ETV Bharat / state

ವಂಚನೆ ಪ್ರಕರಣ: ಯುವರಾಜ್ ಸ್ವಾಮಿ‌ ವಿರುದ್ಧ ಮತ್ತೊಂದು ಪ್ರಕರಣ ದಾಖಲು

author img

By

Published : May 2, 2023, 12:40 PM IST

ವಂಚನೆ ಆರೋಪದಲ್ಲಿ ಯುವರಾಜ್​ ಸ್ವಾಮಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Yuvaraj Swamy
ಬಂಧನಕ್ಕೊಳಗಾಗಿದ್ದ ಯುವರಾಜ್ ಸ್ವಾಮಿ‌

ಬೆಂಗಳೂರು: ನೂರಾರು ಕೋಟಿ ರೂಪಾಯಿ ವಂಚಿಸಿದ ಆರೋಪ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಯುವರಾಜ್ ಸ್ವಾಮಿ ವಿರುದ್ಧ ಮತ್ತೊಂದು ಪ್ರಕರಣ(FIR) ದಾಖಲಾಗಿದೆ. ಗೋವಿಂದಯ್ಯ ಎಂಬುವವರು ನೀಡಿರುವ ದೂರಿನನ್ವಯ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವಿಂದಯ್ಯ ಅವರ ಅಳಿಯನಿಗೆ ಕೆಲಸ ಕೊಡಿಸುವುದಾಗಿ 30 ಲಕ್ಷ ರೂ. ಪಡೆದುಕೊಂಡಿದ್ದ ಯುವರಾಜ್ ಸ್ವಾಮಿ ಕೆಲಸವೂ ಕೊಡಿಸದೆ, ಹಣವೂ ಕೊಡದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜ್ಞಾನಭಾರತಿ ಠಾಣೆಯಲ್ಲಿ ಗೋವಿಂದಯ್ಯ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಕೇಸು ವಿಚಾರಣೆ ಹಂತದಲ್ಲಿರುವಾಗ ಪುನಃ ಗೋವಿಂದಯ್ಯರನ್ನು ಸಂಪರ್ಕಿಸಿದ್ದ ಯುವರಾಜ್ ಸ್ವಾಮಿ‌ ಪ್ರಕರಣ ಕೈಬಿಟ್ಟರೆ 30 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದ್ದ‌ರಂತೆ.

ನ್ಯಾಯಾಲಯದ ಬಳಿಯೇ ಗೋವಿಂದಯ್ಯರಿಗೆ 5 ಲಕ್ಷ ರೂ ಮತ್ತು ಹತ್ತು ಲಕ್ಷ ರೂ.ಯ ತಲಾ ಎರಡು ಚೆಕ್ ಕೊಟ್ಟು ಪ್ರಕರಣ ಹಿಂಪಡೆಯುವಂತೆ ಸೂಚಿಸಿದ್ದರು. ಅದರನ್ವಯ ಗೋವಿಂದಯ್ಯ ಪ್ರಕರಣ ಹಿಂಪಡೆದಿದ್ದರು. ಆದರೆ ಕೆಲ ದಿನಗಳ ನಂತರ ಎರಡೂ ಚೆಕ್ ಬೌನ್ಸ್ ಆಗಿದ್ದು, ಹಣ ಕೇಳಿದರೆ ಕೊಡುತ್ತಿಲ್ಲ ಎಂದು ಯುವರಾಜ್ ಸ್ವಾಮಿ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಗೆ ಗೋವಿಂದಯ್ಯ ದೂರು ನೀಡಿದ್ದಾರೆ. ದೂರಿನನ್ವಯ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೆಲಸ ಕೊಡಿಸುವುದಾಗಿ ಅನೇಕರಿಗೆ ವಂಚಿಸಿದ್ದ ಆರೋಪದಡಿ ಯುವರಾಜ್ ಸ್ವಾಮಿಯ ಮನೆಯ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು 89ಕ್ಕೂ ಹೆಚ್ಚು ದಾಖಲೆಗಳನ್ನು ಸೀಜ್ ಮಾಡಿದ್ದರು. ಯುವರಾಜ್ ಸ್ವಾಮಿಯ ಪರ್ಸನಲ್ ಹಾಗೂ ಬ್ಯಾಂಕ್, ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಅಲ್ಲದೆ ಅನೇಕ ರಾಜಕೀಯ ನಾಯಕರುಗಳಿಗೆ ಸಂಬಂಧಿಸಿದ ದಾಖಲೆಗಳು, ಲೆಟರ್ ಹೆಡ್ಸ್ ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ: ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ವಂಚಕನಿಗೆ ಲಂಚ; ಹಣ ಕೊಟ್ಟವರ ವಿರುದ್ಧವೇ ಎಫ್‌ಐಆರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.