ಹೊಸಕೋಟೆ : ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಮತ್ತೊಂದು ಕಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಎರಡನ್ನೂ ಪಡೆದಿದ್ದ ಸಚಿವ ಎಂಟಿಬಿ ನಾಗರಾಜ್, ಈಗ ಬೇಕಾದ ಸಚಿವ ಸ್ಥಾನನೂ ಇಲ್ಲದೆ, ಇತ್ತ ಜಿಲ್ಲಾ ಉಸ್ತುವಾರಿ ಸ್ಥಾನವಿಲ್ಲದಂತಾಗಿದ್ದಾರೆ.
ಕಳೆದ ಐದಾರು ತಿಂಗಳಿಂದ ಉಸ್ತುವಾರಿ ಇಲ್ಲದೆ ಖಾಲಿ ಇದ್ದ ಏಳು ಜಿಲ್ಲೆಗಳಿಗೆ ಇಂದು ಉಸ್ತುವಾರಿ ಸಚಿವರನ್ನ ಸರ್ಕಾರ ನೇಮಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇಲೆ ಕಣ್ಣಿಟ್ಟಿದ್ದ ಎಂಟಿಬಿ ನಾಗರಾಜ್ಗೆ ಈಗ ನಿರಾಶೆ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಇದ್ದಾರೆ. ಆದರೂ ಕಣ್ಣಿಟ್ಟಿದ್ದ ಎಂಟಿಬಿಯವರಿಗೆ ಪಕ್ಕದ ಜಿಲ್ಲೆಯಾದ ಕೋಲಾರದ ಉಸ್ತುವಾರಿ ವಹಿಸಲಾಗಿದೆ.
ಪೌರಾಡಳಿತ ಸಚಿವರಾದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕೊಟ್ಟರೆ ನಿಭಾಯಿಸಿಕೊಂಡು ಹೋಗುವೆ ಎಂದು ಸ್ವತಃ ಎಂಟಿಬಿ ಅವರೇ ಹೇಳಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಿಕ್ಕರೆ ಹೊಸಕೋಟೆ ತಾಲೂಕಿನಲ್ಲಿ ಪಕ್ಷೇತರವಾಗಿ ಗೆದ್ದು ಕಾಂಗ್ರೆಸ್ ಬೆಂಬಲ ನೀಡಿರುವ ಶರತ್ ಬಚ್ಚೇಗೌಡ ಪ್ರಾಬಲ್ಯ ಕಡಿಮೆ ಮಾಡಬಹುದು ಎಂದುಕೊಂಡಿದ್ದ ಲೆಕ್ಕಾಚಾರ ಈಗ ಉಲ್ಟಾ ಆಗಿದೆ.
ಆದರೆ, ಮುಖ್ಯಮಂತ್ರಿಗಳು ಎಂಟಿಬಿ ನಾಗರಾಜ್ ಅವರಿಗೆ ಉಸ್ತುವಾರಿಯನ್ನ ದೂರದ ಜಿಲ್ಲೆಗೆ ವಹಿಸದೆ ಹೊಸಕೋಟೆಗೆ ಹತ್ತಿರವಿರುವ ಕೋಲಾರ ಜಿಲ್ಲೆಯನ್ನ ನೀಡಿದ್ದಾರೆ.
ಮಗನ ಭವಿಷ್ಯಕ್ಕಾಗಿ ಕೋಲಾರ ಉಸ್ತುವಾರಿ: ಕೆಲವು ಬಲ್ಲ ಮೂಲಗಳ ಪ್ರಕಾರ, ಎಂಟಿಬಿ ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ. ಬದಲಿಗೆ ಪುತ್ರನನ್ನು ಕಣಕ್ಕಿಳಿಸಲಿದ್ದಾರೆ. ಹೊಸಕೋಟೆಯಲ್ಲಿ ಪುತ್ರನ ರಾಜಕೀಯ ಜೀವನದ ಬೆಳವಣಿಗೆಗೆ ಅಷ್ಟೊಂದು ಪೂರಕ ವಾತಾವರಣವಿಲ್ಲ ಎಂಬುದನ್ನು ಮನಗಂಡೇ ಕೋಲಾರದತ್ತ ಮುಖ ಮಾಡಿದ್ದಾರೆ.
ಕೋಲಾರದಲ್ಲಿ ಪುತ್ರನನ್ನು ಕಣಕ್ಕಿಳಿಸುವುದು ತೀರಾ ಅನಿವಾರ್ಯವಾದರೆ ಮಾತ್ರ ಕಣಕ್ಕಿಳಿಸಲಿದ್ದಾರೆ. ಆದರೆ, ಮತ್ತೊಮ್ಮೆ ಹೊಸಕೋಟೆಯಿಂದ ತಾವೇ ಕಣಕ್ಕಿಳಿಯಲು ಎಂಟಿಬಿ ನಿರ್ಧರಿಸಿದ್ದಾರೆ. ಹೀಗಾಗಿಯೇ, ಅವರು ಮಗನಿಗಾಗಿ ಕ್ಷೇತ್ರ ಭದ್ರ ಮಾಡಿಕೊಳ್ಳಲು ಕೋಲಾರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬರುವ ಚುನಾವಣೆಯಲ್ಲಿ ಶರತ್ ಕಾಂಗ್ರೆಸ್ನಿಂದ ಕಣಕ್ಕಿಳಿಯುವುದು ಬಹುತೇಕ ನಿಶ್ಚಯವಾಗಿರುವುದರಿಂದ, ತಾವಾಗಲಿ ಅಥವಾ ಪುತ್ರನಾಗಲಿ ಕಣಕ್ಕಿಳಿದರೆ ಮತ್ತೊಮ್ಮೆ ಗೆಲ್ಲಲು ಸಾಕಷ್ಟು ಪರಿಶ್ರಮ ಪಡಬೇಕು ಎಂಬ ಕಾರಣಕ್ಕೆ ಹೊಸಕೋಟೆ ಬಿಟ್ಟು ಕೋಲಾರಕ್ಕೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ.
ಓದಿ: ಬಿಎಸ್ವೈಗೆ ಡಬಲ್ ರಿಲೀಫ್ ನೀಡಿದ ಉಪ ಚುನಾವಣಾ ಫಲಿತಾಂಶ: ಸಿಎಂ ಕುರ್ಚಿ ಸುಭದ್ರ