ETV Bharat / sports

ಮೋದಿ ನಮ್ಮೊಂದಿಗೆ ಸಾಮಾನ್ಯರಂತೆ ನಡೆದುಕೊಂಡರು, ಅವರೊಂದಿಗಿನ ಸಂವಹನ ಖುಷಿಕೊಟ್ಟಿತು: ಪ್ರಜ್ಞಾನಂದ

author img

By ETV Bharat Karnataka Team

Published : Sep 4, 2023, 7:44 PM IST

Praggnanandhaa on meeting with PM Modi: ಚೆಸ್​ ವಿಶ್ವಕಪ್​ನಲ್ಲಿ ರನ್ನರ್​ ಅಪ್​ ಆದ ಪ್ರಜ್ಞಾನಂದ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

Praggnanandhaa
ಪ್ರಜ್ಞಾನಂದ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಫಿಡೆ ಚೆಸ್​ ವಿಶ್ವಕಪ್​ನಲ್ಲಿ ರನ್ನರ್​ ಅಪ್​ ಆದ ಭಾರತ ಯುವ ಚೆಸ್​ ಚತುರ ಪ್ರಜ್ಞಾನಂದ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಅಜೆರ್ಬೈಜಾನ್​ನ ಬಾಕುವಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ತವರಿಗೆ ಮರಳಿದ ಪ್ರಜ್ಞಾನಂದ ಮೊದಲು ತಮಿಳು ನಾಡಿನ ಮುಖ್ಯಮಂತ್ರಿಗಳನ್ನು ಭೇಟಿ ಆದರು. ನಂತರ ಪ್ರಧಾನಿ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರನ್ನು ಪೋಷಕರ ಸಮೇತ ಭೇಟಿ ಮಾಡಿದರು.

ಭಾರತದ ಗ್ರ್ಯಾಂಡ್​ ಮಾಸ್ಟರ್​ ವಿಶ್ವನಾಥನ್​ ಆನಂದ್​ ಅವರು ಭಾರತ ಮುಂದಿನ ದಿನಗಳಲ್ಲಿ ಚೆಸ್​ನ ಸುವರ್ಣ ಪೀಳಿಗೆಯನ್ನು ಕಾಣಲಿದೆ ಎಂದಿದ್ದರು. ಅದರಂತೆ ಇತ್ತೀಚೆಗೆ ಬಿಡುಗಡೆ ಆದ ಚೆಸ್​ ಶ್ರೇಯಾಂಕದಲ್ಲಿ ಯುವ ಚೆಸ್​ ಆಟಗಾರ ಗುಕೇಶ್ ವಿಶ್ವನಾಥ್​ ಆನಂದ್​ ಅವರನ್ನೇ ಹಿಂದಿಕ್ಕಿ ಭಾರತ ಅಗ್ರ ಚೆಸ್​ ರ್‍ಯಾಂಕಿಂಗ್​ ಆಟಗಾರ ಆಗಿ ಹೊರಹೊಮ್ಮಿದ್ದಾರೆ. ಪ್ರಜ್ಞಾನಂದ ಶ್ರೇಯಾಂಕದಲ್ಲಿ 19ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಚೆಸ್​ ವಿಶ್ವಕಪ್​ನಲ್ಲಿ ಭಾಗವಹಿಸಿದ ಯುವ ಪ್ರತಿಭೆ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಪ್ರಜ್ಞಾನಂದ ಅವರಿಗೆ ಪ್ರಧಾನಿ ಮೋದಿಯವರೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಪ್ರಶ್ನಿಸಲಾಯಿತು. "ಅವರು ನಮ್ಮೊಂದಿಗೆ ಸಾಮಾನ್ಯರಂತೆ ಮಾತನಾಡಿದರು. ಅವರು ನನ್ನ ತರಬೇತಿ ಮತ್ತು ನನ್ನ ಪಂದ್ಯಾವಳಿಯ ಬಗ್ಗೆ ಕೇಳಿದರು. ಪ್ರಧಾನಿ ಅವರನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಅವರು ನನ್ನ ಪೋಷಕರ ಬಗ್ಗೆಯೂ ಕೇಳಿದರು, ನಾನು ಅವರೊಂದಿಗೆ ಸಂವಹನ ನಡೆಸುವುದನ್ನು ನಿಜವಾಗಿಯೂ ಆನಂದಿಸಿದೆ. ಅವರು ನನಗೆ ಕೆಲವು ಸಲಹೆಗಳನ್ನು ನೀಡಿದರು ಎಂದು "ಚೆಸ್ ಗ್ರ್ಯಾಂಡ್ ಮಾಸ್ಟರ್ ಹೇಳಿದರು.

"ನಾವು ಇತ್ತೀಚೆಗೆ ಗ್ಲೋಬಲ್ ಚೆಸ್ ಲೀಗ್‌ನಲ್ಲಿ ಹೇಗೆ ಪ್ರದರ್ಶನ ನೀಡಿದ್ದೇವೆ ಎಂಬುದು ತುಂಬಾ ಸ್ಪೂರ್ತಿದಾಯಕವಾಗಿದೆ. ನಮ್ಮಲ್ಲಿ ಭಾರತದಲ್ಲಿ ಸಾಕಷ್ಟು ಪ್ರಬಲ ಆಟಗಾರರಿದ್ದಾರೆ. ಈವೆಂಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಬಹಳ ಮುಖ್ಯ. ನನಗೆ ಅದು ಮುಖ್ಯ ಗುರಿ ಎಂದಿದ್ದಾರೆ. ಸಾಮಾನ್ಯವಾಗಿ, ನಾನು ಇತರ ಕ್ರೀಡೆಗಳನ್ನು ಅನುಸರಿಸಲು ಪ್ರಯತ್ನಿಸುತ್ತೇನೆ. ಕ್ರಿಕೆಟ್ ನಾನು ಹೆಚ್ಚು ಇಷ್ಟ ಪಡುವ ಆಟಗಳಲ್ಲಿ ಒಂದು. ಭಾರತದ ಎಲ್ಲ ಆಟಗಾರರು ನನಗೆ ತುಂಬಾ ಇಷ್ಟ ಆಗುತ್ತಾರೆ" ಎಂದು ಪ್ರಜ್ಞಾನಂದ ಹೇಳಿದರು.

ಆಗಸ್ಟ್ 24 ರಂದು ವಿಶ್ವದ ನಂ 1 ಶ್ರೇಯಾಂಕಿತ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಅವರನ್ನು ಅಜೆರ್ಬೈಜಾನ್‌ನ ಬಾಕುದಲ್ಲಿ ನಡೆದ ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ ವಿಶ್ವಕಪ್‌ನ ಪ್ರಶಸ್ತಿ ಫೈನಲ್​ನಲ್ಲಿ ಸೋಲಿಸಿದರು. ಇದರಿಂದ ಪ್ರಜ್ಞಾನಂದ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು. ವಿಶ್ವಕಪ್​ನ ಫೈನಲ್​ಗೆ ಪ್ರವೇಶಿಸುವ ಮೂಲಕ 2024 ಏಪ್ರಿಲ್​ 2ರಿಂದ 25ರ ವರೆಗೆ ಕೆನಡಾದ ಟೊರಂಟೊದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್​ ಟೂರ್ನಿಗೆ ಆಯ್ಕೆ ಆಗಿದ್ದಾರೆ. ಈ ಟೂರ್ನಿಯನ್ನು ಆಡುತ್ತಿರುವ ಭಾರತದ ಎರಡನೇ ಪ್ಲೇಯರ್​ ಆಗಿದ್ದಾರೆ. ವಿಶ್ವನಾಥನ್​ ಆನಂದ್​ ಈ ಮೊದಲು ಕ್ಯಾಂಡಿಡೇಟ್ಸ್​ ಟೂರ್ನಿ ಆಡಿದ್ದರು. (ಎಎನ್​ಐ)

ಇದನ್ನೂ ಓದಿ: ಪಾಕಿಸ್ತಾನದಿಂದ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ನೋಡಲು ಡೈಹಾರ್ಡ್ ಫ್ಯಾನ್​ಗೆ ಬೇಸರ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.