ETV Bharat / state

ದೇವನಹಳ್ಳಿ: ಕೆಎಸ್​​ಆರ್​​ಟಿಸಿ ಬಸ್​​ ಡಿಕ್ಕಿ ಹೊಡೆದು ಹೂವು ಬೆಳೆಗಾರ ಸಾವು

author img

By

Published : Apr 6, 2023, 3:33 PM IST

Updated : Apr 6, 2023, 4:55 PM IST

ರೈತರೊಬ್ಬರು ಬೆಳಗ್ಗೆ ತಮ್ಮ ಮಗಳನ್ನು ಕಾಲೇಜಿಗೆ ಬಿಟ್ಟು, ಹೂವುಗಳನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

flower-grower-died-after-being-hit-by-a-ksrtc-bus
ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿಗೆ 4ನೇ ಬಲಿ: ಕೆಎಸ್​​ಆರ್​​ಟಿಸಿ ಬಸ್​​ಗೆ ಸಿಲುಕಿ ಹೂವು ಬೆಳೆಗಾರ ಸಾವು

ದೇವನಹಳ್ಳಿ: ಕೆಎಸ್​​ಆರ್​​ಟಿಸಿ ಬಸ್​​ ಡಿಕ್ಕಿ ಹೊಡೆದು ಹೂವು ಬೆಳೆಗಾರ ಸಾವು

ದೇವನಹಳ್ಳಿ: ಹೂವು ಬೆಳೆಗಾರರೊಬ್ಬರು ಕೆಎಸ್​​ಆರ್​ಟಿಸಿ ಬಸ್ ಗುದ್ದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಬೀರಸಂದ್ರ ಕ್ರಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ. ಬೈರನಹಳ್ಳಿಯ ನಿವಾಸಿ ರಮೇಶ್ (53) ಮೃತರು. ಇವರು ಬೆಳಗ್ಗೆ ಮಗಳನ್ನು ಕಾಲೇಜಿಗೆ ಬಿಟ್ಟು ಹೂವನ್ನು ಮಾರುಕಟ್ಟೆಗೆ ಹಾಕಲು ದೊಡ್ಡಬಳ್ಳಾಪುರಕ್ಕೆ ಬೈಕ್​ನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಏಕಮುಖ ರಸ್ತೆಯಲ್ಲಿ ಅತಿವೇಗವಾಗಿ ಬಂದ ಬಸ್ ರಮೇಶ್ ಅವರಿದ್ದ ಬೈಕ್​ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿತು.

"ರಸ್ತೆ ಕಾಮಗಾರಿ ಪ್ರಾರಂಭವಾದ ನಂತರ ಇದೇ ಸ್ಥಳದಲ್ಲೇ ಅಪಘಾತದಿಂದಾಗಿ ಈಗಾಗಲೇ ನಾಲ್ವರು ಸಾವನ್ನಪ್ಪಿದಾರೆ. ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು ಬಸ್ ಏಕಮುಖ ರಸ್ತೆಯಲ್ಲಿ ಬಂದಿದ್ದು ಘಟನೆ ಜರುಗಲು ಕಾರಣವಾಗಿದೆ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಸೂಚನ ಫಲಕಗಳು ಮತ್ತು ತಡೆಗೋಡೆ ಹಾಕದೇ ಇರುವುದರಿಂದ ರಸ್ತೆ ಅಪಘಾತಗಳು ನಡೆಯುತ್ತಿವೆ" ಎಂದು ಸಾರ್ವಜನಿಕರು ಹೇಳಿದ್ದಾರೆ. ಇಂದು ಘಟನೆ ನಡೆದ ಬಳಿಕ ಸ್ಥಳದಿಂದ ಶವವನ್ನು ಸಾಗಿಸಲು ಅವಕಾಶ ನೀಡದ ಸ್ಥಳೀಯರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ರಸ್ತೆ ತಡೆದು ಪ್ರತಿಭಟಿಸಿದರು.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಸಹಕಾರ ಆರೋಪ : 16 ಶಿಕ್ಷಕರು ಅಮಾನತು

ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮೃತನ ಸಂಬಂಧಿ ರಂಜಿತ್​ ಕುಮಾರ್​ ಮಾತನಾಡಿ, ‘‘ಈ ಹಿಂದೆ ಇದೇ ರಸ್ತೆಯಲ್ಲಿ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಶವ ಸಾಗಿಸದೇ ಪ್ರತಿಭಟನೆ ನಡೆಸುತ್ತೇವೆ. ಕಾಮಗಾರಿ ನಡೆಸುವ ಮುನ್ನ ಸರಿಯಾದ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ. ಮೃತರು ವ್ಯವಸಾಯ, ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆಗೆ ಆಧಾರಸ್ತಂಭವಾಗಿದ್ದವರೇ ಈಗ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ’’ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ದೇವನಹಳ್ಳಿ: ಸ್ನಾನಗೃಹದ ಗೋಡೆ ಕುಸಿದು ಮಹಿಳೆ ಸಾವು

ಘಟನೆ ಬಗ್ಗೆ ಸ್ಥಳೀಯರಾದ ಸುಬ್ರಹ್ಮಣ್ಯ ಎಂಬವರು ಮಾತನಾಡಿ, ‘‘ಯಾವುದೇ ಸೂಚನಾ ಫಲಕವಿಲ್ಲದೇ ರಸ್ತೆಯಲ್ಲಿ ಏಕಮುಖವಾಗಿ ಬಸ್​ ಸಂಚಾರ ಮಾಡಲು ಅನುಮತಿ ನೀಡಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಹಿಂದೆಯೂ ನಾಲ್ಕು ಜನ ಸಾವನ್ನಪ್ಪಿದ್ದರು. ತಮ್ಮ ಮಗಳನ್ನು ಪರೀಕ್ಷೆ ಬರೆಯಲು ಕಾಲೇಜಿಗೆ ಬಿಟ್ಟು ಕಾನೂನು ಪ್ರಕಾರವಾಗಿಯೇ ರಸ್ತೆಯಲ್ಲಿ ಸಂಚರಿಸಿದರೂ ಅಪಘಾತವಾಗಿದೆ. ಈ ಸಾವಿಗೆ ಯಾರು ಹೊಣೆ?, ಅಧಿಕಾರಿಗಳು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದೇ ಅಮಾಯಕರ ಜೀವದ ಜೊತೆ ಆಟವಾಡುತ್ತಿದ್ದಾರೆ’’ ಎಂದರು.

ಇದನ್ನೂ ಓದಿ: ಓವರ್​ ಟೇಕ್​ ಭರದಲ್ಲಿ ಡಿಕ್ಕಿ: 3 ಟ್ರಕ್​ಗಳಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಚಾಲಕರು ಸಜೀವ ದಹನ

Last Updated : Apr 6, 2023, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.