ETV Bharat / state

ಬಿಜೆಪಿ ಕಚೇರಿಯಲ್ಲಿ ಆಪ್ ನಾಯಕ! ಜಗನ್ನಾಥ ಭವನಕ್ಕೆ ಭಾಸ್ಕರ್ ರಾವ್ ಬಂದಿದ್ದೇಕೆ?

author img

By

Published : Feb 28, 2023, 3:48 PM IST

Updated : Feb 28, 2023, 4:06 PM IST

ಇಂದು ಬಿಜೆಪಿ ಕಚೇರಿಗೆ ಆಪ್​ ನಾಯಕ ಭಾಸ್ಕರ್​ ರಾವ್ ಆಗಮಿಸಿ ಕುತೂಹಲ ಕೆರಳಿಸಿದರು.

aap-leader-bhaskar-rao-visited-bjp-office-at-bengaluru
ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡ ಆಪ್ ನಾಯಕ : ಜಗನ್ನಾಥ ಭವನಕ್ಕೆ ಭಾಸ್ಕರ್ ರಾವ್ ಬಂದಿದ್ದು ಯಾಕೆ ಗೊತ್ತಾ ?

ಬೆಂಗಳೂರು : ನಿವೃತ್ತ ಐಪಿಎಸ್ ಅಧಿಕಾರಿ ಹಾಗು ಆಮ್ ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಅವರು ನಗರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದರು. ಮುಂಬರುವ ಚುನಾವಣೆಗೆ ಆಪ್ ಅಭ್ಯರ್ಥಿಯಾಗಲು ಸಿದ್ದತೆ ನಡೆಸುತ್ತಿರುವ ಭಾಸ್ಕರ್​ ರಾವ್​ ಈ ರೀತಿ ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡು ಕೆಲಕಾಲ ಬಿಜೆಪಿಗರನ್ನೇ ಗಲಿಬಿಲಿಗೊಳ್ಳುವಂತೆ ಮಾಡಿದರು. ಆದರೆ ಇದು ರಾಜಕೀಯ ಭೇಟಿಯಾಗದೇ ವೈಯಕ್ತಿಕ ಭೇಟಿಯಾಗಿತ್ತು. ಹೀಗಿದ್ದರೂ ಅನ್ಯ ಪಕ್ಷದ ನಾಯಕರೊಬ್ಬರು ಎದುರಾಳಿ ಪಕ್ಷದ ಕಚೇರಿಗೆ ಕಾಲಿಟ್ಟಿದ್ದು ಮಾತ್ರ ಹುಬ್ಬೇರಿಸಿತು.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಿಜೆಪಿ ಕಚೇರಿಯಲ್ಲಿರುವ ಮಾಹಿತಿ ತಿಳಿದು ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಲು ರಾವ್ ಇಂದು ಬೆಳಗ್ಗೆ ಆಗಮಿಸಿದ್ದರು. ಇಬ್ಬರೂ ಐಪಿಎಸ್ ಅಧಿಕಾರಿಗಳಾಗಿ ಕರ್ನಾಟಕದಲ್ಲೇ ಕೆಲ ಸಮಯ ಕರ್ತವ್ಯ ನಿರ್ವಹಣೆ ಮಾಡಿದ್ದು ಆ ಆತ್ಮೀಯತೆಯಿಂದಾಗಿ ಭಾಸ್ಕರ್ ರಾವ್ ಬಿಜೆಪಿ ಕಚೇರಿಗೆ ಆಗಮಿಸಿ ಅಣ್ಣಾಮಲೈ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಬಿಜೆಪಿ ನಾಯಕರು ಯಾವುದೇ ರೀತಿಯ ಹೆಚ್ಚಿನ ಮಾಹಿತಿ ನೀಡಿಲ್ಲ.

ಬಿಜೆಪಿ ಕಚೇರಿಯಲ್ಲಿ ಸಭೆ: ಭಾಸ್ಕರ್ ರಾವ್ ಭೇಟಿ ನಂತರ ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮೈಸೂರು ವಿಭಾಗದ ಪ್ರಭಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಸಂಸದ ಪ್ರತಾಪ್ ಸಿಂಹ, ಮೈಸೂರು ಜಿಲ್ಲಾಧ್ಯಕ್ಷರು ಮತ್ತು ಪ್ರಭಾರಿಗಳಿದ್ದರು.

ನಾಳೆ ಚಾಮರಾಜನಗರದಲ್ಲಿ ಬಿಜೆಪಿಯ ಮೊದಲ ರಥಯಾತ್ರೆಗೆ ಚಾಲನೆ ಸಿಗಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗಿಯಾಗಲಿದ್ದಾರೆ. ಹೀಗಾಗಿ ಕಾರ್ಯಕ್ರಮ ಯಶಸ್ವಿಯಾಗಿಸಲು ಸಭೆ ನಡೆಸಲಾಗಿದೆ. ಮಾರ್ಚ್ 11ಕ್ಕೆ ಮೋದಿ ಕಾರ್ಯಕ್ರಮವಿದೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ಎರಡೂ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಮಲ್ಲೇಶ್ವರದ ಬಜೆಪಿ ಕಚೇರಿಯಲ್ಲಿ ಅರುಣ್​ ಸಿಂಗ್​ ಮಾತನಾಡಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, "ಪ್ರಧಾನಿ ನರೇಂದ್ರ ಮೋದಿ ಅವರ ಬೆಳಗಾವಿ ಹಾಗು ಶಿವಮೊಗ್ಗ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾತ್ರೆಗೆ ಬಂದಿದ್ದು ಕೆಲವೇ ಸಾವಿರ ಜನ ಮಾತ್ರ. ಇದು ಕಾಂಗ್ರೆಸ್ ಕುಸಿದು ಬಿಜೆಪಿ ಬಹಳ ಮುಂದೆ ಸಾಗಿದೆ ಎಂಬುದನ್ನು ತೋರಿಸುತ್ತದೆ. ಜನ ಬೆಂಬಲ ಬಿಜೆಪಿಗಿದೆ ಎನ್ನುವುದಕ್ಕೆ ಇದೇ ನಿದರ್ಶನ" ಎಂದರು.

ಖರ್ಗೆಗೆ ಅಪಮಾನ ವಿಚಾರ: "ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅವಮಾನ ಮಾಡಿದೆ. ಅಧ್ಯಕ್ಷರಿಗೆ ಕೊಡೆ ಹಿಡಿಯದೇ ಮತ್ತೊಬ್ಬರಿಗೆ ಕೊಡೆ ಹಿಡಿದು ಆ ಮೂಲಕ ಅಧ್ಯಕ್ಷರಿಗೇ ಅಪಮಾನವೆಸಗಲಾಗಿದೆ. ಆದರೆ ಬಿಜೆಪಿ ಅತ್ಯುನ್ನತ ಸ್ಥಿತಿಯಲ್ಲಿದೆ. ನಾವು ಮಾಡಿರುವ ಅಭಿವೃದ್ಧಿ ಆಧಾರದಲ್ಲಿ ನಾವು ಕಾಂಗ್ರೆಸ್‌ನಿಂದ ಬಹಳ ಮುಂದಿದ್ದೇವೆ" ಎಂದು ಹೇಳಿದರು.

ಈಗಾಗಲೇ ಬೂತ್ ವಿಜಯ್ ಅಭಿಯಾನ ಯಶಸ್ವಿಯಾಗಿದೆ. ಈಗ ವಿಜಯಸಂಕಲ್ಪ ಅಭಿಯಾನ ಮಾಡುತ್ತಿದ್ದೇವೆ. ಪ್ರತಿ ಬೂತ್‌ನಲ್ಲಿ ಯಾತ್ರೆ ನಡೆಯಲಿದೆ. ಎಲ್ಲಾ ಕ್ಷೇತ್ರಕ್ಕೂ ರಥಯಾತ್ರೆ ಹೋಗಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಹಿರಿಯ ನಾಯಕ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲ ನಾಯಕರೂ ಸೇರಿ ಯಾತ್ರೆ ಶುಭಾರಂಭ ಮಾಡಲಿದ್ದಾರೆ.

ಮಾರ್ಚ್​ 1ರಿಂದ ವಿಜಯ ಸಂಕಲ್ಪ: "ಮಾರ್ಚ್ 1 ರಿಂದ ಯಾತ್ರೆ ಆರಂಭಗೊಳ್ಳಲಿದೆ. 150 ಸ್ಥಾನ ಗಳಿಸಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಮೋದಿ ರೋಡ್ ಶೋನಲ್ಲಿ ಲಕ್ಷಾಂತರ ಜನ ಸೇರಿದ್ದರು. ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ. ನಮ್ಮ ವಿರುದ್ಧ ಮಾತನಾಡಲು ಅವರಿಗೆ ಯಾವುದೇ ವಿಷಯ ಇಲ್ಲ. ಅವರಿಗೆ ಅಜೆಂಡಾ ಇಲ್ಲ, ನಾಯಕರೂ ಇಲ್ಲ, ಕಾರ್ಯಕರ್ತರೂ ಇಲ್ಲ, ಸಂಘಟನೆಯೂ ಇಲ್ಲ. ಹಾಗಾಗಿ ನಮ್ಮ ಪಕ್ಷವೇ ಮರಳಿ ಸರ್ಕಾರ ರಚಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ :ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ಶಾಸಕ ತನ್ವೀರ್ ಸೇಠ್ ನಿರ್ಧಾರ: ಈಟಿವಿ ಭಾರತದ ಜೊತೆ ಸಂದರ್ಶನ

Last Updated :Feb 28, 2023, 4:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.