ETV Bharat / state

ಅನಧಿಕೃತ ವಾಣಿಜ್ಯ ಮಳಿಗೆ‌: ಮಾಹಿತಿ ನೀಡದ ನಗರಸಭೆ ಪೌರಾಯುಕ್ತರಿಗೆ ₹25 ಸಾವಿರ ದಂಡ

author img

By

Published : Jan 13, 2023, 1:10 PM IST

ರಸ್ತೆ ಒತ್ತುವರಿ ಕುರಿತಾಗಿ ಸೂಕ್ತ ಮಾಹಿತಿ‌ ನೀಡದ ಕಾರಣ ಗೌರಿಬಿದನೂರು ನಗರಸಭೆ ಪೌರಾಯುಕ್ತರಿಗೆ ರಾಜ್ಯ ಮಾಹಿತಿ ಆಯೋಗ ದಂಡ ಹಾಕಿದೆ.

25,000 fine to Municipal Commissioner
ನಗರಸಭೆ ಪೌರಾಯುಕ್ತನಿಗೆ 25 ಸಾವಿರ ದಂಡ

ದೊಡ್ಡಬಳ್ಳಾಪುರ: ರಸ್ತೆ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ವಾಣಿಜ್ಯ ಮಳಿಗೆ‌ ನಿರ್ಮಿಸಿರುವ ಕುರಿತು‌ ಸಮರ್ಪಕ ಮಾಹಿತಿ‌ ನೀಡುವಲ್ಲಿ ವಿಫಲರಾದ ನಗರಸಭೆಯ ಈ ಹಿಂದಿನ ಸಹಾಯಕ‌ ಕಾರ್ಯ‌ನಿರ್ವಾಹಕ‌ ಎಂಜಿನಿಯರ್ ಶೇಖ್ ಫಿರೋಜ್ ಅವರಿಗೆ ರಾಜ್ಯ ಮಾಹಿತಿ ಆಯೋಗ 25 ಸಾವಿರ ರೂಪಾಯಿ ದಂಡ ಹಾಕಿದೆ. ಕಾರ್ಯನಿರತ ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಗಂಗರಾಜ ಶಿರವಾರ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಮಾಹಿತಿ ಕೇಳಿದ್ದು, ತೋಟಗಾರಿಕೆ ಇಲಾಖೆ ಸಮೀಪವಿರುವ ಸ್ಮಶಾನ ಪಕ್ಕದ ಸರ್ಕಾರಿ ರಸ್ತೆ ಒತ್ತುವರಿ ಮಾಡಿ, ನಿರ್ಮಿಸಿರುವ ಅನಧಿಕೃತ ಕಟ್ಟಡದ ಕುರಿತು‌ ಮಾಹಿತಿ ಕೇಳಿದ್ದರು. ಆದರೆ ನಗರಸಭೆಯ ಅಂದಿನ ಎಇಇ‌ ಶೇಖ್ ಫಿರೋಜ್ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ಗಂಗರಾಜು ಶಿರವಾರ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯುಕ್ತ ಎಚ್.ಸಿ.ಸತ್ಯನ್, ಮೂವತ್ತು ದಿನಗಳೊಳಗೆ ದೃಢೀಕೃತ ಮಾಹಿತಿ ಒದಗಿಸುವಂತೆ 2022 ಸೆ.27 ರಂದು ಆದೇಶಿಸಿದ್ದರು. ಆದರೂ ಮಾಹಿತಿ ನೀಡದೇ ಆಯೋಗದ ಆದೇಶ ಉಲ್ಲಂಘಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಎಇಇ‌ ಶೇಖ್ ಫಿರೋಜ್ ಅವರಿಗೆ 25 ಸಾವಿರ ರೂಪಾಯಿ ದಂಡ ಕಟ್ಟುವಂತೆ ಸೂಚಿಸಿದೆ.

ದಂಡದ ಹಣವನ್ನು ಅಧಿಕಾರಿಯ ಸಂಬಳದಿಂದಲೇ ಪಾವತಿಸಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದ್ದಾರೆ. ದೊಡ್ಡಬಳ್ಳಾಪುರ‌ ನಗರಸಭೆ ಎಇಇ ಆಗಿದ್ದ ಶೇಖ್‌ಫಿರೋಜ್ ಅವರು ಪ್ರಸ್ತುತ ಗೌರಿಬಿದನೂರು ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನಧಿಕೃತ ಕಟ್ಟಡದ ಕುರಿತು ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಅಲ್ಲದೇ ಕಟ್ಟಡವು ಅನಧಿಕೃತ ಎಂಬುದು ಸಾಬೀತಾದರೆ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ವರದಿ ನೀಡುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ‌ ಮಾಹಿತಿ ಆಯೋಗ ಸೂಚನೆ ನೀಡಿದೆ.

ತಾಲೂಕು ಅಧ್ಯಕ್ಷ ಗಂಗರಾಜ ಶಿರವಾರ ನೀಡಿದ್ದ ದೂರಿನ ಅನ್ವಯ ರಾಜ್ಯ ಮಾಹಿತಿ ಆಯೋಗವು, ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 6(1) ರ ಅನ್ವಯದಲ್ಲಿ ದಿನಾಂಕ 16.10.2021 ರಂದು ಮಾಹಿತಿ ಕೋರಿ, ‘ ದಿನಾಂಕ 27.07.2021 ರಂದು ದೊಡ್ಡಬಳ್ಳಾಪುರ ನಗರ ಸಭೆ ವ್ಯಾಪ್ತಿಯ ಡಾ.ಬಿ.ಆರ್​.ಅಂಬೆಡ್ಕರ್​ ರಸ್ತೆ, ತೋಟಗಾರಿಕೆ ಇಲಾಖೆಯ ಪಕ್ಕದ ಸ್ಮಶಾನದ ಉತ್ತರ ದಿಕ್ಕಿಗೆ ಇರುವ ಜಾಗದಲ್ಲಿ ರಸ್ತೆ ಒತ್ತುವರಿ ಮಾಡಿ ಪುರಸಭೆ ಕಾಯ್ದೆಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ವಾಣಿಜ್ಯ ಕಟ್ಟಡ ಕಟ್ಟುತ್ತಿರುವ ಬಗ್ಗೆ ದೂರು ನೀಡಿದ್ದರು.

ಈವರೆಗೆ ಕಾಲಕಾಲಕ್ಕೆ ತೆಗೆದುಕೊಂಡ ಕಾನೂನು ಕ್ರಮಗಳ ವಿವರ ಅಥವಾ ನಕಲು ಪ್ರತಿಗಳು ಮತ್ತು ಸದರಿ ಮೇಲ್ಕಂಡ ದೂರಿನ ಬಗ್ಗೆ ತೆಗದುಕೊಂಡ ಕಾನೂನು ಕ್ರಮಗಳ ವಿವರ ಅಥವಾ ಹಿಂಬರಹ ನೀಡಲು ಕೋರಿದೆ ಎಂದು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಶೇಖ್ ಫಿರೋಜ್ ಮಾಹಿತಿ ನೀಡದೇ ಆಯೋಗದ ಆದೇಶ ಉಲ್ಲಂಘಿಸಿದ ಕಾರಣ, ಪ್ರಕರಣವನ್ನು ಅವಲೋಕಿಸಿ ಇಷ್ಟು ಸಮಯ ಕಳೆದ ನಂತರ ಶೇಖ್ ಫಿರೋಜ್ ಅವರಿಗೆ ರಾಜ್ಯ ಮಾಹಿತಿ ಆಯೋಗ ದಂಡ ಹಾಕಿದೆ.

ಇದನ್ನೂ ಓದಿ: ₹500 ಕೋಟಿ ವಂಚನೆ ಪ್ರಕರಣ: ಕರಣ್‌ ಗ್ರೂಪ್ ಬಿಲ್ಡರ್ಸ್‌ & ಡೆವಲಪರ್ಸ್‌ ಮುಖ್ಯಸ್ಥರ ಬಂಧಿಸಿದ ಇಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.