ETV Bharat / state

ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಕೊಲೆ, ಇಬ್ಬರು ಆರೋಪಿಗಳು ಸೆರೆ

author img

By ETV Bharat Karnataka Team

Published : Oct 16, 2023, 10:44 PM IST

ಬೆಂಗಳೂರಿನ ಬಾಣಸವಾಡಿ ಮುಖ್ಯರಸ್ತೆಯಲ್ಲಿ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Arrest of two people who attacked and killed a person in Bangalore
ಬೆಂಗಳೂರು: ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದ ಆರೋಪಿಗಳಿಬ್ಬರ ಬಂಧನ

ಪೂರ್ವ ವಿಭಾಗ ಡಿಸಿಪಿ ದೇವರಾಜ್ ಮಾಹಿತಿ

ಬೆಂಗಳೂರು: ಬಾಣಸವಾಡಿ ಮುಖ್ಯರಸ್ತೆಯಲ್ಲಿ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರುತ್ವಿಕ್​ ಮತ್ತು ಸುಮನ್​ ಬಂಧಿತರು. ಮದನ್​ ಅಲಿಯಾಸ್​ ರಿಚರ್ಡ್​ ಹತ್ಯೆಗೊಳಗಾದ ವ್ಯಕ್ತಿ. ಕೃತ್ಯಕ್ಕೆ ಸಹಕಾರ ನೀಡಿದ್ದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಪ್ರಕರಣದ ಹಿನ್ನೆಲೆ: ಕೊಲೆಯಾದ ಮದನ್​ ಹಾಗೂ ಆರೋಪಿಗಳು ಪರಿಚಯಸ್ಥರಾಗಿದ್ದು, ಚಿಕ್ಕಬಾಣಸವಾಡಿಯಲ್ಲಿ ನೆಲೆಸಿದ್ದರು. 2019ರಲ್ಲಿ ಮದನ್​ ಹಾಗೂ ರುತ್ವಿಕ್​ ನಡುವೆ ಗಲಾಟೆ ನಡೆದಿತ್ತು. ಕ್ರಿಕೆಟ್​ ಬ್ಯಾಟ್​ನಿಂದ ಮದನ್​ ರುತ್ವಿಕ್​ಗೆ ಹೊಡೆದಿದ್ದ. ಪರಿಣಾಮ 9 ದಿನ ಆಸ್ಪತ್ರೆಯಲ್ಲಿ ಕಳೆದಿದ್ದ ರುತ್ವಿಕ್​ ಕೋಮಾ ಸ್ಥಿತಿಗೆ ತಲುಪಿದ್ದ. ಹಲ್ಲೆ ಬಳಿಕ ಮದನ್​ ಬೆಂಗಳೂರು ತೊರೆದು ಚೆನ್ನೈಗೆ ತೆರಳಿದ್ದ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್​ ಠಾಣೆಯಲ್ಲಿ ಮದನ್​ ಹಾಗೂ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

ನಾಲ್ಕು ವರ್ಷ ಚೆನ್ನೈನಲ್ಲೇ ಕಾರ್​ ಡ್ರೈವರ್​ ಆಗಿ ಕೆಲಸ ಮಾಡಿದ್ದ ಮದನ್​ ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಗರಕ್ಕೆ ವಾಪಸ್​ ಆಗಿದ್ದ. ಮದನ್​ ಬಂದಿರುವುದನ್ನು ಅರಿತಿದ್ದ ಆರೋಪಿಗಳು ಹಳೆ ದ್ವೇಷ ಮರೆತು ಮತ್ತೆ ಒಂದಾಗೋಣ ಎಂದು ಹೇಳಿ ಮಾತುಕತೆಗಾಗಿ ಅಕ್ಟೋಬರ್​ 11ರ ಸಂಜೆ ಕರೆಸಿಕೊಂಡಿದ್ದರು. ಮಾತುಕತೆ ವೇಳೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿತ್ತು. ನೋಡ ನೋಡುತ್ತಿದ್ದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಆರೋಪಿಗಳು ಮುಂದಾಗಿದ್ದಾರೆ. ಈ ವೇಳೆ ಮದನ್​ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ನಡುರಸ್ತೆಯಲ್ಲಿ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ.. ಕೊಲೆ

ಪೂರ್ವಸಂಚಿನಂತೆ ಹತ್ಯೆಗಾಗಿ ಬೈಕ್​ನಲ್ಲಿ ಬಂದಿದ್ದ ಆರೋಪಿಗಳಿಗೆ ಆ ವೇಳೆ ಬೈಕ್​ ಕೈ ಕೊಟ್ಟಿದೆ. ಕೂಡಲೇ ದಾರಿಯಲ್ಲಿದ್ದ ಕೊರಿಯರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್​ ಎಂಬಾತನನ್ನು ಬೆದರಿಸಿ ಆತನ ಬೈಕ್​ ತೆಗೆದುಕೊಂಡು, ಮದನ್​ನನ್ನು ಚೇಸ್​ ಮಾಡಿಕೊಂಡು ಹೋಗಿ ಕಟಿಂಗ್​ ಶಾಪ್‌ವೊಂದರ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂರ್ವ ವಿಭಾಗ ಡಿಸಿಪಿ ದೇವರಾಜ್, "ಅಕ್ಟೋಬರ್​ 11ರಂದು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದನ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿ ರುತ್ವಿಕ್ ಮೇಲೆ ಕ್ರಿಕೆಟ್ ಬ್ಯಾಟ್​ನಿಂದ ಹಲ್ಲೆ ಮಾಡಿ ಚೆನ್ನೈಗೆ ಎಸ್ಕೇಪ್ ಆಗಿದ್ದ ಮದನ್ ಒಂದು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ. ಎಲ್ಲಾ ಮರೆತು ಸ್ನೇಹಿತರಾಗೋಣ ಎಂದು ಮದನ್​ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದ ಆರೋಪಿಗಳು ಮಾತುಕತೆ ವೇಳೆ ಉಂಟಾದ ಜಗಳ ತಾರಕಕ್ಕೇರಿತ್ತು. ಈ ವೇಳೆ ಆರೋಪಿಗಳು ಕೊರಿಯರ್ ಬಾಯ್​ನ ಬೈಕ್ ಕಸಿದು ಚೇಸ್ ಮಾಡಿ ಮದನ್​ನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 4 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ: ವಿದೇಶದಿಂದ ಬರುತ್ತಿದ್ದಂತೆಯೇ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.