ETV Bharat / state

ಪಿಎಸ್​ಐ ಅಕ್ರಮದಲ್ಲಿ ಕಾನ್​ಸ್ಟೇಬಲ್​ನಿಂದ ಹಿಡಿದು ಡಿವೈಎಸ್​ಪಿಯವರೆಗೆ ಒಳಗೆ ಹಾಕಿದ್ದೇವೆ: ಸಚಿವ ಕಾರಜೋಳ

author img

By

Published : May 6, 2022, 4:39 PM IST

ಇತ್ತೀಚಿನ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಮುಖಭಂಗವಾಗಿದೆ. ಇದರಿಂದ ಹತಾಶರಾಗಿ ಕಾಂಗ್ರೆಸ್​ನವರು ಹುಚ್ಚು ಹಿಡಿದವರಂತೆ ಅಡ್ಡಾಡುತ್ತಿದ್ದಾರೆ ಎಂದು ಕಾರಜೋಳ ವ್ಯಂಗ್ಯವಾಡಿದರು.

minister govind karajola
ಜಲ ಸಂಪನ್ಮೂಲ ಸಚಿವ ಗೋವಿಂದ್​ ಕಾರಜೋಳ

ಬಾಗಲಕೋಟೆ: ಜೈಲಿಗೆ ಹೋಗಿ ಬಂದ ಕಾಂಗ್ರೆಸ್​ನವರಿಂದ ಬಿಜೆಪಿಗೆ ನೈತಿಕ ಪಾಠ ಬೇಕಿಲ್ಲ. ಪಿಎಸ್ಐ ಅಕ್ರಮ ನೇಮಕಾತಿ ಹಗರಣವು ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ್​ ಕಾರಜೋಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್​ಐ ಅಕ್ರಮದಲ್ಲಿ ಕಾನ್​ಸ್ಟೇಬಲ್​ನಿಂದ ಹಿಡಿದು ಡಿವೈಎಸ್​ಪಿಯವರೆಗೆ ಒಳಗೆ ಹಾಕುವ ಕೆಲಸ ಮಾಡಿದ್ದೇವೆ. ಸಿಎಂ ನೇತೃತ್ವದ ಸರ್ಕಾರ ನಿಷ್ಪಕ್ಷಪಾತ ತನಿಖೆ ಮಾಡುತ್ತಿದೆ. ಇದನ್ನು ಸ್ವಾಗತಿಸುವುದು ಬಿಟ್ಟು ಕಾಂಗ್ರೆಸ್ ಭಂಡತನದಿಂದ ಆರೋಪ ಮಾಡುತ್ತಿದೆ ಎಂದರು.

ಜಲ ಸಂಪನ್ಮೂಲ ಸಚಿವ ಗೋವಿಂದ್​ ಕಾರಜೋಳ

ಈ ಹಿಂದೆ ಪ್ರಶ್ನೆ ಪತ್ರಿಕೆ ಹಗರಣದಲ್ಲಿ ಕಾಂಗ್ರೆಸ್​ನಲ್ಲಿ ಯಾರೂ ರಾಜೀನಾಮೆ ಕೊಡಲಿಲ್ಲ. ಆಗ 8 ಲಕ್ಷ ಜನ ಮಕ್ಕಳು ಅತಂತ್ರರಾದರು. ಅಂದು ಯಾವ ಸಚಿವ ರಾಜೀನಾಮೆ ನೀಡಲಿಲ್ಲ. ಕರ್ನಾಟಕ ವಿವಿ, ತೋಟಗಾರಿಕೆ ವಿವಿಯಲ್ಲಿ ಹಗರಣಗಳಾದಾಗ ಕಾಂಗ್ರೆಸ್​ನವರು ಯಾವ ತನಿಖೆ ಮಾಡಲಿಲ್ಲ. ಆರೋಪಿಗಳಿಗೆ ಶಿಕ್ಷೆ ಆಗಲಿಲ್ಲ. ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ತನಿಖೆ ಮಾಡಲಿಲ್ಲ. ಅಂದಿನ ಮಂತ್ರಿ ಕೆ.ಜೆ ಜಾರ್ಜ್​ ಮೇಲೆ ಯಾವ ಕ್ರಮ?. ಹೀಗಾಗಿ ಕಾಂಗ್ರೆಸ್ ಆರೋಪಕ್ಕೆ ನೈತಿಕತೆ ಇಲ್ಲ ಎಂದು ಟೀಕಿಸಿದರು.

ಹುಚ್ಚು ಹಿಡಿದವರಂತೆ ಅಡ್ಡಾಡುತ್ತಿದ್ದಾರೆ: ಈ ಪ್ರಕರಣದಲ್ಲಿ ಕಾಂಗ್ರೆಸ್ ತನಗೆ ಲಾಭವಾಗುತ್ತೆ ಅನ್ನುವ ಭ್ರಮೆಯಿಂದ ಹೊರಗೆ ಬರಬೇಕು. ಕೀಳು ಮಟ್ಟದ ರಾಜಕಾರಣದಿಂದ ಯಾವುದೇ ಲಾಭ ಇಲ್ಲ. ಇತ್ತೀಚಿನ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಮುಖಭಂಗವಾಗಿದೆ. ಇದರಿಂದ ಹತಾಶರಾಗಿ ಕಾಂಗ್ರೆಸ್​ನವರು ಹುಚ್ಚು ಹಿಡಿದವರಂತೆ ಅಡ್ಡಾಡುತ್ತಿದ್ದಾರೆ ಎಂದು ಕಾರಜೋಳ ವ್ಯಂಗ್ಯವಾಡಿದರು.

ಇದೇ ವೇಳೆ, ಸಿಎಂ ಆಗಲು ಕೋಟಿ - ಕೋಟಿ ಹಣ ಕೊಡಬೇಕು ಎಂಬ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಚಹಾ ಮಾರುವ ಒಬ್ಬ ವ್ಯಕ್ತಿ ಈ ದೇಶದ ಪ್ರಧಾನಿಯಾದರು. ಈ ವ್ಯವಸ್ಥೆ ಕಾಂಗ್ರೆಸ್​ನಲ್ಲಿ ಇದೆಯಾ?. ಒಬ್ಬ ಸಾಮಾನ್ಯ ಮನುಷ್ಯ ಸಿಎಂ ಆಗೋದು ನಮ್ಮಲ್ಲೇ. ಯಾರೋ ಆರೋಪ ಮಾಡಿ ಬಿಟ್ರೆ ನಮಗೆ ಗೊತ್ತಿಲ್ಲ ಎಂದು ಜಾರಿಕೊಂಡರು.

ಸದುದ್ದೇಶವೋ, ದುರುದ್ದೇಶವೋ?: ಸಂಸದ ರಮೇಶ ಜಿಗಜಿಣಗಿ ಅವರು ಕಾರಜೋಳ ಸಿಎಂ ಆಗಬೇಕು ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇದನ್ನು ಬಿಡಿ. ಇಲ್ಲವೇ ಅವರನ್ನೇ ಕೇಳಿ. ಅವರು ಯಾಕೆ ಹೇಳಿದರು?. ಏನು ಹೇಳಿದರು ಅಂತ ಅವರನ್ನೇ ಕೇಳಿ. ಅವರು ಹೇಳಿದ್ದು ಸದುದ್ದೇಶವೋ, ದುರುದ್ದೇಶವೋ...ಆ ವಿಚಾರದಲ್ಲಿ ಅವರನ್ನೇ ಕೇಳಿ ಎಂದು ಕಾರಜೋಳ ಹೇಳಿದರು.

ಇದನ್ನೂ ಓದಿ: 'ನಿಮ್ಮನ್ನು ಸಿಎಂ ಮಾಡ್ತೀವಿ, 2,500 ಕೋಟಿ ರೆಡಿ ಮಾಡಿಡಿ ಅಂದಿದ್ರು': ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.