೆಸುವ ಸಂಚು ರೂಪಿಸಿದ್ದರು. ಗುಪ್ತಚರ ಮಾಹಿತಿ ಆಧಾರದ ಮೇಲೆ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಿ ಐವರನ್ನು ಏಕಕಾಲಕ್ಕೆ ಬಂಧಿಸಿದ್ದರು. ಈ ಮೂಲಕ ನಗರದಲ್ಲಿ ನಡೆಯಬಹುದಾಗಿದ್ದ ದೊಡ್ಡ ಭಯೋತ್ಪಾದಕ ಸಂಚು ತಪ್ಪಿಸಲಾಗಿತ್ತು.

ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗವು ನಗರದಲ್ಲಿ ಬೃಹತ್ ಸ್ಫೋಟದ ಯೋಜನೆಯಲ್ಲಿ ಭಾಗಿಯಾಗಿರುವ ಶಂಕಿತರನ್ನು ಗುಪ್ತಚರ ಮಾಹಿತಿಯ ಮೇರೆಗೆ ತ್ವರಿತವಾಗಿ ಬಂಧಿಸಿತ್ತು. ಐವರು ಆರೋಪಿಗಳನ್ನು ಸಯ್ಯದ್ ಸುಹೇಲ್, ಉಮರ್, ಜುನೈದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿತ್ತು. ಇವರೆಲ್ಲರೂ 2017 ರ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಬಳಿಕ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿನ ಭಯೋತ್ಪಾದಕರ ಸಂಪರ್ಕಕ್ಕೆ ಬಂದಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದರು.

ಬಂಧನದ ಬಗ್ಗೆ ಡಿಸಿಪಿ ಹೇಳಿದ್ದಿಷ್ಟು: ’’ 2017ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜುನೈದ್ ಸೇರಿದಂತೆ 21 ಜನರಲ್ಲಿ ಮೊಹಮ್ಮದ್ ಅರ್ಷದ್ ಸಹ ಆರೋಪಿಯಾಗಿದ್ದ. ಆತನ ಮೇಲೆ 17 ಪ್ರಕರಣಗಳಿವೆ. 2020 ರಲ್ಲಿ ಆತನ ಮೇಲೆ ರೌಡಿಪಶೀಟರ್​ ತೆರೆಯಲಾಗಿದೆ. ಸದ್ಯ ಆತನನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಇದುವರೆಗೆ ಉಗ್ರ ಚಟುವಟಿಕೆ ಬಗ್ಗೆ ಮಾಹಿತಿ‌ ತಿಳಿದುಬಂದಿಲ್ಲ. ಆತನ ಜೊತೆಗಿನ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಸಿಸಿಬಿ ಪೊಲೀಸರು ಸಹ ವಿಚಾರಣೆ ಮಾಡುತ್ತಿದ್ದಾರೆ‘‘ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ರಕ್ಷಿಸಿದ ಪೊಲೀಸರು

Last Updated : Aug 29, 2023, 3:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.