ಪತ್ನಿಗೆ ವರದಕ್ಷಿಣೆ ಕಿರುಕುಳ: ಜಗಳ ಬಿಡಿಸಲು ಬಂದ ಮಾವನಿಗೆ ಇರಿದು, ಬಾವನ ಕಾಲು ಮುರಿದ ಅಳಿಯ!

author img

By

Published : Jan 20, 2023, 1:04 PM IST

Injured family members

ವರದಕ್ಷಿಣೆ ವಿಚಾರವಾಗಿ ಅಳಿಯನೊಬ್ಬ ಕನ್ಯಾದಾನ ಮಾಡಿಕೊಟ್ಟ ಮಾವನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಲ್ಲದೇ, ಹಲವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಹೊಸಕೋಟೆ: ವರದಕ್ಷಿಣೆ ಕಿರುಕುಳ ಪ್ರಕರಣ

ಹೊಸಕೋಟೆ: ವರದಕ್ಷಿಣೆ ಕಿರುಕುಳ ಪ್ರಶ್ನಿಸಿದ್ದಕ್ಕೆ ಹೆಂಡತಿಯ ತವರು ಮನೆಯವರ ಮೇಲೆ ಅಳಿಯ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ದೊಡ್ಡನಲ್ಲಾಳ ಗ್ರಾಮದ ನಿವಾಸಿ ಮೋಹನ ಎಂಬಾತ ಕೋವಿಡ್ ಸಂದರ್ಭದಲ್ಲಿ ನೆರೆಯ ಆಂಧ್ರದ ನಿವಾಸಿ ಭವಾನಿ ಎಂಬಾಕೆಯನ್ನು ಮನೆಯವರ ಒಪ್ಪಿಗೆಯಂತೆ ಮದುವೆಯಾಗಿದ್ದ. ಭವಾನಿ ಮನೆಯವರು ಒಂದಷ್ಟು ಹಣ, ಆಭರಣಗಳನ್ನು ಕೊಟ್ಟು ಮದುವೆ ಮಾಡಿದ್ದರು.

ಆದರೆ ಮೋಹನ ದಿನ ಕಳೆದಂತೆ ವರದಕ್ಷಿಣೆ ನೆಪದಲ್ಲಿ ಪತ್ನಿಗೆ ದೌರ್ಜನ್ಯ ನೀಡಲು ಪ್ರಾರಂಭಿಸಿದ್ದಾನೆ. ಈ ವಿಷಯವನ್ನು ಭವಾನಿ ತನ್ನ ತವರು ಮನೆಯವರ ಜೊತೆ ಹೇಳಿದಾಗ, ಇದೆಲ್ಲ ಮಾಮೂಲಿ ಅಂತ ಕುಟುಂಬಸ್ಥರು ಸುಮ್ಮನಾಗಿದ್ದರಂತೆ. ಆದರೆ ಬುಧವಾರ ಅಣ್ಣ ಮಣಿ ತಂಗಿಯನ್ನೂ ಹಬ್ಬಕ್ಕೆ ಕರೆಯಬೇಕಲ್ಲ ಎಂದು ತಂಗಿಯ ಗಂಡನ ಮನೆಗೆ ತೆರಳಿದ್ದಾನೆ. ಈ ವೇಳೆ ತಂಗಿ ಗಂಡ ಮೋಹನ ವರದಕ್ಷಿಣೆ ವಿಚಾರಕ್ಕಾಗಿ ಕೋಪಗೊಂಡು ಮನೆಯ ಬಾಗಿಲು ಹಾಕಿ ಮಣಿಯ ಕಿವಿಗೆ ಕಚ್ಚಿ ಗಾಯಗೊಳಿಸಿದ್ದಾನೆ. ಇದೇ ಸಂದರ್ಭದಲ್ಲಿ ವರದಕ್ಷಿಣೆಯನ್ನೂ ಕೇಳಿದ್ದಾನೆ.

ನಂತರ ಮಾತಿಗೆ ಮಾತು ಬೆಳೆದು ಆರೋಪಿ ಮೋಹನ, ಮಣಿಗೆ ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಮಣಿ ತಕ್ಷಣವೇ ಮನೆಯವರಿಗೆ ಕರೆ ಮಾಡಿ ಕರೆಸಿದ್ದಾನೆ. ಬಳಿಕ ಆರೋಪಿ ತನ್ನ ಮನೆಗೆ ಬಂದಿದ್ದ ಪತ್ನಿಯ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಿದ್ದಾನೆ. ಇದರಿಂದ ಮೋಹನನ ಬಾವನ ಕಾಲು ಮುರಿದಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದಾಗಿ ಹಲ್ಲೆಗೆ ಒಳಗಾದವರು ಹೊಸಕೋಟೆ ಸರ್ಕಾರಿ ಆಸ್ವತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಆದರೆ ಇಷ್ಟಕೆ ಸುಮ್ಮನಿರದ ಮೋಹನ ಹಾಗು ಆತನ ಕುಟುಂಬದವರು ಆಸ್ವತ್ರೆಗೆ ಬಂದು ಹೆಂಡತಿಯ ಕುಟುಂಬಸ್ಥರ ಮೇಲೆ ಮತ್ತೆ ಹಲ್ಲೆ ಮಾಡಿದ್ದು ಜಗಳ ಬಿಡಿಸಲು ಬಂದ ಮಾವ ಜನಾರ್ಧನ್‌ ಅವರಿಗೆ ಚಾಕುವಿನಿಂದ ಇರಿದು ನಂತರ ಸ್ಥಳದಿಂದ ಪರಾರಿ ಆಗಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಮಹಿಳೆಯ ಕುಟುಂಬಸ್ಥರು ಹೊಸಕೋಟೆ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೋಹನ್ ಇತ್ತೀಚೆಗೆ ಬೇರೆಯವರ ಜೊತೆಯಲ್ಲಿ ಅನೈತಿಕ ಸಂಬಂಧ ಹೊಂದಿದ್ದು, ಪ್ರಶ್ನಿಸಿದ್ದಕ್ಕೆ ನಮ್ಮ ಹುಡುಗಿಗೆ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾನೆ ಅಂತ ಮಹಿಳೆಯ ಕುಟುಂಬಸ್ಥರು ದೂರಿದ್ದಾರೆ. ಬುಧವಾರ ನಡೆದ ಘಟನೆ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾವನ ಮೇಲೆ ಹಲ್ಲೆ ಮಾಡಿದ ಅಳಿಯ ಮೋಹನ್ ಹಾಗೂ ಕುಟುಂಬದ ಮೂವರನ್ನು ಬಂಧಿಸಲಾಗಿದೆ ಎಂದು ಹೊಸಕೋಟೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕೆಳಮನೆ ಮಹಿಳೆ, ಮೇಲ್ಮನೆ ವ್ಯಕ್ತಿ ನಾಪತ್ತೆ: ಅವರ ಗಂಡ, ಇವರ ಪತ್ನಿಯಿಂದ ಪ್ರತ್ಯೇಕ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.