ಬಾಗಲಕೋಟೆ: ಶಾಲೆಗಳಲ್ಲಿ ಶಿಕ್ಷಕರು ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಇರುತ್ತಾರೆ. ಆದರೆ ರಬಕವಿ ಬನಹಟ್ಟಿಯಲ್ಲಿರುವ ಶಿಕ್ಷಕ ದಂಪತಿ ಮಾತ್ರ ಮಕ್ಕಳಿಗೆ ಆಟ-ಪಾಠದ ಜೊತೆಗೆ ಶಾಲೆಯಲ್ಲಿ ಸಮೃದ್ಧವಾದ ಉದ್ಯಾನವನ್ನು ರೂಪಿಸಿ ಪರಿಸರದ ಬಗ್ಗೆ ಕಾಳಜಿ ಮೂಡಿಸುತ್ತಿದ್ದಾರೆ.
ರಬಕವಿ ಬನಹಟ್ಟಿ ತಾಲೂಕಿನ ಜಗದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಮೇಶ ಹೂಗಾರ ಹಾಗೂ ಮಂಜುಳಾ ಹೂಗಾರ ಎಂಬ ದಂಪತಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಶಾಲೆಯಲ್ಲಿ ಒಂದು ಉದ್ಯಾನವನ್ನು ರೂಪಿಸಿದ್ದು, ಅದರಲ್ಲಿ ಸೀಬೆಹಣ್ಣು, ರಾಮಫಲ, ಸಪೋಟ ಸೇರಿದಂತೆ ಇತರ ಹಣ್ಣು ಹಂಪಲ ಸಸಿಗಳನ್ನು ಹಾಗೂ ಆದಾಯವಾದ ಸಾಗುವಾನಿ ಮರಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ.
ಈ ದಂಪತಿ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಉದ್ಯಾನವನ್ನು ಬೆಳೆಸಲು ಸಹಾಯಕವಾಗಿದೆ. ಕೊರೊನಾ, ಲಾಕ್ಡೌನ್ ಸಮಯದಲ್ಲಿ ಶಾಲೆಗೆ ಪ್ರತಿನಿತ್ಯ ಆಗಮಿಸಿ ವಿವಿಧ ಅಲಂಕಾರಿಕ ಮತ್ತು ಹಣ್ಣಿನ ಸಸಿಗಳು, ಆರ್ಥಿಕವಾಗಿ ಲಾಭ ತರುವ ಸಸಿಗಳಿಗೆ ನೀರು, ಗೊಬ್ಬರ ಹಾಕಿ ಸಂರಕ್ಷಣೆ ಮಾಡಿದ್ದಾರೆ.
ದಂಪತಿಯ ಪರಿಸರ ಕಾಳಜಿಯನ್ನು ಕಂಡು ಗ್ರಾಮಸ್ಥರು, ಮಕ್ಕಳು ವಿವಿಧ ಸಸಿಗಳನ್ನು ತಂದುಕೊಡುತ್ತಿದ್ದಾರೆ. ತಂದುಕೊಟ್ಟ ಸಸಿಗಳನ್ನು ಬೆಳೆಸುವ ಜೊತೆಗೆ ಮಕ್ಕಳಿಗೆ ಪಾಠದ ಜೊತೆಗೆ ಪರಿಸರ ಪ್ರೇಮ ಬೆಳೆಯುವಂತೆ ಮಾಡುತ್ತಿದ್ದಾರೆ. ಇದೀಗ ಶಾಲೆಯ ಆವರಣ ಹಚ್ಚು ಹಸಿರಿನಿಂದ ಕಂಗೊಳಿಸುತ್ತಿದೆ.
ಇತರ ಶಿಕ್ಷಕರ ಸಹಕಾರ ಮತ್ತು ಮಕ್ಕಳ ಉತ್ಸಾಹ ಹಾಗೂ ಈ ದಂಪತಿ ಹಂಬಲದಿಂದ ಇಡೀ ಶಾಲೆ ಈಗ ನಂದನವನ ಆಗಿದೆ. ಶಾಲೆಗೆ ಪರಿಸರದಿಂದ ಆರ್ಥಿಕವಾಗಿ ಲಾಭದಾಯಕ ಆಗಬೇಕು ಎಂಬ ಉದ್ದೇಶದಿಂದ ಶಾಲೆಯನ್ನು ಬೃಂದಾವನ ಮಾಡುವ ಮೂಲಕ ಈ ಶಿಕ್ಷಕ ದಂಪತಿ ಇತರ ಶಿಕ್ಷಕರಿಗೆ ಮಾದರಿ ಆಗಿದ್ದಾರೆ.
ಓದಿ: ಗಣೇಶ ಉತ್ಸವ ಸಮಿತಿ ಪ್ರತಿಭಟನೆಗೆ ಮಣಿದ ಬಿಬಿಎಂಪಿ: ನಿಯಮಗಳಲ್ಲಿ ಸಡಿಲಿಕೆ