ETV Bharat / sports

ಗುಡಿಸಲಿನಲ್ಲಿ ವಾಸ, 9 ವರ್ಷ ಪ್ಲಂಬರ್ ಆಗಿ​ ಕೆಲಸ.. ಅದೇ ಯುವಕನಿಗೆ ಸಿಕ್ತು ರಣಜಿ ತಂಡದಲ್ಲಿ ಚಾನ್ಸ್​!

author img

By

Published : Feb 14, 2022, 8:04 PM IST

Updated : Feb 15, 2022, 7:12 AM IST

ಅಂತರ್​ ಜಿಲ್ಲಾ ಟೂರ್ನಿಯಲ್ಲಿ ಆಡಿದ ಅವರು ಜೂನಿಯರ್​ ಹಂತದಲ್ಲಿ ಕ್ರಿಕೆಟ್​ ಆಡದೇ ನೇರವಾಗಿ 28 ಸದಸ್ಯರ ಸೀನಿಯರ್​ ತಂಡದ ಶಿಬಿರಕ್ಕೆ ಆಯ್ಕೆಯಾದರು. ಇವರ ಬೌಲಿಂಗ್ ಪ್ರದರ್ಶನವನ್ನು ಕಂಡ ಕೋಚ್​ಗಳು ಮತ್ತು ಆಯ್ಕೆಗಾರರು ರಣಜಿ ಟ್ರೋಫಿಗೆ ವೇಗದ ಬೌಲರ್​ ಆಗಿ ಆಯ್ಕೆ ಮಾಡಿದ್ದಾರೆ..

Odia youth incredible journey from plumber to Pace bowler
ಪ್ರಶಾಂತ್​ ರಾಣಾ ಒಡಿಶಾ ರಣಜಿ ತಂಡದ ವೇಗಿ

ನಯಾಗಡ್(ಒಡಿಶಾ)​: ಹೋರಾಟವಿಲ್ಲದೆ ಯಶಸ್ಸು ಅಸಾಧ್ಯ. ಕಠಿಣ ಪರಿಶ್ರಮ ಮನುಷ್ಯನಿಗೆ ಮುಂದೊಂದು ದಿನ ಯಶಸ್ಸನ್ನು ತಂದುಕೊಡುತ್ತದೆ. ಮನೋಬಲ ದೃಢವಾಗಿದ್ದರೆ ಯಾವುದೇ ಕೆಸಲವಾದರೂ ಅಸಾಧ್ಯವಲ್ಲ ಎನ್ನುವುದಕ್ಕೆ ಒಡಿಶಾದ ನಯಾಗಡ್​ ಜಿಲ್ಲೆಯ ಮಾದಾಪುರ ಗ್ರಾಮದ ಪ್ರಶಾಂತ್ ರಾಣಾ ಸಾಕ್ಷಿಯಾಗಿದ್ದಾರೆ.

ಈತನ ಯಶಸ್ವಿ ಕಥೆ ಸಾವಿರಾರು ಯುವಕರಿಗೆ ಮಾದರಿಯಾಗಿದೆ. ಕ್ರಿಕೆಟ್​ ಆಡಲು ತೆರಳಿದರೆ ಥಳಿಸುತ್ತಿದ್ದ ಅವರ ತಂದೆಯೇ ಇಂದು ಮೈದಾನದ ಹೊರಗೆ ನಿಂದು ಚೆಪ್ಪಾಳೆ ತಟ್ಟುತ್ತಾ ಹುರಿದುಂಬಿಸುತ್ತಿದ್ದಾರೆ.

ಒಡಿಶಾದ ಪ್ರಶಾಂತ್ ರಾಣಾ 9 ವರ್ಷಗಳ ಕಾಲ ಪ್ಲಂಬರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇದೇ ತಿಂಗಳಿಂದ ಆರಂಭವಾಗಲಿರುವ ರಣಜಿ ಟ್ರೋಫಿಯಲ್ಲಿ ವೇಗದ ಬೌಲರ್​ ಆಗಿ ತಮ್ಮ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ತನ್ನ ಹಳ್ಳಿಯ ರಸ್ತೆ, ಪುಟ್ಟ ಮೈದಾನದಲ್ಲಿ ಟೆನಿಸ್​ ಚೆಂಡಿನಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕ ಶೀಘ್ರದಲ್ಲೇ ಸ್ಟೇಡಿಯಂನಲ್ಲಿ ವಿಜೃಂಬಿಸಲಿದ್ದಾರೆ.

ಮಗನನ್ನ ಗದರಿಸುತ್ತಿದ್ದ ತಂದೆ: ಪ್ರಶಾಂತ್​ ನಯಾಗಡ್​ ಜಿಲ್ಲೆಯ ಮಾದಪುರ್​ ಗ್ರಾಮದಲ್ಲಿ ತಮ್ಮ ತಂದೆ ಮತ್ತು ತಾಯಿಯೊಡನೆ ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಬಡತನದ ಬೇಗೆಯಲ್ಲೇ ಬೆಳೆದ ಪ್ರಶಾಂತ್​ ಶಾಲೆಗೆ ಹೋಗುತ್ತಿದ್ದಾಗ ಕ್ರಿಕೆಟ್ ಆಡುತ್ತಿದ್ದರು. ಆದರೆ, ಓದುವುದನ್ನು ಬಿಟ್ಟು ಕ್ರಿಕೆಟ್ ಆಡುವುದನ್ನು ಕಂಡ ತಂದೆ ಸನಾತನ ರಾಣಾ ಮಗನನ್ನು ಗದರಿಸುತ್ತಿದ್ದರು. ಕೆಲವು ದಿನಗಳ ನಂತರ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರಿಂದ ಪ್ರಶಾಂತ್ ಊರನ್ನು ತ್ಯಜಿಸಿ ಸಿಲ್ವರ್ ಸಿಟಿ ಕಟಕ್​ಗೆ ಆಗಮಿಸಿದ್ದರು.

ಯುನಿಯನ್​ ಕ್ಲಬ್​​ನಲ್ಲಿ ಬೌಲಿಂಗ್ ಅಭ್ಯಾಸ : ಮೊದಲು ಕಟಕ್​ನಲ್ಲಿ ಪ್ಲಂಬರ್​ ಆಗಿ ಕೆಲಸವನ್ನು ಆರಂಭಿಸಿದ್ದರು. ಆದರೆ, ಕ್ರಿಕೆಟಿಗನಾಗುವ ಕನಸನ್ನು ಮಾತ್ರ ಅವರು ಬಿಟ್ಟಿರಲಿಲ್ಲ. ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ಲಂಬರ್​ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್​, ಅದೇ ಯುನಿಯನ್​ ಕ್ಲಬ್​​ನಲ್ಲಿ ಬೌಲಿಂಗ್ ಕೂಡ ಅಭ್ಯಾಸ ಮಾಡಲಾರಂಭಿಸಿದರು.

ಅಂತರ್​ ಜಿಲ್ಲಾ ಟೂರ್ನಿಯಲ್ಲಿ ಆಡಿದ ಅವರು ಜೂನಿಯರ್​ ಹಂತದಲ್ಲಿ ಕ್ರಿಕೆಟ್​ ಆಡದೇ ನೇರವಾಗಿ 28 ಸದಸ್ಯರ ಸೀನಿಯರ್​ ತಂಡದ ಶಿಬಿರಕ್ಕೆ ಆಯ್ಕೆಯಾದರು. ಇವರ ಬೌಲಿಂಗ್ ಪ್ರದರ್ಶನವನ್ನು ಕಂಡ ಕೋಚ್​ಗಳು ಮತ್ತು ಆಯ್ಕೆಗಾರರು ರಣಜಿ ಟ್ರೋಫಿಗೆ ವೇಗದ ಬೌಲರ್​ ಆಗಿ ಆಯ್ಕೆ ಮಾಡಿದ್ದಾರೆ.

ಕಠಿಣ ಶ್ರಮಕ್ಕೊಲಿದ ಯಶಸ್ಸು: ಪ್ರಶಾಂತ್​ ಕ್ಲಬ್​ನಲ್ಲಿ ತಂಡದ ಕೋಚ್​ಗಳು ಮತ್ತು ಆಟಗಾರರೊಂದಿಗೆ ನಿರಂತರ ಅಭ್ಯಾಸ ಮಾಡಲು ಶುರು ಮಾಡಿದರು. ಅವರ ಕಠಿಣ ಶ್ರಮ ಇಂದು ಅವರನ್ನು ಒಡಿಶಾ ತಂಡದ ಪ್ರಮುಖ ಆಟಗಾರನನ್ನಾಗಿ ರೂಪಿಸಿದೆ. ಯುನಿಯನ್​ ಕ್ಲಬ್​ ಕೋಚ್​ ಪ್ರಶಾಂತ್​ಗೆ ಕೇವಲ ತರಬೇತಿ ನೀಡಿದ್ದಲ್ಲದೆ, ಅವರಿಗೆ ಆರ್ಥಿಕ ನೆರವನ್ನು ನೀಡಿ ಬೆಂಬಲ ನೀಡಿದೆ.

ಇಂತಹ ಅತ್ಯುತ್ತಮ ಪ್ರತಿಭೆಯನ್ನು ತಯಾರು ಮಾಡಿ ರಾಜ್ಯ ತಂಡಕ್ಕೆ ನೀಡಿದ್ದಕ್ಕೆ ಒಡಿಶಾ ಕ್ರಿಕೆಟ್ ಅಸೋಸಿಯೇಷನ್​ ಯೂನಿಯನ್​ ಕ್ಲಬ್​ಗೆ ಧನ್ಯವಾದ ತಿಳಿಸಿದೆ. ಜೊತೆಗೆ ಒಸಿಎ ಕಾರ್ಯದರ್ಶಿ ಸಂಜಯ್​ ಬೆಹೆರಾ ಮುಂಬರುವ ದಿನಗಳಲ್ಲಿ ಪ್ರಶಾಂತ್ ರಾಜ್ಯ ಕ್ರಿಕೆಟ್​ ಮಂಡಳಿಯಿಂದ ಪ್ರಶಾಂತ್​ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಈಗಾಗಲೇ ತಿಳಿಸಿದ್ದಾರೆ.

ಕಡುಬಡತನದಲ್ಲಿ ಹುಟ್ಟಿ, ಜೀವನೋಪಾಯಕ್ಕಾಗಿ ನಗರ ಸೇರಿದ ಯುವಕ ಕಷ್ಟಪಟ್ಟು ದುಡಿಯುವುದರ ಜೊತೆಗೆ ಕಠಿಣ ಪರಿಶ್ರಮದಿಂದ ಕ್ರಿಕೆಟಿಗನಾಗುವ ಗುರಿಯನ್ನು ಇಡೇರಿಸಿಕೊಂಡಿರುವುದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.

ಇದನ್ನೂ ಓದಿ:ಭವಿಷ್ಯದ ತಾರೆ ಚೇತನ್​ ಸಕಾರಿಯಾರನ್ನ 4.2 ಕೋಟಿ ರೂ ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್​

Last Updated : Feb 15, 2022, 7:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.