ETV Bharat / state

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ-ಪ್ರವಾಹ; 850 ಕೋಟಿ ರೂ. ಆಸ್ತಿ-ಪಾಸ್ತಿ ಹಾನಿ

author img

By

Published : Aug 26, 2020, 5:51 PM IST

ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ವರ್ಷ ಪ್ರವಾಹ ಬಂದು ಎಲ್ಲವನ್ನೂ ಕಳೆದುಕೊಂಡಿದ್ದ ಜನ ಬದುಕು ಕಟ್ಟಿಕೊಳ್ಳುವ ಮೊದಲೇ ಈ ಬಾರಿ ಮತ್ತೆ ಪ್ರವಾಹ ಬಂದು ಎಲ್ಲವನ್ನು ಮುಳುಗಿಸಿದೆ. ಇದರಿಂದ ಜನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾದ ಒಟ್ಟು ನಷ್ಟವೆಷ್ಟು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Bagalkot Flood  Loss
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದಿಂದ ನಷ್ಟ

ಬಾಗಲಕೋಟೆ : ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 31 ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಮೂರು ನದಿಗಳ ಪ್ರವಾಹಕ್ಕೆ 218 ಗ್ರಾಮಗಳಲ್ಲಿ ನಷ್ಟ ಉಂಟಾಗಿದೆ. ಒಟ್ಟು 270 ಕುಟುಂಬಗಳನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದೆ, 270 ಕುಟುಂಬಗಳಿಗೆ ತಲಾ ಹತ್ತು ಸಾವಿರ ಪರಿಹಾರ ಧನ ನೀಡಲಾಗಿದೆ.

ಪ್ರವಾಹ ಹಾಗೂ ಮಳೆಯಿಂದಾಗಿ 22,473 ಹೆಕ್ಟೇರ್​ ಕೃಷಿ ಬೆಳೆ,12,388 ಹೆಕ್ಟೇರ್​ ತೋಟಗಾರಿಕೆ ಬೆಳೆ, 8.4 ಹೆಕ್ಟೇರ್​​ ರೇಷ್ಮೆ ಬೆಳೆ ಸೇರಿ ಒಟ್ಟು 34,869.40 ಹೆಕ್ಟೇರ್​ ಬೆಳೆ ಹಾನಿಯಾಗಿದೆ. ಪ್ರವಾಹದಿಂದ 105 ಮನೆಗಳು ಪೂರ್ಣ ಪ್ರಮಾಣದಲ್ಲಿ, 26 ಮನೆಗಳು ತೀವ್ರ ಪ್ರಮಾಣದಲ್ಲಿ ಮತ್ತು 338 ಮನೆಗಳು ಭಾಗಶಃ ಸೇರಿ ಒಟ್ಟು 469 ಮನೆಗಳಿಗೆ ಹಾನಿಯಾಗಿದೆ. ಒಟ್ಟು 999.63 ಕಿ.ಮೀ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಅಂದಾಜು 245 ಕೋಟಿ ನಷ್ಟ ಉಂಟಾಗಿದೆ. ಗ್ರಾಮೀಣ‌ ಕುಡಿಯುವ ನೀರಿನ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 91.03 ಕೋಟಿ ರೂ. ಹಾನಿ ಉಂಟಾಗಿದೆ. ಒಟ್ಟು 32 ಗ್ರಾಮೀಣ ಸೇತುವೆಗಳು ಹಾನಿಯಾಗಿದ್ದು, 13.3 ಕೋಟಿ ರೂ.‌ ನಷ್ಟ ಉಂಟಾಗಿದೆ. ಒಟ್ಟು 94.00 ಕಿ.ಮೀ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ, 308.00 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ ಹಾಗೂ 54 ಸೇತುವೆಗಳಿಗೆ ಹಾನಿಯಾಗಿದೆ, ಇದರಿಂದ 37 ಕೋಟಿ ನಷ್ಟವಾಗಿದೆ.

ಕೃಷಿ ಜಮೀನು ಜಲಾವೃತವಾದ ದೃಶ್ಯ ( ಕಡತ ದೃಶ್ಯ)

ಪ್ರವಾಹ ಹಾಗೂ ಮಳೆಯಿಂದಾಗಿ 127 ಶಾಲಾ ಕೊಠಡಿಗಳು 30 ಅಂಗನವಾಡಿ, 2 ಸಮುದಾಯ ಭವನ ಸೇರಿ ಒಟ್ಟು 4.8 ಕೋಟಿಯಷ್ಟು ಹಾನಿಯಾಗಿದೆ. ಸಣ್ಣ ನೀರಾವರಿ ಇಲಾಖೆಯ 43 ಬಾಂದಾರಗಳು ಮತ್ತು 28 ಕೆರೆ ಏರಿಗಳು ಒಡೆದು 31.8 ಕೋಟಿ ನಷ್ಟ ಉಂಟಾಗಿದೆ. ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳ ರಸ್ತೆ ಹಾಗೂ ಇತರೆ ಮೂಲಭೂತ ಸೌಕರ್ಯ ಹಾನಿಯಾಗಿದ್ದು, ಇದರಿಂದ 25 ಕೋಟಿ ನಷ್ಟ ಉಂಟಾಗಿದೆ. ಜಿಲ್ಲೆಯಾದ್ಯಂತ 1,851 ವಿದ್ಯುತ್ ಕಂಬಗಳು 471 ಟಿಸಿಗಳು 69.6 ಕಿ.ಮೀ ವಿದ್ಯುತ್​ ಲೈನ್ ಹಾನಿಯಾಗಿದೆ. ಇದರಿಂದ 7.35 ಕೋಟಿ ನಷ್ಟವಾಗಿದೆ. ಎಲ್ಲಾ ಹಾನಿಗಳು ಸೇರಿ ಜಿಲ್ಲೆಯಲ್ಲಿ ಪ್ರವಾಹ ಹಾಗೂ ಮಳೆಯಿಂದಾಗಿ ಒಟ್ಟು 850 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕಳೆದ ವರ್ಷದ ಪ್ರವಾಹದಿಂದ ಸಂತ್ರಸ್ತರಾಗಿರುವವರಿಗೆ ಸಮರ್ಪಕವಾಗಿ ಪರಿಹಾರ ಧನ‌ ಸೇರಿದಂತೆ ಇತರ ಸೌಕರ್ಯಗಳನ್ನು ಸರ್ಕಾರ ಇದುವರೆಗೆ ಒದಗಿಸಿಲ್ಲ. ಈಗ ಮತ್ತೆ ಪ್ರವಾಹದಿಂದ‌ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಶೀಘ್ರದಲ್ಲೇ ಪರಿಹಾರ ವಿತರಿಸುವ ಕಾರ್ಯ ಮಾಡಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.