ETV Bharat / state

Metro Pillar accident case: ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು ಪ್ರಕರಣ: ₹10 ಕೋಟಿ ಪರಿಹಾರಕ್ಕೆ ಪತಿಯಿಂದ ಅರ್ಜಿ

author img

By

Published : Jul 26, 2023, 7:01 AM IST

Updated : Jul 26, 2023, 12:58 PM IST

bengaluru-metro-pillar-case-application-to-high-court-for-compensation-of-10-crores
ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವು ಪ್ರಕರಣ : 10 ಕೋಟಿ ಪರಿಹಾರ ಕೋರಿ ಪತಿಯಿಂದ ಅರ್ಜಿ

Bengaluru Metro Pillar collapse case: ಬೆಂಗಳೂರು ಮೆಟ್ರೋ ಪಿಲ್ಲರ್​ ಕುಸಿತ ದುರಂತ ಪ್ರಕರಣ ಸಂಬಂಧ 10 ಕೋಟಿ ರೂ. ನಷ್ಟ ಪರಿಹಾರ ನೀಡುವಂತೆ ಕೋರಿ ಮೃತ ಮಹಿಳೆಯ ಪತಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು : ನಗರದ ನಾಗವಾರದ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​​ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟ ಪ್ರಕರಣಕ್ಕೆ 10 ಕೋಟಿ ರೂ. ನಷ್ಟ ಪರಿಹಾರ ನೀಡಲು ಆದೇಶಿಸುವಂತೆ ಕೋರಿ ಮೃತ ಮಹಿಳೆಯ ಪತಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಲೋಹಿತ್ ಕುಮಾರ್ ವಿ. ಸುಲಾಖೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ಮೆಟ್ರೋ ಕಾಮಗಾರಿ ಗುತ್ತಿಗೆದಾರ ಕಂಪನಿಯಾದ ಮೆರ್ಸಸ್ ನಾಗಾರ್ಜುನ ಕನ್‌ಸ್ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಅರ್ಜಿಯಲ್ಲಿನ 8 ಮಂದಿ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಲೋಹಿತ್ ಕುಮಾರ್ ಮತ್ತು ತೇಜಸ್ವಿನಿ ಅವರ 2017ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಅವಳಿ ಮಕ್ಕಳು ಜನಿಸಿದ್ದರು. ದಾವಣಗೆರೆ ಮೂಲದ ದಂಪತಿ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದರು. 2023ರ ಜನವರಿ 10ರಂದು ಬೆಳಗ್ಗೆ 10 ಗಂಟೆಗೆ ಹೊರಮಾವುನಲ್ಲಿರುವ ತಮ್ಮ ಮನೆಯಿಂದ ಕಚೇರಿಗೆ ಪತ್ನಿ ಮತ್ತು ಮಕ್ಕಳೊಂದಿಗೆ ಲೋಹಿತ್ ಕುಮಾರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ನಾಗವಾರದ ಹೆಚ್‌ಬಿಆರ್ ಬಡಾವಣೆಯ ವರ್ತುಲ ರಸ್ತೆಯ ಆ್ಯಕ್ಸಿಸ್‌ ಬ್ಯಾಂಕ್ ಮುಂದೆ ಪ್ರಯಾಣಿಸುತ್ತಿದ್ದಾಗ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ದ್ವಿಚಕ್ರ ವಾಹನದ ಮೇಲೆ ಬಿದ್ದಿತ್ತು. ಘಟನೆಯಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರರಾಗಿದ್ದ ಪತ್ನಿ ತೇಜಸ್ವಿನಿ ಮತ್ತು ಮಗ ವಿಹಾನ್‌ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದರು. ಅರ್ಜಿದಾರರು ಮತ್ತು ಪುತ್ರಿ ಕೂಡ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ'' ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಅರ್ಜಿಯಲ್ಲಿರುವ ಅಂಶಗಳು: ಘಟನೆ ನಡೆದ ಮೂರು ದಿನಗಳ ನಂತರ ಅಂದರೆ 2013ರ ಜನವರಿ 24ರಂದು ಬಿಎಂಆರ್‌ಸಿಎಲ್ ಕಾರ್ಯಚರಣೆ ವಿಭಾಗದ ಎಂಜಿನಿಯರ್ ಅರ್ಜಿದಾರರಿಗೆ ಪತ್ರವನ್ನು ನೀಡಿ, ಪತ್ನಿ ಮತ್ತು ಪುತ್ರ ಸಾವಿಗೆ ನಷ್ಟ ಪರಿಹಾರವಾಗಿ 20 ಲಕ್ಷ ರೂ. ನೀಡುವುದಾಗಿ ಹೇಳಿದ್ದರು. ಆದರೆ, ಪತ್ನಿ ತೇಜಸ್ವಿನಿ ಅವರು ಕೊಡಿಯಾ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿದ್ದರು. ಮಾಸಿಕ 75,748 ರೂ. ವೇತನ ಹಾಗೂ ಒಟ್ಟಾರೆ ವಾರ್ಷಿಕ 9,08,976 ರೂ. ಆದಾಯ ಗಳಿಸುತ್ತಿದ್ದರು. ಪತ್ನಿಗೆ 28 ವರ್ಷವಾಗಿದ್ದು, ಆಕೆ ಜೀವಂತವಾಗಿದ್ದರೆ 60 ವರ್ಷಕ್ಕೆ ನಿವೃತ್ತಿ ಪಡೆಯುವ ವೇಳೆಗೆ ಪ್ರತಿ ವರ್ಷವೂ ಶೇ.20ರಷ್ಟು ವೇತನ ಹೆಚ್ಚಳದೊಂದಿಗೆ ಒಟ್ಟು 4,99,20,000 ರೂ. ಆದಾಯ ಗಳಿಸುತ್ತಿದ್ದರು. ಮೃತ ಪುತ್ರನಿಗೆ ಕೇವಲ 2 ವರ್ಷ 6 ತಿಂಗಳಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಬಿಎಂಆರ್‌ಸಿಎಲ್ ನೀಡಿರುವ ಪರಿಹಾರ ಮೊತ್ತ ಸೂಕ್ತ ಪ್ರಮಾಣದಲ್ಲಿ ಇಲ್ಲ. ಕೇವಲ ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿ, ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಮೆಟ್ರೋ ನಿಗಮ ನೀಡಿರುವ ಪರಿಹಾರವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ 10 ಕೋಟಿ ರೂ. ಪರಿಹಾರ ನೀಡಬೇಕು. ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ಸುರಕ್ಷಿತ ಕ್ರಮ ಕೈಗೊಳ್ಳಲು ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಬೇಕು ಎಂದು ಲೋಹಿತ್ ಕುಮಾರ್ ನ್ಯಾಯಾಲಯವನ್ನು ಕೋರಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ ಪ್ರಕರಣ; ಐದು ತಿಂಗಳ ಬಳಿಕ ಚಾರ್ಜ್​​​ಶೀಟ್​​ ಸಲ್ಲಿಸಿದ ಪೊಲೀಸರು

Last Updated :Jul 26, 2023, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.