ETV Bharat / state

ಬ್ರ್ಯಾಂಡ್ ಬೆಂಗಳೂರು ಅಭಿಯಾನದಲ್ಲಿ ಸ್ವಚ್ಛ ಬೆಂಗಳೂರು ವಿಭಾಗಕ್ಕೆ 10,479 ಸಲಹೆ

author img

By

Published : Aug 3, 2023, 8:56 PM IST

ರಾಜ್ಯ ಸರ್ಕಾರ ಆರಂಭಿಸಿರುವ ಬ್ರಾಂಡ್​ ಬೆಂಗಳೂರು ಅಭಿಯಾನಕ್ಕೆ ಸ್ವಚ್ಛ ಬೆಂಗಳೂರು ವಿಭಾಗದಲ್ಲಿ ಸಲಹೆಗಳ ಮಹಾಪೂರವೇ ಹರಿದುಬಂದಿದೆ.

10479-suggestions-recieved-for-clean-bengaluru-in-brand-bengaluru-campaign
ಬ್ರ್ಯಾಂಡ್ ಬೆಂಗಳೂರು ಅಭಿಯಾನದಲ್ಲಿ ಸ್ವಚ್ಚ ಬೆಂಗಳೂರು ವಿಭಾಗಕ್ಕೆ 10,479 ಸಲಹೆ

ಬೆಂಗಳೂರು : ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ಅಭಿಯಾನಕ್ಕೆ ಹಲವು ಸಲಹೆ, ಸೂಚನೆಗಳ ಮಹಾಪೂರವೇ ಹರಿದುಬಂದಿದೆ. ಸ್ವಚ್ಛ ಬೆಂಗಳೂರು ವಿಭಾಗ ಸಂಬಂಧ 10,479 ಸಲಹೆಗಳು ಸ್ವೀಕಾರವಾಗಿವೆ. ಇಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಬಂದಂತಹ ಸಲಹೆಗಳು ಮತ್ತು ನಾಗರಿಕರಿಂದ ಈಗಾಗಲೇ ಬಂದಿರುವ ಎಲ್ಲ ಸಲಹೆಗಳನ್ನು ಕ್ರೋಢೀಕರಿಸಿ ಅಧ್ಯಯನ ನಡೆಸಿ ಅಂತಿಮವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.

ಗುರುವಾರ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಲಾಗಿದ್ದ ಘನತ್ಯಾಜ್ಯ ನಿರ್ವಹಣೆ ಪಾಲುದಾರರ ಸಭೆಯಲ್ಲಿ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಸಲಹೆಗಳನ್ನು ಬೇರ್ಪಡಿಸಿ ವರದಿ ಸಿದ್ಧಪಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ನಾಗರಿಕರಿಂದ ಬಂದಿರುವ ಸಲಹೆಗಳ ಸಂಬಂಧ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್, ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಬೆಂಗಳೂರು ವಿವಿ ರಿಜಿಸ್ಟರ್ ಶೇಖ್ ಲತೀಫ್ ಮಾತನಾಡಿ, ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸ್ವಚ್ಛ ಬೆಂಗಳೂರು ವಿಭಾಗಕ್ಕೆ ನಮ್ಮ ವಿವಿ ಶೈಕ್ಷಣಿಕ ಪಾಲುದಾರವಾಗಿದೆ. ಸ್ವಚ್ಛ ಬೆಂಗಳೂರು ವಿಭಾಗಗಕ್ಕೆ ಬಂದಿರುವ ಸಲಹೆಗಳನ್ನು ಈಗಾಗಲೇ ವಿಂಗಡಿಸಲಾಗಿದೆ. ವಿಚಾರ ಸಂಕಿರಣದಲ್ಲಿ ಬಂದಿರುವ ಸಲಹೆಗಳನ್ನೂ ಒಟ್ಟುಗೂಡಿಸಿ ವರದಿ ತಯಾರಿಸಲಾಗುವುದು ಎಂದರು.

ಘನತ್ಯಾಜ್ಯ ನಿರ್ವಹಣೆ ಕರ್ತವ್ಯ ಪಾಲಿಕೆ ಮಾತ್ರವಲ್ಲದೆ ಎಲ್ಲರೂ ಮೂಲದಲ್ಲಿ ಹಸಿ ಮತ್ತು ಒಣ ಕಸಿ ವಿಗಂಡಿಸಿ ಸ್ವಚ್ಛತೆ ಕಾಪಾಡಿದರೆ ‘ಸ್ವಚ್ಛ ಬೆಂಗಳೂರು’ ರೂಪುಗೊಳ್ಳಲಿದೆ. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ರಸ್ತೆ ಬದಿ ಮತ್ತು ಖಾಲಿ ಜಾಗದಲ್ಲಿ ಬಿಸಾಡುವುದನ್ನು ತಡೆಯಬೇಕು ಎಂದು ಸಲಹೆ ನೀಡಿದರು. ಈ ವೇಳೆ ಘನತ್ಯಾಜ್ಯ ವಿಭಾಗದ ಜಂಟಿ ಆಯಕ್ತ ಧರ್ಮಪಾಲ್, ಪರಿಸರ ವಿಜ್ಞಾನ ವಿಭಾಗದ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

5,500 ಮೆಟ್ರಿಕ್​ ಟನ್ ಕಸ ಉತ್ಪತ್ತಿ: ರಾಜಧಾನಿಯಲ್ಲಿ ಅಂದಾಜು 1.4 ಕೋಟಿ ಲಕ್ಷ ಜನಸಂಖ್ಯೆಯಿದೆ. ಪ್ರತಿ ನಿತ್ಯ 5,500 ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದೆ. ವೈಜ್ಞಾನಿಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡದಿದ್ದಲ್ಲಿ ಮುಂದಿನ 15 ವರ್ಷಗಳಲ್ಲಿ 12 ಸಾವಿರ ಮೆ.ಟನ್ ಕಸ ಉತ್ಪತ್ತಿಯಾಗಲಿದೆ. ಆದ್ದರಿಂದ, ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕ, ತ್ಯಾಜ್ಯ ಸಂಸ್ಕರಣಾ ಘಟಕ, ವೇಸ್ಟ್ ಟು ಎನರ್ಜಿ ಘಟಕ ಹಾಗೂ ಬಯೋ ಸಿಎನ್‌ಜಿ ಸಂಸ್ಥೆಯು ಮೂಲದಲ್ಲಿಯೇ ಸಂಸ್ಕರಣೆ ಮಾಡುವುದರಿಂದ ತ್ಯಾಜ್ಯ ಸಮಸ್ಯೆ ಬಗೆಹರಿಸಬಹುದು ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಮುಖ್ಯ ಪ್ರಧಾನ ಅಭಿಯಂತರ ಬಸವರಾಜ್ ಕಬಾಡೆ ವಿವರಿಸಿದರು.

ಏನೇನು ಸಲಹೆಗಳು? :

  • ಮೂಲದಲ್ಲಿ ತ್ಯಾಜ್ಯ ವಿಂಗಡಿಸಿ
  • ತ್ಯಾಜ್ಯದಿಂದ ವೇಸ್ಟ್ ಟು ಎನರ್ಜಿಯಾಗಿ ಪರಿವರ್ತಿಸಿ
  • ಘನತ್ಯಾಜ್ಯ ನಿರ್ವಹಣೆಯಲ್ಲಿ ಕೇಂದ್ರೀಕೃತ, ವಿಕೇಂದ್ರೀಕೃತ ಪದ್ಧತಿ ಅಳವಡಿಸಿ
  • ತ್ಯಾಜ್ಯ ವಿಲೇವಾರಿ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸಿ
  • ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಿ ವೈಜ್ಞಾನಿಕ ನಿರ್ವಹಣೆ ಮಾಡಿ
  • ಡೋರ್ ಟು ಡೋರ್ ತ್ಯಾಜ್ಯ ವಿಂಗಡಣೆಗೆ ಲಿಂಕ್ ವರ್ಕ್​ರ್ಸ್ ಬಳಸಿಕೊಳ್ಳಿ
  • ಆಟೋ ಟಿಪ್ಪರ್‌ಗಳ ಮೇಲೆ ನಿಗಾ ಇಟ್ಟು ಮೇಲ್ವಿಚಾರಣೆ
  • ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್ ಅಳವಡಿಸಿ
  • ಪ್ರತಿ ವಲಯದಲ್ಲೂ ಕಂಟ್ರೋಲ್ ಕಮಾಂಡ್ ಸೆಂಟರ್ ಸ್ಥಾಪಿಸಿ
  • ಎಲ್ಲ ಮನೆಗಳಲ್ಲೂ ತ್ಯಾಜ್ಯ ಸಂಸ್ಕರಣೆ ಪದ್ಧತಿ ಜಾರಿಗೊಳಿಸಿ
  • ಪ್ರತಿ ವಾರ್ಡ್‌ನಲ್ಲೂ ಒಣ ತ್ಯಾಜ್ಯ ಸಂಗ್ರಹಣ ಘಟಕ ತೆರೆಯಿರಿ
  • ಸಂಪೂರ್ಣವಾಗಿ ಪ್ಲಾಸ್ಟಿಕ್ ಉತ್ಪನ್ನ ನಿಷೇಧಿಸಿ
  • ಹೆಚ್ಚಾಗಿ ಶೌಚಗೃಹ ಸ್ಥಾಪಿಸಬೇಕು
  • ಘನತ್ಯಾಜ್ಯ ನಿರ್ವಹಣೆಗೆ ಮೂಲಸೌಕರ್ಯ ಕಲ್ಪಿಸಿ
  • ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯ ಬಿನ್ ಅಳವಡಿಸಿ
  • ಅವಶ್ಯಕತೆ ಆಧಾರದ ಮೇಲೆ ಪೌರಕಾರ್ಮಿಕರನ್ನು ನೇಮಿಸಿ
  • ಸ್ವಚ್ಛತಾ ವಿಭಾಗಕ್ಕೆ ಪೌರಕಾರ್ಮಿಕರನ್ನು ರಾಯಭಾರಿಯಾಗಿ ಮಾಡಿ

ಇದನ್ನೂ ಓದಿ : ದಲಿತ ವರ್ಗಕ್ಕೆ ಮೀಸಲಿಟ್ಟಿದ್ದ 11,130 ಕೋಟಿ ಗ್ಯಾರಂಟಿಗಳಿಗೆ ವಿನಿಯೋಜನೆ: ಪುರುಷೋತ್ತಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.