ETV Bharat / state

ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಹೋದ ತಂದೆ - ಮಗ ಕೆರೆಯಲ್ಲಿ ಮುಳುಗಿ ಸಾವು

author img

By ETV Bharat Karnataka Team

Published : Aug 24, 2023, 9:27 AM IST

ಕುಂಟೆಯಲ್ಲಿ ಮುಳುಗಿ ಸಾವು
ಕುಂಟೆಯಲ್ಲಿ ಮುಳುಗಿ ಸಾವು

Father and son died in Doddaballapur: ತಾವರೆ ಹೂವು ಕೀಳಲು ಹೋಗಿ ತಂದೆ ಮಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ: ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬದ ಆಚರಣೆಗಾಗಿ ಕೆರೆಯಲ್ಲಿ ತಾವರೆ ಹೂವು ಕೀಳಲು ಹೋಗಿ ತಂದೆ-ಮಗ ದಾರುಣ ಸಾವು ಕಂಡಿರುವ ಘಟನೆ ಬುಧವಾರ ಸಂಜೆ ತಾಲೂಕಿನ ಹುಲಿಕುಡಿ ಬೆಟ್ಟದ ತಪ್ಪಲಿನ ಕೆರೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ಶಾಂತಿನಗರದಲ್ಲಿರುವ ಮುತ್ಯಾಲಮ್ಮ ದೇವಾಲಯ ಸಮೀಪ ವಾಸವಿದ್ದ ಪುಟ್ಟರಾಜು(45), ಕೇಶವ( 16) ಮೃತಪಟ್ಟ ದುರ್ದೈವಿಗಳು.

ನಗರದ ಜ್ಞಾನಗಂಗಾ ಶಾಲೆಯಲ್ಲಿ ಎಸ್ಎಸ್ಎಲ್​ಸಿ ಓದುತ್ತಿದ್ದ ಬಾಲಕ‌ ಕೇಶವ ಸಂಜೆ ತಂದೆಯೊಂದಿಗೆ ಹುಲುಕುಡಿ ಬೆಟ್ಟದ ತಪ್ಪಲಿನ ಕೆರೆಯಲ್ಲಿ ತಾವರೆ ಹೂವು ಕೀಳಲು ಹೋಗಿದ್ದರು. ಬಾಲಕ ಕೇಶವ ತಾವರೆ ಹೂವು ಕೀಳಲು ನೀರಿಗಿಳಿದಾಗ ಕಾಲು ಜಾರಿ ಆಳಕ್ಕೆ ಹೋಗಿ ಮುಳುಗುತ್ತಿದ್ದ. ಈ ವೇಳೆ‌ ಮಗನ ರಕ್ಷಣೆಗೆ ಧಾವಿಸಿದ ತಂದೆ ಪುಟ್ಟರಾಜು ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತ ಪುಟ್ಟರಾಜು ಅವರು ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ‌ ಮಾಡುತ್ತಿದ್ದರು. ಮೂಲತಃ ಸಕ್ಕರೆ ಗೊಲ್ಲಹಳ್ಳಿ ಸಮೀಪ ತಂಬೇನಹಳ್ಳಿ ಗ್ರಾಮದ ನಿವಾಸಿಯಾದ ಪುಟ್ಟರಾಜು ಅವರು ದೊಡ್ಡಬಳ್ಳಾಪುರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಟ್ಟರಾಜು ಅವರಿಗೆ ಇಬ್ಬರು ಮಕ್ಕಳಿದ್ದರು. ಪತ್ನಿ ಜಗದಾಂಬ ಅವರು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು.

ತಂದೆ-ಮಗನ‌ ಸಾವಿನ‌ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು‌ ಮುಟ್ಟಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಇನ್ಸ್ ಪೆಕ್ಟರ್ ಹರೀಶ್ ದೌಡಾಯಿಸಿ ಪರಿಶೀಲನೆ ನಡೆಸಿದರು. ಕತ್ತಲಾದ ಕಾರಣ ಮೃತದೇಹಗಳನ್ನು ಇಂದು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಹೊರತೆಗೆಯಲಿದ್ದಾರೆ.

ಚಿಕ್ಕಮಗಳೂರಲ್ಲಿ ವಿದ್ಯಾರ್ಥಿ ಆತ್ಮಹತ್ಯೆ: 9ನೇ ತರಗತಿ ವಿದ್ಯಾರ್ಥಿ ತಾನಿದ್ದ ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪಟ್ಟಣದ ಖಾಸಗಿ ಶಾಲೆಯ ಹಾಸ್ಟೆಲ್​ನಲ್ಲಿ ನಡೆದಿದೆ. 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶ್ರೀನಿವಾಸ್​​(15) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಸದ್ಯ ಬಾಲಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಂಗಳವಾರ ಊಟ ಮುಗಿಸಿ ಸ್ನೇಹಿತರೊಂದಿಗೆ ಮಲಗಿದ್ದ ಶ್ರೀನಿವಾಸ್ ಬುಧವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಶ್ರೀನಿವಾಸ್​ ಶಾಲಾ ಶಿಕ್ಷಕರು ಮತ್ತು ಸ್ನೇಹಿತರ ಮೆಚ್ಚಿಗೆಗೆ ಪಾತ್ರನಾಗಿದ್ದ.

ಮೃತ ವಿದ್ಯಾರ್ಥಿಯ ತಂದೆ ಸರ್ಕಾರಿ ನೌಕರರಾಗಿದ್ದು ಕೊಪ್ಪ ಪಟ್ಟಣದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ತಿಂಗಳು ಬಾಲಕನ ತಂದೆ ಕೊಪ್ಪದಿಂದ ಅಜ್ಜಂಪುರಕ್ಕೆ ವರ್ಗಾವಣೆಯಾಗಿತ್ತು. ಆದ್ದರಿಂದ ಶ್ರೀನಿವಾಸ್​ನನ್ನು ಹಾಸ್ಟೆಲ್​ಗೆ ಸೇರಿಸಿದ್ದರು. ಹಾಸ್ಟೆಲ್​ಗೆ ಸೇರಿ 1 ತಿಂಗಳಾಗಿತ್ತು. ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಆನೇಕಲ್: ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ, ಕೊಲೆ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.