ETV Bharat / sports

Women's reservation bill: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪಾಸ್.. ಕ್ರೀಡಾ ಸಾಧಕಿಯರಿಂದ ಬಹುಪರಾಕ್​​

author img

By ETV Bharat Karnataka Team

Published : Sep 20, 2023, 10:41 PM IST

ಅಂಜು ಬಾಬಿ ಜಾರ್ಜ್, ಮಿಥಾಲಿ ರಾಜ್, ದೀಪಾ ಮಲಿಕ್, ರಾಣಿ ರಾಂಪಾಲ್ ಮತ್ತು ಮೇರಿ ಕೋಮ್ ಅವರು ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಆಗಿದ್ದನ್ನು ಸ್ವಾಗತಿಸಿದ್ದಾರೆ.

Anju Bobby George, Deepa Malik,  Mary Kom, Mithali Raj
ಕ್ರೀಡಾ ಸಾಧಕಿಯರಿಂದ ಬಹುಪರಾಕ್​​

ನವದೆಹಲಿ: ಭಾರತದ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರು ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ "ದೇಶದಲ್ಲಿ ಹೊಸ ಕ್ರಾಂತಿ ಸಂಭವಿಸಲಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿನ್ನೆ ನೂತನ ಸಂಸತ್​ ಭವನಕ್ಕೆ ಪ್ರವೇಶ ಪಡೆದ ನಂತರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಯಿತು.

ಸಂಸತ್ತಿನ ವಿಶೇಷ ಅಧಿವೇಶನದ ಮೂರನೇ ದಿನ ಇಂದು (ಬುಧವಾರ) ಬೆಳಗ್ಗೆ 11 ಗಂಟೆಗೆ ಆರಂಭವಾಯಿತು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಹಿಳಾ ಮೀಸಲಾತಿ ಮಸೂದೆ ಮತ್ತು ತಿದ್ದುಪಡಿಗಳನ್ನು ಮಂಡಿಸಿದರು. ವಿಧೇಯಕದ ಮೇಲೆ ವಿಸ್ತೃತ ಚರ್ಚೆ ನಡೆದು 454 ಸದಸ್ಯರು ಮಸೂದೆಯ ಪರವಾಗಿದ್ದರೆ, ಇಬ್ಬರು ಮಾತ್ರ ವಿರುದ್ಧವಾಗಿ ಮತ ಹಾಕಿದ್ದಾರೆ. ಆಡಳಿತ ಮತ್ತು ವಿಪಕ್ಷಗಳೆಲ್ಲವೂ ಮೊದಲೇ ಮಸೂದೆಗೆ ಬೆಂಬಲ ನೀಡಿದ್ದ ಕಾರಣ ಯಾವುದೇ ಪ್ರತಿರೋಧವಿಲ್ಲದೇ ವಿಧೇಯಕವು ಅಂಗೀಕಾರ ಪಡೆದುಕೊಂಡಿತು.

"ನನಗೆ ಹೊಸ ಸಂಸತ್ತಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಮಹತ್ವದ ದಿನವಾಗಿದೆ. ಸಚಿವಾಲಯ ಮತ್ತು ನಮ್ಮ ಪ್ರಧಾನ ಮಂತ್ರಿಗೆ ನನ್ನ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ. ಭಾರತದಲ್ಲಿ ಹೊಸ ಕ್ರಾಂತಿ ಸಂಭವಿಸಲಿದೆ" ಎಂದು ಜಾರ್ಜ್ ತಿಳಿಸಿದರು.

"ಮಹಿಳಾ ಮೀಸಲಾತಿ ಮಸೂದೆಗೆ ನಾನು ನಮ್ಮ ಪ್ರಧಾನ ಮಂತ್ರಿ ಮತ್ತು ನಮ್ಮ ಸರ್ಕಾರವನ್ನು ಅಭಿನಂದಿಸುತ್ತೇನೆ. ಶೇಕಡಾ 33 ಮೀಸಲಾತಿಯೊಂದಿಗೆ, ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತದೆ. ಇದು ಒಂದು ದೊಡ್ಡ ಕ್ರಮವಾಗಿದೆ. ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ,"ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.

ಹೊಸ ಕಟ್ಟಡದಲ್ಲಿ ನನ್ನ ವ್ಹೀಲ್‌ಚೇರ್ ತಲುಪದ ಸ್ಥಳವಿಲ್ಲ ಎಂದು ನಾನು ಮೊದಲು ಗಮನಿಸಿದ್ದೇನೆ. ಮಹಿಳಾ ಮೀಸಲಾತಿ ಜಾರಿಯಾಗುತ್ತಿರುವುದು ಸಂತಸ ತಂದಿದೆ. ಗಣೇಶ ಚತುರ್ಥಿಯಂದು ಇದೊಂದು ಸುಂದರ ಕೊಡುಗೆ. ನಮ್ಮ ಪ್ರಜಾಪ್ರಭುತ್ವವು ಜನರಿಗಾಗಿ, ಜನರಿಂದ ಮತ್ತು ಜನರಿಗೋಸ್ಕರ ಆಗಿದೆ, ಮಹಿಳೆಯರ ಸಹಭಾಗಿತ್ವವಿದ್ದಲ್ಲಿ ಮಾತ್ರ ಜನರ ಎಣಿಕೆ ಪೂರ್ಣಗೊಳ್ಳಲಿದೆ ಎಂದು ದೀಪಾ ಮಲಿಕ್ ಹೇಳಿದ್ದಾರೆ.

ಮಾಜಿ ರಾಜ್ಯಸಭಾ ಸಂಸದೆ ಹಾಗೂ ಮಾಜಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್,"ನೂತನ ಸಂಸತ್ ಭವನಕ್ಕೆ ಇಂದು ಕ್ರೀಡಾಪಟುಗಳನ್ನು ಕರೆಸಿರುವುದು ಸಂತಸ ತಂದಿದೆ. ಈ ಮಸೂದೆ ಅಂಗೀಕಾರವಾಗಲಿದೆ. ಪ್ರಮುಖ ಕ್ರೀಡಾಪಟುಗಳನ್ನು ಕರೆದಿರುವುದು ನಮಗೆ ಸಂತೋಷವಾಗಿದೆ. ಮಹಿಳಾ ಸಬಲೀಕರಣಕ್ಕೆ ಮಹಿಳಾ ಮೀಸಲಾತಿ ಮುಖ್ಯವಾಗಿದೆ." ಎಂದು ಹೇಳಿದರು.

ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ಕೂಡ ಮಹಿಳೆಯರ ಹೆಚ್ಚಿದ ಭಾಗವಹಿಸುವಿಕೆ ರಾಷ್ಟ್ರವನ್ನು ಮುನ್ನಡೆಯಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತಾರೆ. ರಾಣಿ ಹೊಸ ಸಂಸತ್ ಕಟ್ಟಡಕ್ಕೆ ಭೇಟಿ ನೀಡಿದರು ಮತ್ತು ಅವಕಾಶ ನೀಡಿದ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಪ್ರತಿ ಕ್ಷೇತ್ರದಲ್ಲೂ ಮಹಿಳೆಯರನ್ನು ಪ್ರೋತ್ಸಾಹಿಸುವಲ್ಲಿ ಪ್ರಧಾನಿ ಮೋದಿಯವರ ಪ್ರಯತ್ನಗಳನ್ನು ಎತ್ತಿ ತೋರಿಸಿದರು.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಂಗಳವಾರ ಹೊಸ ಸಂಸತ್ತಿನ ಸಂಕೀರ್ಣದಲ್ಲಿ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಹೊಸ ಮಸೂದೆ ನಾರಿ ಶಕ್ತಿ ವಂದನ್ ಅಧಿನಿಯಮ್ ಅನ್ನು ಮಂಡಿಸಿದರು. ಮಹಿಳಾ ಮೀಸಲಾತಿ ಮಸೂದೆಯಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ದೊರೆಯಲಿದೆ. (ಎಎನ್​ಐ)

ಇದನ್ನೂ ಓದಿ: ಲೋಕಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ.. 454 ಮತಗಳು ಪರ, 2 ಮತ ವಿರುದ್ಧ ಚಲಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.