ETV Bharat / state

ಸಿಎಂ ಆಗಿ ಚುನಾವಣಾ ಸಿಹಿ - ಕಹಿ ಎರಡನ್ನೂ ಸವಿದ ಬೊಮ್ಮಾಯಿ: ಮುಂದಿರುವ ಸವಾಲುಗಳೇನು?

author img

By

Published : Jul 21, 2022, 7:51 PM IST

Updated : Jul 22, 2022, 8:01 PM IST

ಜುಲೈ 28ಕ್ಕೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಆಡಳಿತಾರೂಢ ಬಿಜೆಪಿ ಎದುರಿಸಿದ ವಿವಿಧ ಚುನಾವಣೆಗಳ ಹಿನ್ನೋಟ ಮತ್ತು ಅವರ ಮುಂದಿರುವ ಚುನಾವಣಾ ಸವಾಲುಗಳೇನು ಎಂಬ ವರದಿ ಇಲ್ಲಿದೆ.

basavaraj-bommai-faced-various-elections-in-the-last-one-year-as-cm
ಸಿಎಂ ಆಗಿ ಚುನಾವಣಾ ಸಿಹಿ - ಕಹಿ ಎರಡನ್ನೂ ಸವಿದ ಬೊಮ್ಮಾಯಿ: ಮುಂದಿರುವ ಸವಾಲುಗಳೇನು?

ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಜುಲೈ 28ಕ್ಕೆ ಒಂದು ವರ್ಷವಾಗಲಿದ್ದು, ಅವರು ರಾಜ್ಯದ ಚುಕ್ಕಾಣಿ ಹಿಡಿದ ನಂತರ ನಡೆದ ಚುನಾವಣೆಗಳಲ್ಲಿ ಅಷ್ಟಾಗಿ ಸಾಧನೆ ತೋರಲಿಲ್ಲ. ಸಿಎಂ ಆದ ನಂತರ ನಡೆದ ವಿಧಾನಸಭೆ ಉಪ ಚುನಾವಣೆ, ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಗಳಲ್ಲಿ ಸಿಹಿ ಮತ್ತು ಕಹಿ ಎರಡನ್ನೂ ಸವಿದಿದ್ದಾರೆ.

ಕಳೆದ ವರ್ಷದ ಜುಲೈ ತಿಂಗಳಲ್ಲಿ ಬಿಜೆಪಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಿ ಬಂತು. ಮುಂದಿನ ಮುಖ್ಯಮಂತ್ರಿ ಯಾರೆಂಬ ಕುತೂಹಲ ಪಕ್ಷ ಹಾಗೂ ರಾಜ್ಯದ ಜನತೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆ ವೇಳೆ, ಅನೇಕ ಹೆಸರುಗಳು ಸಹ ಮುನ್ನೆಲೆಗೆ ಬಂದಿದ್ದವು. ಆದರೆ, ಆಶ್ಚರ್ಯಕರ ರೀತಿಯಲ್ಲಿ ದೆಹಲಿ ವರಿಷ್ಠರು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡಲ್ಲ, ನೂರಕ್ಕೆ ನೂರರಷ್ಟು ಮತ್ತೊಮ್ಮೆ ಬಿಜೆಪಿಗೆ ಅಧಿಕಾರ: ಯಡಿಯೂರಪ್ಪ

ಯಡಿಯೂರಪ್ಪ ಸೇರಿದಂತೆ ಕೆಲವೇ ಮಂದಿಗೆ ಈ ಮಾಹಿತಿ ಗೊತ್ತಿದ್ದರೂ ಬಹುತೇಕ ಮಂದಿಗೆ ಆಶ್ಚರ್ಯ ಉಂಟು ಮಾಡಿತ್ತು. ಒಂದು ವರ್ಷದ ಆಡಳಿತದಲ್ಲಿ ಅಷ್ಟಾಗಿ ಬೊಮ್ಮಾಯಿ ಸರ್ಕಾರ ವೈಫಲ್ಯ ಕಂಡಿಲ್ಲವಾದರೂ, ಪಕ್ಷದಲ್ಲಿ ಅಸಮಾಧಾನದ ಹೊಗೆಯಂತೂ ಇದ್ದೇ ಇದೆ.

ತವರು ಜಿಲ್ಲೆಯಲ್ಲೇ ಮುಗ್ಗರಿಸಿದ ಬೊಮ್ಮಾಯಿ: ಸಿಂದಗಿ ಹಾಗೂ ಹಾನಗಲ್ ಉಪಸಮರ ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ಅಗ್ನಿಪರೀಕ್ಷೆಯಾಗಿತ್ತು. ತಮ್ಮ ನಾಯಕತ್ವದಲ್ಲಿ ಎದುರಿಸಿದ ಮೊದಲ ಉಪಚುನಾವಣೆಯಲ್ಲಿ ತವರು ಜಿಲ್ಲೆಯ ಹಾನಗಲ್​ನಲ್ಲಿ ಮುಗ್ಗರಿಸಿರುವುದು ಬೊಮ್ಮಾಯಿ ನಾಯಕತ್ವವನ್ನು ಪಕ್ಷದೊಳಗೆ ಪ್ರಶ್ನಿಸಲು ಅವಕಾಶ ಮಾಡಿಕೊಟ್ಟಿತ್ತು.

ಸಿಂದಗಿ ಕ್ಷೇತ್ರದಲ್ಲಿ ಗೆದ್ದರೂ ತವರು ಕ್ಷೇತ್ರದಲ್ಲೇ ಎಡವಿದ ಪರಿಣಾಮ ಪಕ್ಷದೊಳಗೆ ನಾಯಕತ್ವದ ಬಗ್ಗೆ ಚರ್ಚೆ ಆರಂಭವಾಗಿತ್ತು. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಅಲ್ಲದೇ, ಸಿಎಂ ವಿರುದ್ಧ ಮುನಿಸಿಕೊಂಡು ಅಂತರ ಕಾಯ್ದುಕೊಂಡಿರುವ ಬಿಜೆಪಿಯ ಕೆಲ ನಾಯಕರಿಗಿದು ಸಮಾಧಾನ ಉಂಟು ಮಾಡಿತ್ತು. ಅವರನ್ನು ನಂಬಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ಹೋಗಲು ಅಸಾಧ್ಯ ಎಂಬ ಸಂದೇಶವನ್ನು ದೆಹಲಿ ವರಿಷ್ಠರಿಗೆ ರವಾನಿಸಲು ಕೆಲವರು ಸಿದ್ಧತೆ ಮಾಡಿಕೊಂಡಿದ್ದು ಉಂಟು.

ಇದನ್ನೂ ಓದಿ: ರಂಭಾಪುರಿ ಜಗದ್ಗುರುಗಳನ್ನು ಭೇಟಿ ಮಾಡಿದ ಸಿಎಂ!

ಉಪಸಮರದ ಫಲಿತಾಂಶ ಮುಂದಿನ ಚುನಾವಣೆ, ಸರ್ಕಾರದ ಕಾರ್ಯವೈಖರಿಯ ದಿಕ್ಸೂಚಿಯಂತಲೇ ಬಿಂಬಿತವಾಗಿತ್ತು. ಹೀಗಾಗಿ ಸವಾಲಾಗಿ ಸ್ವೀಕರಿಸಿದ್ದ ಬೊಮ್ಮಾಯಿ ತಮ್ಮ ಸಂಪುಟ ಸಚಿವರೆಲ್ಲರನ್ನೂ ಕಣಕ್ಕಿಳಿಸಿ ಬಿರುಸಿನ ಪ್ರಚಾರ ನಡೆಸಿದರು. ಸುಮಾರು ಒಂದು ವಾರಗಳ ಕಾಲ ಉಪಸಮರದ ಅಖಾಡದಲ್ಲೇ ಇದ್ದ ಸಿಎಂ ಬಳಗ ಹಗಲಿರುಳು ಪ್ರಚಾರ ಕಾರ್ಯದಲ್ಲಿ ತೊಡಗಿತ್ತು. ಆದರೆ, ಸರ್ಕಾರಕ್ಕೆ ಸೋಲು ಗೆಲುವಿನ ಸಿಹಿ, ಕಹಿಯ ಅನುಭವ ನೀಡಿತು.

ಪಂಚಾಯಿತಿ ಅಗ್ನಿ ಪರೀಕ್ಷೆ: ಸಿಎಂ ಬೊಮ್ಮಾಯಿಗೆ ಮತ್ತೊಂದು ಅಗ್ನಿ ಪರೀಕ್ಷೆಯಾಗಿದ್ದು ಗ್ರಾಮ ಪಂಚಾಯಿತಿ ಚುನಾವಣೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ಒಡ್ಡಿತ್ತು. ಇನ್ನೊಂದು ಕಡೆ ಜೆಡಿಎಸ್ ಸಹ ಪೈಪೋಟಿ ನೀಡಿತ್ತು. ಇಲ್ಲಿ ಹೀನಾಯ ಸೋಲು ಕಂಡರೆ ಬೊಮ್ಮಾಯಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗುತ್ತಿತ್ತು. ಹೀಗಾಗಿ ಗಂಭೀರವಾಗಿ ಪರಿಗಣಿಸಿದ ಸರ್ಕಾರ ನಿರೀಕ್ಷಿತ ಅಲ್ಲವಾದರೂ ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲವಾಯಿತು.

ಪರಿಷತ್​​ನಲ್ಲೂ ಸಿಗದ ನಿರೀಕ್ಷಿತ ಫಲಿತಾಂಶ: ಬೊಮ್ಮಾಯಿ ಅವರಿಗೆ ಎದುರಾದ ಮತ್ತೊಂದು ಸವಾಲೆಂದರೆ, ರಾಜ್ಯದ 25 ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆ. ಈ ಚುನಾವಣೆಯಲ್ಲೂ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಬಿಜೆಪಿಗೆ ಕನಿಷ್ಟ 15 ರಿಂದ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇತ್ತಾದರೂ ಗೆದ್ದಿದ್ದು ಕೇವಲ 11 ಸ್ಥಾನ ಮಾತ್ರ. ಆಡಳಿತದಲ್ಲಿದ್ದೂ ಪರಿಷತ್​ನಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದೇ ಇರುವುದು ಹಾಗೂ ಬಿಜೆಪಿಯ ಭದ್ರಕೋಟೆಗಳೆನಿಸಿದ ಕ್ಷೇತ್ರಗಳಲ್ಲೂ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರುವುದು ಹಿನ್ನಡೆ ಎಂದೇ ಭಾವಿಸಿದ್ದು, ಈ ಪರೀಕ್ಷೆಯಲ್ಲೂ ಸಿಎಂ ಬೊಮ್ಮಾಯಿ ಸೋತರೂ ಎಂದೇ ವಿಶ್ಲೇಷಿಸಲಾಯಿತು.

ಸ್ಥಳೀಯ ಸಂಸ್ಥೆ ಚುನಾವಣೆ: ರಾಜ್ಯದ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದಲ್ಲೂ ಅಷ್ಟಾಗಿ ಫಲಪ್ರದವಾಗಿಲ್ಲ. ಹಾವೇರಿಯಲ್ಲೇ ಸಿಎಂ ಬೊಮ್ಮಾಯಿಗೆ ಹಿನ್ನಡೆಯಾಗಿದೆ. ಆಡಳಿತದಲ್ಲಿದ್ದ ಬಿಜೆಪಿ ನಿರೀಕ್ಷೆ ಮಾಡುವಷ್ಟು ಸ್ಥಾನ ಗೆಲ್ಲದೇ ಇರುವುದು ಕೂಡ ಸಿಎಂಗೆ ಬೇಸರ ತರಿಸಿತ್ತು. ಬೊಮ್ಮಾಯಿ ಸಿಎಂ ಬಳಿಕ ಎದುರಾಗಿದ್ದ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿದರೂ. ಅದರಲ್ಲಿ ಉತ್ತೀರ್ಣವಾಗುವಲ್ಲಿ ವಿಫಲವಾಗಿದ್ದಾರೆ. ಈ ಫಲಿತಾಂಶಗಳ ಪರಿಣಾಮ ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಅನ್ನುವ ಊಹಾಪೋಹಗಳಿಗೂ ಇದು ಪುಷ್ಠಿ ನೀಡಿತ್ತು.

ರಾಜ್ಯಸಭೆ ಚುನಾವಣೆಯಲ್ಲಿ ಮೇಲುಗೈ: ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಮತ್ತು ರಾಜ್ಯ ವಿಧಾನ ಪರಿಷತ್ತಿನ ತಲಾ ಎರಡು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಕಳೆದ ಜೂನ್​ನಲ್ಲಿ ಚುನಾವಣೆಗಳು ನಡೆದವು. ಅಲ್ಲಿ ನಿರೀಕ್ಷೆಯಂತೆ ರಾಜ್ಯಸಭೆಯ ಮೂರು ಸ್ಥಾನಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ಒಂದು ಸ್ಥಾನ ಮಾತ್ರ ಕಾಂಗ್ರೆಸ್ ಪಾಲಾಯಿತು. ಜೆಡಿಎಸ್ ಇದರಲ್ಲಿ ಮುಖಭಂಗ ಅನುಭವಿಸಿತು. ಮೂರು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಸಿಎಂ ಕೂಡ ಪ್ರಮುಖ ಪಾತ್ರ ವಹಿಸಿದ್ದರು.

ಮುಂದಿರುವ ಸವಾಲುಗಳೇನು?: ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಮುಂದಿನ ಸವಾಲು 2023ರ ವಿಧಾನಸಭೆ ಚುನಾವಣೆಗೂ ಮುನ್ನ ಬರಲಿರುವ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಗೆಲ್ಲುವುದು. ಬಿಬಿಎಂಪಿ ಚುನಾವಣೆ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ. ಆದರೆ, ಈ ಚುನಾವಣೆಗಳು ಸಹ ಸಿಎಂ ಬೊಮ್ಮಾಯಿ ಪಾಲಿಗೆ ಅಗ್ನಿಪರೀಕ್ಷೆಗಳೇ ಆಗಿದ್ದು, ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ರಾಷ್ಟ್ರಪತಿಗಳ ಬೀಳ್ಕೊಡುಗೆ ಔತಣಕೂಟದಲ್ಲಿ ಭಾಗಿಯಾಗಲು ಸಿಎಂ ದೆಹಲಿ ಪ್ರವಾಸ..!

Last Updated : Jul 22, 2022, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.