ETV Bharat / state

ಕೃಷಿ ವಿವಿಯಲ್ಲಿ ಫಾರ್ಮಿಂಗ್ ಜತೆ ಬೇಕಿಂಗ್ ಟ್ರೈನಿಂಗ್: ಬೇಕರಿ ಇನ್‌ಕ್ಯೂಬೇಷನ್ ಘಟಕದ ನೂತನ ಕಟ್ಟಡಕ್ಕೆ ಸಿಎಂ ಚಾಲನೆ

author img

By ETV Bharat Karnataka Team

Published : Oct 18, 2023, 10:26 PM IST

ಸ್ವಯಂ ಉದ್ಯೋಗ ಕಂಡುಕೊಳ್ಳ ಬಯಸಿದವರಿಗೆ ಕೃಷಿ ವಿವಿಯಲ್ಲಿ ಬೇಕಿಂಗ್ ಟ್ರೈನಿಂಗ್ ಆರಂಭವಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಬೇಕರಿ ಉತ್ಪನ್ನಗಳ ಪ್ರದರ್ಶನ ವೀಕ್ಷಿಸಿ ಸಂತಸಪಟ್ಟರು.

ಬೇಕಿಂಗ್ ಟ್ರೈನಿಂಗ್
ಬೇಕಿಂಗ್ ಟ್ರೈನಿಂಗ್

ಬೆಂಗಳೂರು: ಕೇವಲ ಕೃಷಿ ಚಟುವಟಿಕೆಯಲ್ಲಿ ರೈತರಿಗೆ ಸಂಶೋಧನೆಗಳ ಮೂಲಕ ನೆರವಾಗುತ್ತಿದ್ದ ಕೃಷಿ ವಿದ್ಯಾಲಯ ಇದೀಗ ಬೇಕರಿ ಘಟಕದ ಮೂಲಕ ಸ್ವಯಂ ಉದ್ಯೋಗ ಆರಂಭಿಸುವವರಿಗೆ ತರಬೇತಿ ನೀಡಲು ಮುಂದಾಗಿದ್ದು, ಅದಕ್ಕಾಗಿ ಬೇಕರಿ ಇನ್‌ಕ್ಯೂಬೇಷನ್ ಘಟಕ ಸ್ಥಾಪನೆ ಮಾಡಿದೆ. ಹಾಗಾಗಿ ಇನ್ನು ಮುಂದೆ ಜಿಕೆವಿಕೆಯಲ್ಲಿ ಫಾರ್ಮಿಂಗ್ ಮಾತ್ರವಲ್ಲ, ಬೇಕಿಂಗ್ ಟ್ರೈನಿಂಗ್ ಕೂಡ ಸಿಗಲಿದೆ.

ಬೇಕರಿ ಇನ್‌ಕ್ಯೂಬೇಷನ್ ಘಟಕದ ನೂತನ ಕಟ್ಟಡಕ್ಕೆ ಸಿಎಂ ಚಾಲನೆ
ಬೇಕರಿ ಇನ್‌ಕ್ಯೂಬೇಷನ್ ಘಟಕದ ನೂತನ ಕಟ್ಟಡಕ್ಕೆ ಸಿಎಂ ಚಾಲನೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಬೇಕರಿ ಘಟಕದ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ತರಬೇತಿ ಹಾಗೂ ಆವಿಷ್ಕಾರದ ಚಟುವಟಿಕೆಗೆ ಸೌಲಭ್ಯ ಒದಗಿಸಲು ಬೇಕರಿ ಇನ್‌ಕ್ಯೂಬೇಷನ್ ಘಟಕವನ್ನು ಸ್ಥಾಪನೆ ಮಾಡಿದೆ. ಇದಕ್ಕಾಗಿಯೇ ಕೃಷಿ ವಿ.ವಿ ಆವರಣದಲ್ಲಿ ಬೇಕರಿ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ನೂತನ ಕಟ್ಟಡ ನಿರ್ಮಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಕಟ್ಟಡ ಉದ್ಘಾಟನೆ ನಂತರ ಬೇಕಿಂಗ್ ತರಬೇರಿ ಕೇಂದ್ರದ ಸುತ್ತ ಒಂದು ಸುತ್ತು ಹಾಕಿದರು. ಬೇಕರಿ ಉತ್ಪನ್ನಗಳ ಪ್ರದರ್ಶನ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಬೇಕರಿ ಉತ್ಪನ್ನಗಳ ಮೂಲಕ ಸ್ವಯಂ ಉದ್ಯೋಗ ಕಂಡುಕೊಳ್ಳ ಬಯಸಿದವರಿಗೆ ತರಬೇತಿ ನೀಡುವ ಪ್ರಯತ್ನವನ್ನು ಶ್ಲಾಘಿಸಿದರು. ತರಬೇತುದಾರರೊಂದಿಗೆ ಮಾತುಕತೆ ಮೂಲಕ ಮಾಹಿತಿ ಪಡೆದುಕೊಂಡರು, ತರಬೇತಿ ಪಡೆಯಲು ಬಂದಿದ್ದವರಿಗೆ ಶುಭ ಕೋರಿದರು.

ಈ ವೇಳೆ ಸಿಎಂಗೆ ವಿವರಣೆ ನೀಡಿದ ಕೃಷಿ ವಿವಿ ಕುಲಪತಿ ಡಾ.ಎಸ್.ವಿ ಸುರೇಶ, ಹೊಸ ಕಟ್ಟಡದಲ್ಲಿ ನಾವು ತರಬೇತಿ ನೀಡುವ ಜತೆಗೆ ಬೇಕರಿ ನವೋದ್ಯಮಿಗಳು ಹಾಗೂ ಆಸಕ್ತ ಬೇಕರಿ ನಡೆಸುವ ಕಿರು ಉದ್ದಿಮೆದಾರರಿಗೆ ನೆರವಾಗುವ ಸೌಲಭ್ಯಗಳನ್ನು ಒದಗಿಸುತ್ತೇವೆ. ಇಲ್ಲಿ ಬೇಕರಿ ಉತ್ಪನ್ನಗಳ ತಯಾರಿ ಹಾಗೂ ಮೌಲ್ಯವರ್ಧಿತ ಕಾರ್ಯಕ್ಕೆ ತರಬೇತಿ ನೀಡಿ ಸ್ವಂತ ಉದ್ಯಮ ಆರಂಭಿಸುವವರಿಗೆ ತರಬೇತಿಯೊಂದಿಗೆ ಇನ್‌ಕ್ಯೂಬೇಷನ್ ಘಟಕದಲ್ಲಿರುವ ವಿವಿಧ ಉಪಕರಣಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬೇಕರಿ ಉತ್ಪನ್ನಗಳ ಪ್ರದರ್ಶನ ವೀಕ್ಷಿಸಿ ಸಂತಸ ಪಟ್ಟ ಸಿಎಂ
ಬೇಕರಿ ಉತ್ಪನ್ನಗಳ ಪ್ರದರ್ಶನ ವೀಕ್ಷಿಸಿ ಸಂತಸ ಪಟ್ಟ ಸಿಎಂ

ಎಲೆಕ್ಟ್ರಾನಿಕ್ ಯಂತ್ರಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೂ ಕೊಡುತ್ತೇವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಯಾಂಡ್‌ವಿಚ್ ಸಹಿತ ಇತರ ಬೇಕರಿ ಪದಾರ್ಥಗಳ ತಯಾರಿಕೆಯ ಪ್ರಾತ್ಯಕ್ಷಿಕೆ ನೀಡುತ್ತೇವೆ, ಮಹಿಳೆಯರಿಗೆ ‘ಬೇಕಿಂಗ್ ಹೋಂ’ ವಿಶೇಷ ತರಬೇತಿ ನೀಡುತ್ತೇವೆ, ಒಟ್ಟಿನಲ್ಲಿ ಬೇಕರಿ ಮೂಲಕ ಬದುಕು ಕಟ್ಟಿಕೊಳ್ಳ ಬಯಸುವವರಿಗೆ ಬೆಂಬಲವಾಗಿ ಕೃಷಿ ವಿವಿ ನಿಲ್ಲಲಿದೆ ಎಂದು ಸುರೇಶ್​ ವಿವರಿಸಿದರು.

ಕೃಷಿ ವಿವಿಯ ಈ ಪ್ರಯತ್ನಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಬೇಕರಿ ಉತ್ಪನ್ನಗಳಿಗೆ ಎಲ್ಲೆಡೆ ಬೇಡಿಕೆ ವೃದ್ದಿಸುತ್ತಿದೆ ಆದರೆ ದೇಸಿಯ ಆಹಾರ ಉತ್ಪನ್ನಗಳನ್ನು ಹೆಚ್ಚು ಬಳಸಿ ಮೌಲ್ಯವರ್ಧನೆ ಮಾಡುವ ಮೂಲಕ ನಮ್ಮ ರೈತರಿಗೆ ನೆರವಾಗಬೇಕು ಎಂದು‌ ಸಿಎಂ ಸಲಹೆ ನೀಡಿದರು.

ಇದನ್ನೂ ಓದಿ: ಕೃಷಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಸಹಕಾರ, ಅನುದಾನ ನೀಡಲಿದೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.