ETV Bharat / state

ಬೆಂಗಳೂರು: ವಿವಾಹೇತರ ಸಂಬಂಧ ನಿರಾಕರಿಸಿದ ಮಹಿಳೆ, ಚಾಕುವಿನಿಂದ ಇರಿದು ಕೊಂದ ವ್ಯಕ್ತಿ

author img

By ETV Bharat Karnataka Team

Published : Dec 11, 2023, 2:32 PM IST

ಬೆಂಗಳೂರಿನಲ್ಲಿ ದುರಂತ ಘಟನೆಯೊಂದು ನಡೆದಿದೆ. ವಿವಾಹೇತರ ಸಂಬಂಧ ನಿರಾಕರಸಿದ್ದ ಮಹಿಳೆಗೆ ಆರೋಪಿಯೊಬ್ಬ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದಲ್ಲಿ ಬೆಚ್ಚಿ ಬೀಳಿಸಿದೆ.

murder
ಘಟನಾ ಸ್ಥಳ

ಬೆಂಗಳೂರು: ಅನೈತಿಕ ಸಂಬಂಧ ನಿರಾಕರಿಸಿದ ಕಾರಣಕ್ಕೆ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಭಾನುವಾರ ಬೆಂಗಳೂರಿನ ಜೆ.ಜೆ ನಗರದ ನಾಲ್ಕನೇ ಕ್ರಾಸ್​ನಲ್ಲಿ ನಡೆದಿದೆ. ಪರ್ವೀನ್ ತಾಜ್ ಕೊಲೆಯಾದ ಮಹಿಳೆ‌ಯಾಗಿದ್ದು, ಕೃತ್ಯದ ಬಳಿಕ ಆರೋಪಿ ಮೊಹಮ್ಮದ್ ಜುನೈದ್ ಪರಾರಿಯಾಗಿದ್ದಾನೆ.

ಆರೋಪಿ ಮೊಹಮ್ಮದ್ ಜುನೈದ್ ತನ್ನ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಹೊಂದಿದ್ದ. ಈ ವಿಚಾರವಾಗಿ ದಂಪತಿ ಕಿತ್ತಾಡಿಕೊಂಡಿದ್ದರು. ಅವರಿಬ್ಬರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಈ ಘಟನೆ ಆದ ಬಳಿಕ ಪತ್ನಿಯಿಂದ ದೂರಾಗಿದ್ದ ಜುನೈದ್, ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಜುನೈದ್ ತನ್ನ ಸಂಬಂಧಿ ಪರ್ವಿನ್ ತಾಜ್​ಗೆ ಹತ್ತಿರವಾಗಿದ್ದ. ಇತ್ತ ಪರ್ವೀನ್ ಸಹ ವಿವಾಹವಾಗಿದ್ದರೂ ಸಹ ಜುನೈದ್​ನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಪರ್ವಿನ್ ಸಹ ಜುನೈದ್​ನನ್ನು ನಿರ್ಲಕ್ಷ್ಯಿಸತೊಡಗಿದ್ದಳು. ಇದೇ ವಿಚಾರಕ್ಕೆ ಕೋಪಗೊಂಡಿದ್ದ ಜುನೈದ್ ತಡ ರಾತ್ರಿ ಯಾರೂ ಇರದ ಸಮಯದಲ್ಲಿ ಪರ್ವೀನ್ ಮನೆಗೆ ಚಾಕು ಸಮೇತ ತೆರಳಿ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಬಳಿಕ ಆರೋಪಿ ಜುನೈದ್​ ಪರಾರಿಯಾಗಿದ್ದು, ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯಲ್ಲಿ ಸ್ಥಳೀಯರನ್ನು ವಿಚಾರಿಸಿದಾಗ ಮೇಲಿನ ವಿವರ ಪೊಲೀಸರಿಗೆ ದೊರೆತಿದೆ. ಬಳಿಕ ಕೊಲೆಯಾದ ಮಹಿಳೆಯ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಜೆ.ಜೆ. ನಗರ ಠಾಣಾ ಪೊಲೀಸರು ಅರೋಪಿ ಜುನೈದ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಆಸ್ತಿ ಕಲಹ: ಹೆತ್ತ ಅಪ್ಪ-ಅಮ್ಮನನ್ನೇ ಹೊಡೆದು ಕೊಂದ ಮಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.