ETV Bharat / state

ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರಗತಿ ಪ್ರತಿಮೆ ಲೋಕಾರ್ಪಣೆ ಮಾಡಿದ ಪ್ರಧಾನಿ

author img

By

Published : Nov 11, 2022, 12:31 PM IST

Updated : Nov 11, 2022, 12:57 PM IST

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದರು.

pm-narendra-modi-unveils-bronze-statue-of-nadaprabhu-kempegowda
ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರಗತಿ ಪ್ರತಿಮೆ ಲೋಕಾರ್ಪಣೆ ಮಾಡಿದ ಪ್ರಧಾನಿ

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರಗತಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ಡಾ‌.ಸಿ‌.ಎನ್.ಅಶ್ವತ್ಥ್ ನಾರಾಯಣ, ಆರ್. ಅಶೋಕ್ , ಸಿ‌.ಸಿ. ಪಾಟೀಲ್ ಹಾಗೂ ಮತ್ತಿತರರು ಹಾಜರಿದ್ದರು.

ಕೆಂಪೇಗೌಡರ ಬೃಹತ್ ಕಂಚಿನ ಪ್ರಗತಿ ಪ್ರತಿಮೆ ಲೋಕಾರ್ಪಣೆ

ಶಿಲ್ಪಿ ರಾಮ್ ಸುತಾರ್​​ ಅವರಿಗೆ ಅಭಿನಂದನೆ: ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನು ನಿರ್ಮಿಸಿದವರು ರಾಮ್ ಸುತಾರ್. ಇಡೀ ಭಾರತದಲ್ಲಿ ಅತ್ಯಂತ ಶ್ರೇಷ್ಠ ಶಿಲ್ಪಿ. ಅಹಮದಾಬಾದ್‍ನಲ್ಲಿರುವ ವಲ್ಲಭಭಾಯಿ ಪಟೇಲ್ ಅವರ ಐಕ್ಯತಾ ಮೂರ್ತಿಯನ್ನೂ ಹಾಗೂ ಅಂಬೇಡ್ಕರ್ ಅವರ ಅತಿ ಎತ್ತರದ ಮೂರ್ತಿಯನ್ನು ನಿರ್ಮಿಸಿದ ಖ್ಯಾತಿ ಅವರದ್ದು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ರಾಮ್ ಸುತಾರ್​ ಅವರಿಗೆ ಅಭಿನಂದನೆ ಸಲ್ಲಿಸಿದರು. ಪ್ರಗತಿ ಪ್ರತಿಮೆ ಅನಾವರಣ ಮಾಡಿದ ನಂತರ ಸಾರ್ವಜನಿಕ ಸಭೆಗೆ ತೆರಳಿದರು.

ಕೆಂಪೇಗೌಡ ಪ್ರತಿಮೆ ವಿಶೇಷತೆಗಳೇನು?: ರಾಜ್ಯ ಸರ್ಕಾರ ನಿರ್ಮಾಣ ಮಾಡಿರುವ ಕೆಂಪೇಗೌಡರ ಈ ಪ್ರತಿಮೆ ಬೆಂಗಳೂರು ನಿರ್ಮಾತೃ ಒಬ್ಬರ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಲ್ಲಭಬಾಯ್ ಪಟೇಲರ ಏಕತಾ ಪ್ರತಿಮೆ ನಿರ್ಮಾಣ ಮಾಡಿದ 'ರಾಮ್ ಸುತಾರ್ ಕ್ರಿಯೇಷನ್ಸ್ ಸಂಸ್ಥೆ' ಕೆಂಪೇಗೌಡರ ಪ್ರತಿಮೆ ವಿನ್ಯಾಸ ಹಾಗೂ ನಿರ್ಮಾಣ ಮಾಡಿದೆ.

ಕೆಂಪೇಗೌಡರ ಪ್ರತಿಮೆಯ ಖಡ್ಗವೇ 4 ಸಾವಿರ ಕೆ.ಜಿ. ತೂಕ ಇದೆ. ಪ್ರತಿಮೆಗೆ ಒಟ್ಟು 65 ಕೋಟಿ ರೂ. ವೆಚ್ಚ ಮಾಡಲಾಗಿದೆ. 120 ಟನ್ ಉಕ್ಕು, 98 ಟನ್ ಕಂಚು ಉಪಯೋಗಿಸಲಾಗಿದೆ. ಪ್ರತಿಮೆ ಒಟ್ಟು 218 ಟನ್ ತೂಕ ಇದೆ. ಪ್ರತಿಮೆ ಸುತ್ತ 23 ಎಕರೆಯಲ್ಲಿ ಥೀಮ್ ಪಾರ್ಕ್, ಕೆರೆ ನಿರ್ಮಾಣ ಮಾಡಲಾಗಿದ್ದು, ರಾಜ್ಯದ ಹಲವು ಸ್ಥಳಗಳಿಂದ ಸಂಗ್ರಹಿಸಿರುವ ಮಣ್ಣನ್ನು ಈ ಥೀಮ್ ಪಾರ್ಕಿನಲ್ಲಿ ಬಳಸಿಕೊಳ್ಳಲಾಗಿದೆ. ಈ ಪ್ರತಿಮೆ ಬೆಂಗಳೂರಿನಲ್ಲಿಯೇ ಅತಿ ಎತ್ತರದ ಪ್ರತಿಮೆಯಾಗಿದೆ. ಪ್ರತಿಮೆಯೂ ನಾಯಕತ್ವ, ಧೀರ ಮತ್ತು ಆಡಳಿತಗಾರನಿಗೆ ಇರಬೇಕಾದ ಮೌಲ್ಯ, ವ್ಯಕ್ತಿತ್ವವನ್ನು ಬಿಂಬಿಸುತ್ತದೆ.

2020ರಲ್ಲೇ ಕಾಮಗಾರಿ ಆರಂಭ : 2020ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಮತ್ತು 23 ಎಕರೆ ವಿಸ್ತೀರ್ಣದ ಥೀಮ್ ಪಾರ್ಕ್ ಕಾಮಗಾರಿಗೆ ಅವರು ಭೂಮಿಪೂಜೆ ಸಹ ನೆರವೇರಿಸಿದ್ದರು.

ಮಾಜಿ ಪ್ರಧಾನಿಗೆ ಆಹ್ವಾನ ಇಲ್ಲ: ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷಗಳ ಹಲವಾರು ನಾಯಕರಿಗೆ ಆಹ್ವಾನ ಇರಲಿಲ್ಲ.

ಇದನ್ನೂ ಓದಿ: ಕರ್ನಾಟಕ-ಭಾರತ್​ ಗೌರವ್ ಕಾಶಿ ದರ್ಶನ ರೈಲಿನ ವಿಶೇಷತೆ ಹೀಗಿದೆ..

Last Updated : Nov 11, 2022, 12:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.