ETV Bharat / state

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳಿಸಿ: ತುಷಾರ್ ಗಿರಿನಾಥ್

author img

By ETV Bharat Karnataka Team

Published : Dec 1, 2023, 10:29 PM IST

ತಹಶೀಲ್ದಾರ್ ನೀಡಿರುವ ಆದೇಶದಂತೆ ರಾಜಕಾಲುವೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ಅಧಿಕಾರಿಗಳಿಗೆ ಸೂಚನೆ ನೀಡಿದರು.

Ebbmp-chief-commissioner-tushar-girinath-instructed-to-removal-of-encroachment-on-rajakaluve
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯ ಚುರುಕುಗೊಳಿಸಿ: ತುಷಾರ್ ಗಿರಿನಾಥ್ ತಾಕೀತು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರು ಮಾರ್ಕ್ ಮಾಡಿದ್ದು, ತಹಶೀಲ್ದಾರ್ ಜಾರಿ ಮಾಡಿರುವ ಆದೇಶದಂತೆ ಒತ್ತುವರಿಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ಶುಕ್ರವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರಿಗೆ ತಹಶೀಲ್ದಾರ್ ನೀಡಿರುವಂತಹ ಆದೇಶದಂತೆ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಬೇಕು. ಆದೇಶಗಳನ್ನು ನೀಡದೇ ಇರುವ ಒತ್ತುವರಿಗಳಿಗೆ ಕೂಡಲೇ ಆದೇಶಗಳನ್ನು ನೀಡಿ ಒತ್ತುವರಿಗಳ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಹೇಳಿದರು. ನಗರದ ಎಲ್ಲ ವಲಯಗಳಲ್ಲಿಯೂ ಬೃಹತ್ ನೀರುಗಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕು. ಈ ಸಂಬಂಧ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿಗಳ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

bbmp chief commissioner Tushar Girinath instructed to removal of encroachment on Rajakaluve
ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ನಡೆದ ಸಭೆ

ಭೂ ಮಾಪನ ಕಾರ್ಯ ಮಾಡಿರುವ ಕಡೆ ಗ್ರಾಮ ನಕ್ಷೆ ಮತ್ತು ಟಿಪ್ಪಣಿಗಳ ಅನ್ವಯ ಯಾವುದೇ ವ್ಯತ್ಯಾಸ ಮಾಡದೇ, ಸಂಬಂಧಪಟ್ಟ ಭೂ ಮಾಪಕರು ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಸಂಬಂಧಪಟ್ಟ ತಹಶೀಲ್ದಾರ್ ಅದಕ್ಕೆ ಆದೇಶಗಳನ್ನು ಜಾರಿಮಾಡಬೇಕು. ನಂತರ ಒತ್ತುವರಿ ತೆರವುಗೊಳಿಸಿ ಸಮರ್ಪಕ ಕಾಲುವೆಯನ್ನು ನಿರ್ಮಾಣ ಮಾಡಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸಿಕೊಂಡು ಒತ್ತುವರಿ ತೆರವು ಮಾಡಲು ಹೇಳಿದರು.

ಉಚ್ಛನ್ಯಾಯಾಲಕ್ಕೆ ನೀಡಿರುವ ಮಾಹಿತಿಯಂತೆ ಕ್ರಮ: ನಗರದಲ್ಲಿ ಬೃಹತ್ ನೀರುಗಾಲುವೆ ಒತ್ತುವರಿ ಹಾಗೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಉಚ್ಛನ್ಯಾಯಾಲಕ್ಕೆ ಪಾಲಿಕೆಯಿಂದ ವರದಿಯನ್ನು ನೀಡಲಾಗಿದೆ. ಅದರಂತೆ, ಪಾಲಿಕೆ ವ್ಯಾಪ್ತಿಯಲ್ಲಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಹೊಸ ಒತ್ತುವರಿಗಳು ಸೇರಿದಂತೆ 3147 ಒತ್ತುವರಿಗಳನ್ನು ಗುರುತಿಸಲಾಗಿದ್ದು, 2247 ಒತ್ತುವರಿಗಳನ್ನು ಇದುವರೆಗೆ ತೆರವುಗೊಳಿಸಲಾಗಿದೆ. ಇನ್ನು 900 ಒತ್ತುವರಿಗಳನ್ನು ತೆರವುಗೊಳಿಸಬೇಕಾಗಿದ್ದು, ಈ ಪೈಕಿ 130 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, 401 ಆದೇಶಗಳನ್ನು ಜಾರಿಗೊಳಿಸುವ ಹಂತದಲ್ಲಿದೆ. ಇನ್ನು 370 ಒತ್ತುವರಿಗಳಿಗೆ ತಹಶೀಲ್ದಾರ್​ ಅವರಿಂದ ಆದೇಶಗಳನ್ನು ಜಾರಿಗೊಳಿಸಲಾಗಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕಿದೆ ಎಂದು ಮಾಹಿತಿ ನೀಡಿದರು.

ಕೆರೆಗಳ ಒತ್ತುವರಿಗಳನ್ನು ಗುರುತಿಸಿ ಸಮೀಕ್ಷೆ ನಡೆಸಿ: ಪಾಲಿಕೆ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, 159 ಕೆರೆಗಳಲ್ಲಿ ಒತ್ತುವರಿಯಿದೆ ಎಂಬುದನ್ನು ಗುರುತಿಸಿ, ಉಚ್ಛನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ರಿಯಾ ಯೋಜನೆ ಪ್ರಕಾರ ಕ್ರಮವಹಿಸಲು ತಹಶೀಲ್ದಾರರಿಗೆ ಪತ್ರಗಳನ್ನು ಬರೆಯಲಾಗಿದೆ. ಈ ಪೈಕಿ ಪಾಲಿಕೆ ವ್ಯಾಪ್ತಿಯಲ್ಲಿ 130 ಕೆರೆಗಳ ಸರ್ವೇ ಮಾಡಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಕೇಳಲಾಗಿದೆ. ಅದರಂತೆ ಇದುವೆರೆಗೆ ಅಂದಾಜು 20 ಕೆರೆಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಉಳಿದ ಕೆರೆಗಳಲ್ಲಿ ಒತ್ತುವರಿ ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ನಡೆಸಲು ಸೂಚಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ. ದಯಾನಂದ್, ವಲಯ ಆಯುಕ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು ವಕೀಲರ ಮೇಲೆ ಹಲ್ಲೆ ಆರೋಪ: ಹೈಕೋರ್ಟ್​ನಲ್ಲಿ ಸ್ವಯಂಪ್ರೇರಿತ ಪ್ರಕರಣ, ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.