ಬಾಗಲಕೋಟೆ: ಕೊಳವೆ ಬಾವಿ ದುರಸ್ತಿ ವೇಳೆ ಕಬ್ಬಿಣದ ಪೈಪ್ ಅನ್ನು ಕೊಳವೆ ಬಾವಿಯಿಂದ ಮೇಲಕ್ಕೆತ್ತಿ ಕೆಳಗೆ ಬಿಡುವ ಸಂದರ್ಭ ಬಾಲಕನೋರ್ವನ ಮುಖಕ್ಕೆ ಪೈಪ್ ಬಡಿದು ಸಾವನ್ನಪ್ಪಿದ್ದಾನೆ.
ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಗಣೇಶ ರವಿ ಜಂಗಳಿ (13) ಮೃತ ಬಾಲಕ. ಚಿಮ್ಮಡ ಗ್ರಾಮದಲ್ಲಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗುವ ವೇಳೆ ಘಟನೆ ಜರುಗಿದೆ. ಬಳಗಾರ ಎಂಬುವರ ಜಮೀನಿನ ಬಳಿ ಕೊಳವೆ ಬಾವಿಯ ದುರಸ್ತಿ ವೇಳೆ ಬಾಲಕನ ಮುಖಕ್ಕೆ ಕಬ್ಬಿಣದ ಪೈಪ್ ಬಡಿದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಇಂದು ಅಸುನೀಗಿದ್ದಾನೆ.
ಈ ಕುರಿತು ಜಂಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಬಿಸನಾಳ ಗ್ರಾಮದ ಹನಮಂತ ಮಹಾದೇವ ರಾಮೋಜಿ, ಬೆಳಗಾವಿ ಜಿಲ್ಲೆಯ ಶಿರಹಟ್ಟಿ ಗ್ರಾಮದ ಮುತ್ತಪ್ಪ ಕಲ್ಲಪ್ಪ ಜಾಡರ್ ಮತ್ತು ರಾಕೇಶ ಮಹಾದೇವ ಬೋರಗಲ್ಲಿ ಈ ಮೂವರನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.