ದೊಡ್ಡಬಳ್ಳಾಪುರ: ನಗರದ ಅರಣ್ಯ ಇಲಾಖೆ ಸಮೀಪ ಬುಧವಾರ ರಾತ್ರಿ ಅಂಗಡಿಗಳ ಬಾಗಿಲು ಮುರಿದು ಸರಣಿ ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಔಷಧಿ ಅಂಗಡಿ, ಕೃಷಿ ಪರಿಕರ ಹಾಗೂ ರಾಸಾಯನಿಕ ಮಾರಾಟ ಮಳಿಗೆ, ಖಾಸಗಿ ಕಚೇರಿ ಸೇರಿದಂತೆ ಹಲವಾರು ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಒಂದು ವಾರದಿಂದ ನಗರದಲ್ಲಿ ಮನೆ ಸೇರಿದಂತೆ ಅಂಗಡಿಗಳಲ್ಲಿ ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕೊರೊನಾ ಲಾಕ್ಡೌನ್ ನಂತರ ನಗರದಲ್ಲಿ ನೇಕಾರಿಕೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲೂ ಹಲವಾರು ಕಾರ್ಖಾನೆಗಳು ಬಂದ್ ಆಗಿದ್ದು, ಸಾವಿರಾರು ಜನ ಉದ್ಯೋಗ ಕಳೆದುಕೊಂಡಿರುವುದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗ್ತಿದೆ. ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.