ETV Bharat / state

ಲೋಕಸಭೆ ಮಾತ್ರವಲ್ಲ, ಎಲ್ಲಾ ಚುನಾವಣೆಗಳನ್ನು ಗೆಲ್ಲುವುದೇ ಗುರಿ: ಬಿ ವೈ ವಿಜಯೇಂದ್ರ

author img

By ETV Bharat Karnataka Team

Published : Nov 15, 2023, 1:01 PM IST

Updated : Nov 15, 2023, 3:34 PM IST

BJP state president B Y Vijayendra: ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುತ್ತೇನೆ- ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ
ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

ಬೆಂಗಳೂರು : ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳನ್ನು ಗೆಲ್ಲುವುದರ ಜೊತೆಗೆ ಸ್ಥಳೀಯ ಸಂಸ್ಥೆಗಳು ಹಾಗು ದಕ್ಷಿಣ ಭಾರತದ ಬಿಜೆಪಿ ಭದ್ರಕೋಟೆಯಾಗಿರುವ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡುತ್ತೇನೆ. ಹೋರಾಟಗಳ ಮೂಲಕ ಭ್ರಷ್ಟ ಸರ್ಕಾರಕ್ಕೆ ಉತ್ತರ ಕೊಡುವ ಕೆಲಸ ಮಾಡುತ್ತೇನೆ. ಹಗಲಿರುಳು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭರವಸೆ ನೀಡಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ರಾಜ್ಯ ಬಿಜೆಪಿಯನ್ನು ಜವಾಬ್ದಾರಿಯನ್ನು ಇಂದು ಹೊತ್ತುಕೊಂಡಿದ್ದೇನೆ. ಪಕ್ಷದ ಮುಖಂಡರು, ಸಂಘ ಪರಿವಾರದ ಮುಖಂಡರು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ. ಶಿಕಾರಿಪುರ ತಾಲೂಕಿನ ಎಲ್ಲಾ ಹಿರಿಯರು, ಸಂಘಟನೆಯ ಮುಖಂಡರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಂಘಟಕರನ್ನು ಸ್ಮರಿಸಿದರು.

aim-to-win-all-elections-including-lok-sabha-b-y-vijayendra
ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಘೋಷಣೆ ಮಾಡಿದ ನಂತರ ರಾಜ್ಯದ ಎಲ್ಲ ಹಿರಿಯರ ಜೊತೆ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಎಲ್ಲರೂ ಒಗ್ಗಟ್ಟಿನಿಂದ ನೀನು ಮುನ್ನುಗ್ಗು, ನಿನಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಅಭಯ ನೀಡಿದ್ದಾರೆ. ಒಂದು‌ ದಿನವೂ ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನಮ್ಮ ಗುರಿ. ಅದಕ್ಕಾಗಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದೊಂದೇ ನಮ್ಮ ಮುಂದಿನ ಗುರಿಯಾಗಿದೆ.

ಈ ಹಿಂದೆ 20 ಕ್ಷೇತ್ರ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾಗ ಅವರ ಹೇಳಿಕೆಯನ್ನು ಹಾಸ್ಯ ಮಾಡಿದ್ದರು. ಆದರೆ ಅದನ್ನು ಯಡಿಯೂರಪ್ಪ ಸಾಧಿಸಿದ್ದರು. ಈಗ ಲೋಕಸಭಾ ಚುನಾವಣೆಗೆ ಹಗಲು ರಾತ್ರಿ ಶ್ರಮ ಹಾಕಬೇಕಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ನಿಜ, ಈಗ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಅಂದರೆ ಆ ಸ್ಥಾನದ ಮಹತ್ವ ಮತ್ತು ಗೌರವ ನನಗೆ ಗೊತ್ತಿದೆ. ಯಡಿಯೂರಪ್ಪನವರ ಹೋರಾಟವನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ ಪಕ್ಷದ ಯಾರೂ ತಲೆತಗ್ಗಿಸಿಕೊಂಡು ಹೋಗಲು ಅವಕಾಶ ಕೊಡುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.

ನಮ್ಮ ಸರ್ಕಾರದ ಮೇಲೆ 40% ಸರ್ಕಾರ ಅಂತಾ ಆರೋಪ ಮಾಡಿದ್ದರು. ಅದನ್ನು ಹೇಳಲು ನನಗೆ ಯಾವುದೇ ಸಂಕೋಚ ಇಲ್ಲ. ಆರೋಪ ಮಾಡಿದ 40% ಆರೋಪವನ್ನು ಕಾಂಗ್ರೆಸ್ ಸರ್ಕಾರ ನಿಜ ಮಾಡುತ್ತಿದೆ. ಅದನ್ನು ಅನುಷ್ಠಾನಕ್ಕೆ ತರಲು ಹೊರಟಿದೆ. ಇದು ಭ್ರಷ್ಟ ಸರ್ಕಾರ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಉಸ್ತುವಾರಿ ‌ಸಚಿವರಾದವರು ಅವರ ಜಿಲ್ಲೆಯಲ್ಲೇ ‌ಪ್ರವಾಸ ಮಾಡಿಲ್ಲ. ಅಧಿಕಾರದ‌ ದರ್ಪದಿಂದ ಉದ್ಧಟತನದಿಂದ ನಡೆದುಕೊಳ್ಳುತ್ತಿದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ಕೊಡಬೇಕಾಗಿದೆ. ಜಿಲ್ಲಾ ಪಂಚಾಯತ್, ತಾಲುಕು ಪಂಚಾಯತ್ ಚುನಾವಣೆಯನ್ನೂ ನಾವು ಮರೆಯಬಾರದು. ಜಿಲ್ಲಾ ಪಂಚಾಯತ್,‌ ತಾಲೂಕು ಪಂಚಾಯತ್‌ ಚುನಾವಣೆ ಕಾರ್ಯಕರ್ತರ‌ ಚುನಾವಣೆ. ಅವರ‌ ಚುನಾವಣೆಗೆ‌ ನಾವು ದುಡಿಯಬೇಕು‌. ಕಾರ್ಯಕರ್ತರು ನಮಗಾಗಿ ‌ಹಗಲು ರಾತ್ರಿ ದುಡಿದಿದ್ದಾರೆ. ಈಗ ನಾವು ಅವರಿಗೆ ದುಡಿಯಬೇಕು ಎಂದು ಕರೆ ನೀಡಿದರು.

ಆಪರೇಷನ್ ಕಮಲ ಮಾಡಲ್ಲ, ಭಯ ಬೇಡ : ಹಿಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಅಂತಾ ಯಾರೂ ಊಹಿಸಿರಲಿಲ್ಲ. ನಾನು ಚುನಾವಣೆ ಗೆಲ್ಲುವವರೆಗೆ ಮಾತ್ರ ಬಿಜೆಪಿ ಕಾರ್ಯಕರ್ತ. ಗೆದ್ದ ಬಳಿಕ ಆ ಜಾತಿ, ಈ ಜಾತಿ ಎಂಬ ಮನೋಭಾವನೆ ಬಿಟ್ಟು ನಾನು ಬಿಜೆಪಿ ಕಾರ್ಯಕರ್ತ ಅಂತಾ ಕೆಲಸ ಮಾಡಿದರೆ ನಿಶ್ಚಿತವಾಗಿ ಲೋಕಸಭಾ ಚುನಾವಣೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ನಿಶ್ಚಿತ. ಮುಂದಿನ ವಿಧಾನಸಭಾ ಚುನಾವಣೆ ಅಂತಾ ಭಯ ಬೇಡ, ನಾವೇನೂ ಆಪರೇಷನ್ ಕಮಲ ಮಾಡುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಅನುದಾನ ಇಲ್ಲದೇ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷರು ವ್ಯಂಗ್ಯವಾಡಿದರು.

ನಾನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ನಿರೀಕ್ಷೆ ಮಾಡಿರಲಿಲ್ಲ. ಯಾರೂ ಕೂಡಾ ಬೇಸರದಲ್ಲಿ ಇಲ್ಲ. ಅದರ ಬಗ್ಗೆ ಚಿಂತೆ ಪಡಬೇಕಾಗಿಲ್ಲ. ಎಲ್ಲಾ ಹಿರಿಯರು, ಸಂಘ ಪರಿವಾರದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಬಡವರು, ರೈತರ ಪರ ಕೆಲಸ ಮಾಡುತ್ತೇನೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ಇದನ್ನೂ ಓದಿ : ರಾಜ್ಯ ಬಿಜೆಪಿ ನೊಗ ಹೊತ್ತ ವಿಜಯೇಂದ್ರ: ಯುವ ನಾಯಕನಿಗೆ ಹಿರಿಯರ ಬೆಂಬಲ

Last Updated : Nov 15, 2023, 3:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.