ETV Bharat / state

ಕುಡಿಯುವ ನೀರಿಗಾಗಿ ಆಗ್ರಹಿಸಿ 3 ದಿನಗಳಿಂದ ಉಪವಾಸ ಕುಳಿತ ರೈತರು: ಸಚಿವರ ಭರವಸೆ ಮೇರೆಗೆ ಉಪವಾಸ ಅಂತ್ಯ

author img

By

Published : Jun 25, 2023, 7:26 PM IST

ಪ್ರತಿಭಟನಾ ನಿರತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್​ ಮುನಿಯಪ್ಪ ಅವರು ಭೇಟಿ ನೀಡಿದರು
ಪ್ರತಿಭಟನಾ ನಿರತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್​ ಮುನಿಯಪ್ಪ ಅವರು ಭೇಟಿ ನೀಡಿದರು

ಕುಡಿಯುವ ನೀರಿಗಾಗಿ ಆಗ್ರಹಿಸಿ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಸಚಿವ ಕೆ ಹೆಚ್​ ಮುನಿಯಪ್ಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ನಂತರ ಕುಡಿಯುವ ನೀರನ್ನು ಸರಬರಾಜು ಮಾಡುವ ಬಗ್ಗೆ ಭರವಸೆ ನೀಡಿದ ನಂತರ ಉಪವಾಸ ಅಂತ್ಯಗೊಳಿಸಲಾಗಿದೆ.

ಪ್ರತಿಭಟನಾ ನಿರತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್​ ಮುನಿಯಪ್ಪ ಅವರು ಭೇಟಿ ನೀಡಿದರು

ದೊಡ್ಡಬಳ್ಳಾಪುರ : ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ 3 ದಿನಗಳಿಂದ ರೈತರಿಬ್ಬರು ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹವನ್ನ ನಡೆಸುತ್ತಿದ್ದರು. ಉಪವಾಸ ನಿರತ ರೈತರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕುಡಿಯುವ ನೀರು ಸರಬರಾಜು ಮಾಡುವ ಭರವಸೆ ನೀಡಿದರು. ಸಚಿವರ ಭರವಸೆಯ ಮೇರೆಗೆ ರೈತರು ಉಪವಾಸ ಅಂತ್ಯಗೊಳಿಸಿದ್ದಾರೆ.

ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ವಿಷ ಹರಿಸಿದ ಪಟ್ಟಣ ಮತ್ತು ನಗರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹರಿದು ಹೋಗುವ ಅರ್ಕಾವತಿ ನದಿ ಪಾತ್ರದ ಕೆರೆಗಳು ಇಂದು ವಿಷವಾಗಿವೆ. ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರಾಸಾಯನಿಕ ನೀರು ಕೆರೆಗಳಿಗೆ ನೇರವಾಗಿ ಸೇರುತ್ತಿದೆ. ಅರ್ಕಾವತಿ ನದಿ ಪಾತ್ರದಲ್ಲಿನ ಪ್ರಮುಖ ಕೆರೆಯಾದ ದೊಡ್ಡ ತುಮಕೂರು ಮತ್ತು ಚಿಕ್ಕತುಮಕೂರು ಕೆರೆಯ ನೀರು ಬಳಸಲು ಯೋಗ್ಯವಾಗಿಲ್ಲದಷ್ಟು ವಿಷವಾಗಿದೆ.

ದೊಡ್ಡತುಮಕೂರಿನ ಬೋರ್​ವೆಲ್ ನೀರನ್ನು ಬಳಸುತ್ತಿರುವ ಜನರು ಈಗಾಗಲೇ ರೋಗಗಳಿಗೆ ತುತ್ತಾಗಿದ್ದಾರೆ. ದೊಡ್ಡಬಳ್ಳಾಪುರ ನಗರ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕೆಗಳಿಂದ ಬರುವ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿದ ನಂತರ ಕೆರೆಗಳಿಗೆ ಬಿಡುವಂತೆ ಒತ್ತಾಯಿಸಿ ಕಳೆದ 10 ವರ್ಷಗಳಿಂದ ಹೋರಾಟವನ್ನ ಗ್ರಾಮಸ್ಥರು ಮಾಡುತ್ತಿದ್ದಾರೆ.

ಕೆರೆಯ ಅಂಗಳದಲ್ಲಿ STP ಪ್ಲಾಂಟ್ ಮಾಡಿದ ದೊಡ್ಡಬಳ್ಳಾಪುರ ನಗರಸಭೆ: ದೊಡ್ಡಬಳ್ಳಾಪುರ ನಗರದಿಂದ ಒಳಚರಂಡಿಯ ಮೂಲಕ ಬರುವ ತ್ಯಾಜ್ಯದ ನೀರನ್ನು ಶುದ್ಧೀಕರಿಸಲು ಚಿಕ್ಕತುಮಕೂರು ಕೆರೆಯ ಅಂಗಳದಲ್ಲಿ STP ಪ್ಲಾಂಟ್ ಸ್ಥಾಪನೆ ಮಾಡಲಾಗಿದೆ. ಹಳೇ ಪದ್ದತಿಯಲ್ಲಿ ನಿರ್ಮಾಣ ಮಾಡಲಾಗಿರುವ STP ಪ್ಲಾಂಟ್​ನಿಂದ ನೀರು ಶುದ್ಧೀಕರಣವಾಗುತ್ತಿಲ್ಲ. ವಿಷಕಾರಿ ವಸ್ತುಗಳು ನೇರವಾಗಿ ಕೆರೆಯ ಒಡಲು ಸೇರುತ್ತಿವೆ. STP ಪ್ಲಾಂಟ್ ನ ಸಾಮರ್ಥ್ಯ ಇರೋದು 2 ಎಂಎಲ್​ಡಿ ನೀರನ್ನ ಶುದ್ಧೀಕರಿಸುವಷ್ಟು. ಆದರೆ STP ಪ್ಲಾಂಟ್ ಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ 16 MLD ಯಷ್ಟು. ಹೀಗಾಗಿ, ಈಗಿರುವ STP ಪ್ಲಾಂಟ್ ಗೆ ಒಂದು ದಿನದಲ್ಲಿ ಹರಿದು ಬರುವ ನೀರನ್ನ ಶುದ್ಧೀಕರಿಸಲು ಒಂದು ವಾರ ಸಮಯ ಬೇಕಾಗಿದೆ.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ನೇರವಾಗಿ ಕೆರೆಯ ಒಡಲಿಗೆ: ದೊಡ್ಡಬಳ್ಳಾಪುರ ನಗರದಿಂದ ಬರುವ ತ್ಯಾಜ್ಯದ ನೀರನ್ನು ಶುದ್ಧೀಕರಿಸಲು ಹಳೆಯ ಪದ್ಧತಿಯ STP ಪ್ಲಾಂಟ್ ಇದೆ. ಆದರೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಬರುವ ನೀರನ್ನು ಶುದ್ದೀಕರಿಸಲು ಯಾವುದೇ ಶುದ್ದೀಕರಣ ಘಟಕವೇ ಇಲ್ಲ. ವಿಷಯುಕ್ತ ನೀರು ನೇರವಾಗಿ ಚಿಕ್ಕತುಮಕೂರು ಕೆರೆಯನ್ನ ಸೇರುತ್ತಿದೆ. ಕೆರೆಯ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ನೀರಿನಲ್ಲಿ ಪ್ರಾಣಕ್ಕೆ ಕುತ್ತು ತರುವ ರಾಸಾಯನಿಕ ಅಂಶಗಳು ಪತ್ತೆಯಾಗಿದೆ. ವಿಷಯುಕ್ತ ನೀರು ಸೇವನೆ ಮಾಡಿದ ಜಲಚರಜೀವಿಗಳು ಮತ್ತು ಕುರಿ ಮೇಕೆಗಳು ಸಾವನ್ನಪ್ಪಿವೆ. ಸುತ್ತಮುತ್ತಲಿನ ಅಂತರ್ಜಲದ ನೀರು ಸಹ ವಿಷವಾಗಿದೆ. ಆರ್ ಓ ಫ್ಲಾಂಟ್ ಗಳಲ್ಲಿ ಶುದ್ಧೀಕರಿಸಿದ ನೀರಿನಲ್ಲಿ ಹಾನಿಕಾರಕ ಅಂಶಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಶುದ್ಧ ನೀರಿಗಾಗಿ ಆಗ್ರಹಿಸಿ ಉಪವಾಸಕ್ಕೆ ಕುಳಿತ ರೈತರು: ಗ್ರಾಮಗಳಿಗೆ ಶುದ್ಧ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಚಿಕ್ಕತುಮಕೂರಿನ ರಮೇಶ್ ಮತ್ತು ದೊಡ್ಡತುಮಕೂರಿನ ವಸಂತ್ ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಮುಂಭಾಗ ಉಪವಾಸಕ್ಕೆ ಕುಳಿತು, ಅವರಿಗೆ ಬೆಂಬಲ ಕೊಟ್ಟು ಗ್ರಾಮಸ್ಥರು ಸಹ ಉಪವಾಸ ಸತ್ಯಾಗ್ರಹಕ್ಕೆ ಜೊತೆಯಾದರು.

ಉಪವಾಸ ಸತ್ಯಾಗ್ರಹ 3 ನೇ ದಿನಕ್ಕೆ ಕಾಲಿಟ್ಟರೂ ಸ್ಥಳೀಯ ಶಾಸಕ ಧೀರಜ್ ಮುನಿರಾಜು ಆಗಲಿ, ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ರೈತರ ಸಮಸ್ಯೆಯನ್ನ ಆಲಿಸಲಿಲ್ಲ. 3 ನೇ ದಿನವೂ ಉಪವಾಸದಲ್ಲಿದ್ದ ವಸಂತ್ ಮತ್ತು ರಮೇಶ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದ ನಂತರ ಮತ್ತೆ ಅವರು ತಾಲೂಕು ಕಚೇರಿ ಬಳಿ ಬಂದು ಸತ್ಯಾಗ್ರಹ ಮುಂದುವರೆಸಿದ್ದರು.

ಸ್ಥಳಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ: ಶುದ್ಧ ನೀರಿಗಾಗಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಮಾಹಿತಿ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ ಇಂದು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರ ಸಮಸ್ಯೆ ಆಲಿಸಿದರು. ಒಂದು ತಿಂಗಳ ಅವಧಿಯಲ್ಲಿ ಶಾಶ್ವತ ಪರಿಹಾರ ನೀಡುವ ಭರವಸೆಯನ್ನ ನೀಡಿದರು. ನೀರಿನ ವಿಚಾರದಲ್ಲಿ ರಾಜಕೀಯ ಮಾಡದೆ ಪಕ್ಷಾತೀತವಾಗಿ ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಶಾಸಕರು ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತಾರೆ. ಅದಕ್ಕೆ ಬೇಕಾದ ಹಣಕಾಸನ್ನು ಸರ್ಕಾರ ನೀಡಲಿದೆ. ಜಿಲ್ಲಾಧಿಕಾರಿಗಳಿಗೆ ಈಗಿರುವ STP ಪ್ಲಾಂಟ್ ಗೆ ಭೇಟಿ ನೀಡಿ ವರದಿ ನೀಡುವಂತೆ ಹೇಳಲಾಗುವುದು. ವರದಿ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ನೀಡಲಾಗುವುದು ಎಂದರು.

ಸಚಿವರ ಕಾಲಿಗೆ ಬಿದ್ದು ಮನವಿ ಮಾಡಿದ ಉಪವಾಸನಿರತ ರೈತ: ಸಚಿವರ ಭರವಸೆಯ ಮೇರೆಗೆ ಉಪವಾಸನಿರತ ರಮೇಶ್ ಮತ್ತು ವಸಂತ್ ಸಚಿವರು ಕೊಟ್ಟ ಎಳನೀರನ್ನು ಸೇವಿಸುವ ಮೂಲಕ ಉಪವಾಸ ಅಂತ್ಯಗೊಳಿಸಿದರು. ವಸಂತ್ ಸಚಿವರ ಕಾಲಿಗೆ ಬಿದ್ದು ಶಾಶ್ವತ ಪರಿಹಾರ ಕೊಡುವಂತೆ ಮನವಿ ಮಾಡಿದರು. ಇದೇ ವೇಳೆ ವಸಂತ್ ಕಣ್ಣೀರು ಹಾಕುವ ಮೂಲಕ ತಮ್ಮ ಹೋರಾಟಕ್ಕೆ ಸಿಕ್ಕ ಜಯವನ್ನ ನೆನೆದರು.

ಇದನ್ನೂ ಓದಿ: ದಲಿತರು ಬಿಜೆಪಿ ಅಧ್ಯಕ್ಷರಾಗಬಾರದೇ..? ನಾನೂ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ: ಎಂಪಿ ರಮೇಶ ಜಿಗಜಿಣಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.