ETV Bharat / state

ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿ ಅಧಿವೇಶನ.. ಬೊಮ್ಮಾಯಿ‌ ಸರ್ಕಾರದ ಲೆಕ್ಕಾಚಾರ ಏನು?

author img

By

Published : Dec 3, 2022, 6:51 AM IST

ಆಪರೇಷನ್​ ಅರಳಿದ ಕಮಲ ಸರ್ಕಾರದ ಕೊನೆಯ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ತಯಾರಿ ಈ ಹತ್ತು ದಿನ ನಡೆಯುವ ಅಧಿವೇಶನದಲ್ಲಿ ಬೊಮ್ಮಾಯಿ ಸರ್ಕಾರ ಮಾಡಿಕೊಳ್ಳಬೇಕಿದೆ.

Basavaraj Bommai last session in  Belagavi
ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿ ಅಧಿವೇಶನ

ಬೆಂಗಳೂರು: ಡಿಸೆಂಬರ್ 19 ರಿಂದ ಹತ್ತು ದಿನಗಳ ಕಾಲ ಬೆಳಗಾವಿ ಅಧಿವೇಶನ ನಡೆಯಲಿದೆ. ಪ್ರಸ್ತುತ ಬೊಮ್ಮಾಯಿ‌ ಸರ್ಕಾರದ ಕೊನೆಯ ಅಧಿವೇಶನ ಆಗಲಿದೆ. ಚುನಾವಣೆ ಹೊಸ್ತಿಲಲ್ಲಿ‌ ನಡೆಯುವ ಈ ಚಳಿಗಾಲದ ಅಧಿವೇಶನದಲ್ಲಿ ಬೊಮ್ಮಾಯಿ ಸರ್ಕಾರ ಚುನಾವಣಾ ಲೆಕ್ಕಾಚಾರದ ಮೇಲೆ ಕಣ್ಣಿಟ್ಟಿದೆ.

ಬೆಳಗಾವಿ ಅಧಿವೇಶನಕ್ಕೆ‌ ಮುಹೂರ್ತ ನಿಗದಿಯಾಗಿದೆ. ಡಿ.19 ರಿಂದ ಡಿ.30ರ ವರೆಗೆ ನಡೆಯಲಿರುವ 10 ದಿನಗಳ ಚಳಿಗಾಲದ ಅಧಿವೇಶನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ವೇದಿಕೆಯಾಗುವುದರಲ್ಲಿ ಅನುಮಾನವಿಲ್ಲ. ಬೊಮ್ಮಾಯಿ ಸರ್ಕಾರಕ್ಕೆ ಇದು ಕೊನೆಯ ಚಳಿಗಾಲದ ಹಾಗೂ ಬೆಳಗಾವಿಯ ಅಧಿವೇಶನವಾಗಲಿದೆ. ಚುನಾವಣಾ ಹೊಸ್ತಿಲಲ್ಲಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಸಮಸ್ಯೆಗಳಿಗೆ ಹೆಚ್ಚಿನ ಮಹತ್ವ ನೀಡುವ ಬೆಳಗಾವಿ ಅಧಿವೇಶನ ಬೊಮ್ಮಾಯಿ‌ ಸರ್ಕಾರಕ್ಕೆ ಮಹತ್ವದ್ದಾಗಿದೆ. ಹೀಗಾಗಿ ಚುನಾವಣೆ ಮೇಲೆ ಕಣ್ಣಿಟ್ಟು ಬೊಮ್ಮಾಯಿ‌ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ.

ಪ್ರಮುಖವಾಗಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಕೇಂದ್ರೀಕರಿಸಿ ಬೆಳಗಾವಿ ಅಧಿವೇಶನದಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಲೆಕ್ಕಾಚಾರದೊಂದಿಗೆ ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ಘೋಷಣೆಗಳನ್ನು ಮಾಡುವ ಚಿಂತನೆ ಸರ್ಕಾರದ್ದಾಗಿದೆ.

ಸುವರ್ಣ ವಿಧಾನಸೌಧ ಆವರಣದಲ್ಲಿ ಪ್ರತಿಮೆ: ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ‌ ನಿರ್ಧರಿಸಿದ್ದಾರೆ. ಬೆಳಗಾವಿ ಅಧಿವೇಶನ ವೇಳೆ ಇಬ್ಬರು ಮಹಾನುಭಾವರ ಪ್ರತಿಮೆಗಳ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ‌ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬ್ರಿಟಿಷರ ವಿರುದ್ಧದ ಮೊದಲ ಮಹಿಳಾ ಹೊರಾಟಗಾರ್ತಿ ಎಂಬ ಹೆಗ್ಗಳಿಕೆ ಗಳಿಸಿರುವ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಿರ್ಮಿಸುವ ಮೂಲಕ ಬೊಮ್ಮಾಯಿ ಸರ್ಕಾರ ಕಿತ್ತೂರು ಕರ್ನಾಟಕದ ಜನರ ಒಲವು ಗಿಟ್ಟಿಸಿಕೊಳ್ಳಲು ಮುಂದಾಗಿದೆ.

ಇತ್ತ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನೂ ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ನಿರ್ಮಿಸುವ ಮೂಲಕ ಬೊಮ್ಮಾಯಿ ಸರ್ಕಾರ ಸಮುದಾಯದ ಮತ ಬ್ಯಾಂಕ್​ನತ್ತ ಕಣ್ಣಿಟ್ಟಿದೆ. ಎರಡು‌ ಮಹಾನುಭಾವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಉತ್ತರ ಭಾಗದ ಜನರ ಪ್ರೀತಿಪಾತ್ರರಾಗುವ ಲೆಕ್ಕಾಚಾರ ಹೊಂದಿದೆ.

ಪಂಚಮಸಾಲಿ ಮೀಸಲಾತಿ ಬಗ್ಗೆ ಮಹತ್ವದ ಘೋಷಣೆ?: ಇತ್ತ ಪಂಚಮಸಾಲಿಗಳ 2A ಮೀಸಲಾತಿ ಹೋರಾಟದ ಬಗ್ಗೆ ಬೊಮ್ಮಾಯಿ‌ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.‌ ಪಂಚಮಸಾಲಿ ಸಮುದಾಯ ದೊಡ್ಡ ಪ್ರಮಾಣದಲ್ಲಿ ಮೀಸಲಾತಿ ಹೋರಾಟ ನಡೆಸುತ್ತಿದೆ.‌ ಇದರ ಬಿಸಿ ಬಿಜೆಪಿ ಸರ್ಕಾರಕ್ಕೆ ತಟ್ಟಲು ಪ್ರಾರಂಭವಾಗಿದೆ. ಈ ಹೋರಾಟದಿಂದ ಬಿಜೆಪಿಗೆ ಚುನಾವಣಾ ಹಿನ್ನಡೆಯಾಗುವ ಆತಂಕ ಎದುರಾಗಿದೆ.

2A ಮೀಸಲಾತಿ ನೀಡುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ‌ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಪಂಚಮಸಾಲಿ ಸಮುದಾಯದವರ ಆಕ್ರೋಶ ತಣಿಸಿ, ಮುಂಬರುವ ಚುನಾವಣೆಯಲ್ಲಿ ಅದರ ಲಾಭ ಪಡೆಯುವ ಲೆಕ್ಕಾಚಾರ ಇದೆ ಎಂದು ಹೇಳಲಾಗ್ತಿದೆ.

ಮಹದಾಯಿ ಯೋಜನೆ ಜಾರಿ ಬಗ್ಗೆ ತೀರ್ಮಾನ?: ನಾಲ್ಕು ದಶಕಗಳಿಂದ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಭಾಗದ ಜನ ಹೋರಾಟ ಮಾಡುತ್ತಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಹಾಹಾಕಾರ ತಣಿಸುವ ಯೋಜನೆ ಇದು. ಕರ್ನಾಟಕ-ಗೋವಾ- ಮಹಾರಾಷ್ಟ್ರ ಮಧ್ಯೆ ಜಲ ವ್ಯಾಜ್ಯವಿದ್ದು ಯೋಜನೆ ಜಾರಿಗಾಗಿ ಆಗ್ರಹಿಸಿ ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಈ ಯೋಜನೆಯಿಂದ ಕರ್ನಾಟಕ ಪಾಲಿಗೆ ಮಹದಾಯಿಯಿಂದ 2.18 ಟಿಎಂಸಿ ಹಾಗೂ ಕಳಸಾದಿಂದ 1.78 ಟಿಎಂಸಿ ನೀರು ಕುಡಿಯುವ ನೀರಿಗೆ ಹಂಚಿಕೆ ಮಾಡಲಾಗಿತ್ತು.‌ ಈ ಯೋಜನೆ ಜಾರಿ ಸಂಬಂಧ ಬೊಮ್ಮಾಯಿ‌ ಸರ್ಕಾರ ಮಹತ್ವದ ಘೋಷಣೆ ಮಾಡಲಿದ್ದಾರೆ ಎನ್ನಲಾಗ್ತಿದೆ.

ಮಹದಾಯಿ ಯೋಜನೆ ಜಾರಿ ಸಂಬಂಧ ಘೋಷಣೆ ಮಾಡುವ ಸಾಧ್ಯತೆ ಇದ್ದು, ಆ ಮೂಲಕ ಉತ್ತರ ಕರ್ನಾಟಕ ಭಾಗದ ಜನರ, ರೈತರ ಒಲವು ಗಿಟ್ಟಿಸಿಕೊಳ್ಳುವ ಇರಾದೆ ಬೊಮ್ಮಾಯಿ ಸರ್ಕಾರದ್ದಾಗಿದೆ. ಇದು ಮುಂದಿನ ಚುನಾವಣೆ ಮೇಲೆ ನೇರವಾದ ಪರಿಣಾಮ ಬೀರುವ ಲೆಕ್ಕಾಚಾರ ಬಿಜೆಪಿ ಸರ್ಕಾರದ್ದಾಗಿದೆ.

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ?: ಇತ್ತ ಕಬ್ಬು ಬೆಳೆಗಾರರು ಅನೇಕ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿದ್ದಾರೆ. ಕಬ್ಬಿಗೆ ಬೆಲೆ ನಿಗದಿ ಸೇರಿ ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶ ಹಂಚಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಸಮಿತಿಯನ್ನು ರಚಿಸಲಾಗಿದ್ದು, ವರದಿಯನ್ನೂ ಸಿಎಂಗೆ ಸಲ್ಲಿಸಲಾಗಿದೆ.

ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರನ್ನು ಗಮದಲ್ಲಿರಿಸಿಕೊಂಡು ಬೊಮ್ಮಾಯಿ ಸರ್ಕಾರ ಮಹತ್ವದ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಲೆಕ್ಕಾಚಾರದೊಂದಿಗೆ ಬೆಳಗಾವಿ ಅಧಿವೇಶನದಲ್ಲೇ ಸಿಎಂ ಬೊಮ್ಮಾಯಿ‌ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಡಿ.19ರಿಂದ ಬೆಳಗಾವಿಯಲ್ಲಿ ಅಧಿವೇಶನ.. ಶ್ರೀಗಂಧ ನೀತಿಗೆ ಸಚಿವ ಸಂಪುಟ ಸಭೆ ಅನುಮೋದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.