ETV Bharat / state

ಬಿಡದಿಯಲ್ಲಿ 3ನೇ ಕಾರು ಉತ್ಪಾದನಾ ಘಟಕ ಆರಂಭಿಸಲು ಟೊಯೋಟಾ - ಸರ್ಕಾರದ ನಡುವೆ ಒಡಂಬಡಿಕೆ

author img

By ETV Bharat Karnataka Team

Published : Nov 21, 2023, 10:49 PM IST

ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯು ಬಿಡದಿಯಲ್ಲಿ 3,300 ಕೋಟಿ ರೂ ವೆಚ್ಚದಲ್ಲಿ ತನ್ನ 3ನೇ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಸರಕಾರ ಮತ್ತು ಕಂಪನಿ ನಡುವೆ ಇಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

Agreement held between Toyota Govt
ಟೊಯೋಟಾ ಸರ್ಕಾರದ ನಡುವೆ ಒಡಂಬಡಿಕೆ ನಡೆಯಿತು.

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯು ಬಿಡದಿಯಲ್ಲಿ 3,300 ಕೋಟಿ ರೂ ವೆಚ್ಚದಲ್ಲಿ ತನ್ನ 3ನೇ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲಿದ್ದು, ಈ ಸಂಬಂಧ ರಾಜ್ಯ ಸರಕಾರ ಮತ್ತು ಕಂಪನಿ ಮಂಗಳವಾರ ಬೆಂಗಳೂರಲ್ಲಿ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹಾಜರಿದ್ದರು. ಸರಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ ಮತ್ತು ಟೊಯೋಟಾ ಪರ ಆ ಕಂಪನಿಯ ಉಪಾಧ್ಯಕ್ಷ ಸುದೀಪ್‌ ದಳವಿ ಅಂಕಿತ ಹಾಕಿ, ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು.

ಬಳಿಕ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯು ರಾಜ್ಯದಲ್ಲಿ ನೆಲೆಯೂರಿ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲೇ ಕಂಪನಿಯು ನೂತನ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ. ಇದರಿಂದ ಸ್ಥಳೀಯ ಮಟ್ಟದಲ್ಲಿ ಉತ್ಪಾದನನಾ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದ್ದು, ನೂತನ ತಂತ್ರಜ್ಞಾನಾಧಾರಿತ ಕಾರುಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗಲಿವೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟೊಯೋಟಾ 3ನೇ ಘಟಕದಿಂದ 2 ಸಾವಿರ ಉದ್ಯೋಗ ಸೃಷ್ಟಿ: ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯು ಎರಡು ಉತ್ಪಾದನಾ ಘಟಕಗಳು ಈಗಾಗಲೇ ಬಿಡದಿಯಲ್ಲಿ ಸಕ್ರಿಯವಾಗಿವೆ. ಉದ್ದೇಶಿತ ಮೂರನೇ ಘಟಕದಲ್ಲಿ ವರ್ಷಕ್ಕೆ ಹೆಚ್ಚುವರಿಯಾಗಿ 1 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು, ಇದರಿಂದ ಅಂದಾಜು 2 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ರಾಜ್ಯದ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆ: ಸರಕಾರವು ಕೈಗಾರಿಕೆ ರಂಗದ ಬೆಳವಣಿಗೆಗೆ ಆದ್ಯ ಗಮನ ಕೊಟ್ಟಿದ್ದು, ವಿದ್ಯುತ್‌ ಚಾಲಿತ ವಾಹನಗಳ ವಲಯ ಸೇರಿದಂತೆ ಒಟ್ಟು 9 ವಲಯಗಳಿಗೆ ಅನ್ವಯವಾಗುವಂತೆ ವಿಷನ್‌ ಗ್ರೂಪ್‌ಗಳನ್ನು ರಚಿಸಿದೆ. ಅವುಗಳಲ್ಲಿ ಗಣ್ಯ ಉದ್ಯಮಿಗಳೇ ಇದ್ದು, ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಲಾಗುವುದು. ಜೊತೆಗೆ ಕರ್ನಾಟಕ ಇನ್ವೆಸ್ಟ್ಮೆಂಟ್‌ ಫೋರಂ ಮತ್ತು ಸ್ಟ್ರಾಟೆಜಿಕ್‌ ಇನ್ವೆಸ್ಟ್ಮೆಂಟ್‌ ಫೋರಂ ಎರಡಕ್ಕೂ ಹೊಸ ರೂಪ ನೀಡಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಟೊಯೋಟಾ ವ್ಯವಸ್ಥಾಪಕ ನಿರ್ದೇಶಕ ಮಸಕಝು ಯೋಶಿಮುರ, ಉಪಾಧ್ಯಕ್ಷ ಸ್ವಪ್ನೇಶ್‌ ಮರು, ವಿಕ್ರಂ ಗುಲಾಟಿ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.

ಇದನ್ನೂಓದಿ:ಮಹಿಳಾ ಉದ್ಯಮಿಗಳಿಗೆ ಸಹಾಯ ಸೌಕರ್ಯ ಒದಗಿಸಲು ಸರಕಾರ ಬದ್ಧ: ಸಚಿವ ಎಂ ಬಿ ಪಾಟೀಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.