ETV Bharat / state

ಸೋಲಿಲ್ಲದ ಸರದಾರ ಬಸವರಾಜ ಹೊರಟ್ಟಿಗೆ 3ನೇ ಬಾರಿ ಸಭಾಪತಿ ಹುದ್ದೆ ನಿರ್ವಹಿಸುವ ಯೋಗ...

author img

By

Published : Dec 21, 2022, 12:46 PM IST

ಪಕ್ಷೇತರ, ಜನತಾ ಪಕ್ಷ, ಲೋಕಶಕ್ತಿ, ನವ ನಿರ್ಮಾಣ ವೇದಿಕೆಯಿಂದ ತಲಾ ಒಂದು ಬಾರಿ ಪರಿಷತ್ ಸದಸ್ಯರಾಗಿದ್ದ ಹೊರಟ್ಟಿ ನಂತರ ತೆನೆ ಹೊತ್ತು ಜೆಡಿಎಸ್ ನಿಂದ 3 ಬಾರಿ ಆಯ್ಕೆಯಾಗಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಗಳಿಂದ ಜೆಡಿಎಸ್ ತೊರೆದು ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡು ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಗೊಂಡು 3ನೇ ಬಾರಿಗೆ ಸಭಾಪತಿ ಹುದ್ದೆಯ ಅಧಿಕಾರ ಸ್ವೀಕರಿಸುತ್ತಿದ್ದಾರೆ.

Vidhan Parishad Chairman Basavaraja Horatti
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ಸೋಲಿಲ್ಲದ ಸರದಾರ ಎಂಬ ಹಿರಿಮೆಯ, ಸತತ 8 ಬಾರಿ ವಿಧಾನ ಪರಿಷತ್​ಗೆ ಆಯ್ಕೆಗೊಂಡಿರುವ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಮೂರನೇ ಬಾರಿಗೆ ಹುದ್ದೆ ಅಲಂಕರಿಸುತ್ತಿದ್ದಾರೆ.

1946ರ ಏಪ್ರಿಲ್ 14 ರಂದು ಶಿವಲಿಂಗಪ್ಪ ಗುರಮ್ಮ ದಂಪತಿ ಪುತ್ರರಾಗಿ ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಜನಿಸಿದ್ದ ಹೊರಟ್ಟಿ ಬಿಎ ಪದವೀಧರ, ಪಕ್ಷೇತರರಾಗಿ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದ್ದರು. ಮೊದಲ ಬಾರಿಗೆ 1980 ರಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದು ವಿಧಾನಪರಿಷತ್ ಮೊಗಶಾಲೆ ಪ್ರವೇಶಿಸಿದ್ದರು.

ಪಕ್ಷೇತರ, ಜನತಾ ಪಕ್ಷ, ಲೋಕಶಕ್ತಿ, ನವ ನಿರ್ಮಾಣ ವೇದಿಕೆಯಿಂದ ತಲಾ ಒಂದು ಬಾರಿ ಪರಿಷತ್ ಸದಸ್ಯರಾಗಿದ್ದ ಹೊರಟ್ಟಿ ನಂತರ ತೆನೆ ಹೊತ್ತು ಜೆಡಿಎಸ್​​ನಿಂದ 3 ಬಾರಿ ಆಯ್ಕೆಯಾಗಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಗಳಿಂದ ಜೆಡಿಎಸ್ ತೊರೆದು ಕೇಸರಿ ಪಕ್ಷಕ್ಕೆ ಸೇರಿ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಗೊಂಡು ಸಭಾಪತಿ ಸ್ಥಾನದ ಅಧಿಕಾರ ಸ್ವೀಕರಿಸುತ್ತಿದ್ದಾರೆ.

ಹೊರಟ್ಟಿ ನಡೆದಿರುವ ಗೆಲುವಿನ ದಾರಿ:
1980-1986 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1986-1992 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1992-1998 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
1998-2004 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2004-2010 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2010-2016 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2016-2022 - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು
2022 ರಿಂದ - ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು

ಸಚಿವ ಸ್ಥಾನ ನಿರ್ವಹಣೆ: ರಾಜ್ಯದಲ್ಲಿ ಮೊದಲ ಬಾರಿಗೆ ರಚನೆಗೊಂಡಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಧರಂ ಸಿಂಗ್ ಸಂಪುಟದಲ್ಲಿ ಮೊದಲ ಬಾರಿ ಸಚಿವ ಸ್ಥಾನ ಅಲಂಕರಿಸಿದ್ದ ಹೊರಟ್ಟಿ, 2004-2006 ರವರೆಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಸಣ್ಣ ಉಳಿತಾಯ ಖಾತೆ ನಿರ್ವಹಣೆ ಮಾಡಿದ್ದರು. ನಂತರ ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿಯೂ 2006-2007 ಶಿಕ್ಷಣ ಸಚಿವರಾಗಿ ಹೆಸರು ಮಾಡಿದ್ದರು.

ಅಲ್ಪಾವಧಿ ಸಭಾಪತಿಯಾಗಿದ್ದ ಹೊರಟ್ಟಿ: 2018 ರಲ್ಲಿ 6 ತಿಂಗಳ ಮಟ್ಟಿಗೆ ಹೊರಟ್ಟಿ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಪ್ರತಾಪ್ ಚಂದ್ರಶೆಟ್ಟಿಯನ್ನು ಸಭಾಪತಿಯಾಗಿ ಆಯ್ಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದ್ದರಿಂದ ಹೊರಟ್ಟಿ ರಾಜೀನಾಮೆ ನೀಡಿದ್ದರು.

ಆದರೆ 2021 ರ ಫೆಬ್ರವರಿಯಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಜೆಡಿಎಸ್ ತಿರುಗಿಬಿದ್ದು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಕಾರಣದಿಂದ ಬಸವರಾಜ ಹೊರಟ್ಟಿ ಜೆಡಿಎಸ್ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲದೊಂದಿಗೆ ಎರಡನೇ ಬಾರಿಗೆ ಸಭಾಪತಿಯಾಗಿ ಆಯ್ಕೆಯಾಗಿದ್ದರು. ಬಿಜೆಪಿ ಸೇರುವ ಕಾರಣಕ್ಕೆ 2022 ರ ಮೇ ತಿಂಗಳಿನಲ್ಲಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮೂರನೇ ಬಾರಿ ಸಭಾಪತಿ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

ಇತರ ಜವಾಬ್ದಾರಿಯೂ ನಿರ್ವಹಣೆ:
ಮಾಜಿ ಅಧ್ಯಕ್ಷರು, ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘ
ಮಾಜಿ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಕ್ರೀಡಾ ಪರಿಷತ್ತು
ಅಧ್ಯಕ್ಷರು, ಕರ್ನಾಟಕ ವಿಶ್ವವಿದ್ಯಾಲಯ ದೃಹಿಕ ಉಪನ್ಯಾಸಕರು ಸಂಘ
ಮಾಜಿ ಸದಸ್ಯರು, ಕರ್ನಾಟಕ ವಿಶ್ವವಿದ್ಯಾಲಯ ಸೆನೆಟ್ ಹಾಗೂ ಸಿಂಡಿಕೇಟ್
ವಿಧಾನ ಮಂಡಲದ ವಿವಿಧ ಸಮಿತಿಗಳ ಸದಸ್ಯರಾಗಿ ಸೇವೆ
ಅಧ್ಯಕ್ಷರು, ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ವಿಷಯ ಸಮಿತಿ
ಅಧ್ಯಕ್ಷರು, ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ

ಇದನ್ನೂಓದಿ:ಸುವರ್ಣಸೌಧ ಬಳಿ ಸಾರಿಗೆ ನೌಕರರ ಅಹೋರಾತ್ರಿ ಧರಣಿ: ಮಹಿಳೆ ಅಸ್ವಸ್ಥ, ಪ್ರತಿಭಟನಾ ಸ್ಥಳದಲ್ಲಿ ಕರೆಂಟ್ ಕಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.